ಧರ್ಮೇಂದ್ರ, ಮಮ್ಮುಟ್ಟಿ, ಮಾಧವನ್, ಅಲ್ಕಾ ಯಾಗ್ನಿಕ್‌ ಸೇರಿ ಹಲವರಿಗೆ ಇಂದು (ಮೇ 25) ಪದ್ಮ ಪ್ರಶಸ್ತಿ ಪ್ರದಾನ

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಇಂದು (ಮೇ 25) ಪ್ರದಾನ ಮಾಡಲಾಗುತ್ತದೆ. ಮಮ್ಮುಟ್ಟಿ, ಧರ್ಮೇಂದ್ರ, ಅಲ್ಕಾ ಯಾಗ್ನಿಕ್, ಆರ್. ಮಾಧವನ್ ಮುಂತಾದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಮನರಂಜನಾ ಕ್ಷೇತ್ರದಲ್ಲಿ ಈ ಬಾರಿ ಪದ್ಮ ಪ್ರಶಸ್ತಿಗೆ ಭಾಜನರಾದ ಪ್ರಮುಖರ ವಿವರ ಇಲ್ಲಿದೆ.

ಧರ್ಮೇಂದ್ರ, ಮಮ್ಮುಟ್ಟಿ, ಮಾಧವನ್, ಅಲ್ಕಾ ಯಾಗ್ನಿಕ್‌ ಸೇರಿ ಹಲವರಿಗೆ ಇಂದು (ಮೇ 25) ಪದ್ಮ ಪ್ರಶಸ್ತಿ ಪ್ರದಾನ
Dharmendra, R. Madhavan, Mammootty
Image Credit source: PTI

Updated on: May 25, 2026 | 3:51 PM

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ಪ್ರಶಸ್ತಿ 2026’ (Padma Awards 2026) ಪ್ರದಾನ ಸಮಾರಂಭವು ರಾಜಧಾನಿ ನವದೆಹಲಿಯಲ್ಲಿ ಇಂದು (ಮೇ 25) ಸಂಜೆ 5 ಗಂಟೆಗೆ ಅದ್ಧೂರಿಯಾಗಿ ಜರುಗಲಿದೆ. ಈ ಬಾರಿ ಚಿತ್ರರಂಗ, ಸಂಗೀತ, ರಂಗಭೂಮಿ ಮುಂತಾದ ಕ್ಷೇತ್ರದ ಹಲವು ಧೀಮಂತ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಹಾಗೂ 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.

ಹಿರಿಯ ನಟ ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ: ಹಿಂದಿ ಚಿತ್ರರಂಗದ ದಶಕಗಳ ಇತಿಹಾಸದಲ್ಲಿ ‘ಶೋಲೆ’ ರೀತಿಯ ಗಮನಾರ್ಹ ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರನ್ನು ರಂಜಿಸಿದ ಎವರ್‌ಗ್ರೀನ್ ಸೂಪರ್‌ಸ್ಟಾರ್ ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ ಈ ಗೌರವ ಸಲ್ಲಿಕೆ ಆಗುತ್ತಿದೆ.

ಮಮ್ಮುಟ್ಟಿ ಮತ್ತು ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ: ಮಲಯಾಳಂ ಚಿತ್ರರಂಗದ ಹೆಮ್ಮೆಯ ನಟ ಮಮ್ಮುಟ್ಟಿ ಅವರಿಗೆ ಚಿತ್ರರಂಗದಲ್ಲಿನ ಅವರ ಸುದೀರ್ಘ ಹಾಗೂ ಅತ್ಯುತ್ತಮ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಒಲಿದಿದೆ. ಇವರೊಂದಿಗೆ, 90 ಹಾಗೂ 2000ರ ದಶಕದಲ್ಲಿ ತಮ್ಮ ಮಧುರ ಧ್ವನಿಯ ಮೂಲಕ ಬಾಲಿವುಡ್‌ನಲ್ಲಿ ಅಸಂಖ್ಯಾತ ಸೂಪರ್‌ಹಿಟ್ ಗೀತೆಗಳನ್ನು ನೀಡಿದ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೂ ಪದ್ಮಭೂಷಣ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ; ಆ ಕ್ಷಣದ ವಿಡಿಯೋ ನೋಡಿ

ಆರ್. ಮಾಧವನ್ ಹಾಗೂ ಸತೀಶ್ ಶಾ ಅವರಿಗೆ ಪದ್ಮಶ್ರೀ: ‘ರೆಹನಾ ಹೈ ತೇರೆ ದಿಲ್ ಮೇ’, ‘3 ಇಡಿಯಟ್ಸ್’, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಮುಂತಾದ ಚಿತ್ರಗಳ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಆರ್. ಮಾಧವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಇದರೊಂದಿಗೆ, ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಹಾಗೂ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಅದ್ಭುತ ಹಾಸ್ಯದ ಮೂಲಕ ಮನೆಮಾತಾಗಿದ್ದ ದಿವಂಗತ ನಟ ಸತೀಶ್ ಶಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಸಮರ್ಪಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Mon, 25 May 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us