ರಾಜಕೀಯಕ್ಕೆ ಅಲ್ಪ ವಿರಾಮ, ಕ್ಯಾಮೆರಾ ಎದುರು ಹಾಜರಾದ ಪವನ್ ಕಲ್ಯಾಣ್
Pawan Kalan: ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್, ತಮ್ಮ ಬ್ಯುಸಿ ರಾಜಕೀಯ ಮತ್ತು ಆಡಳಿತದಿಂದ ಬಿಡುವು ಪಡೆದು ಮತ್ತೊಮ್ಮೆ ಕ್ಯಾಮೆರಾ ಮುಂದೆ ಹಾಜರಾಗಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣದಲ್ಲಿ ಪವನ್ ಕಲ್ಯಾಣ್ ಭಾಗಿ ಆಗಿದ್ದಾರೆ. ಈ ಬಾರಿ ಕೇವಲ ನಾಲ್ಕು ದಿನದ ಡೇಟ್ಸ್ ಅನ್ನು ಪವನ್ ಕಲ್ಯಾಣ್ ನೀಡಿದ್ದಾರೆ.

ನಟ ಪವನ್ ಕಲ್ಯಾಣ್ (Pawan Kalyan) ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಕಠಿಣ ಸಮಯವನ್ನು ಎದುರಿಸಿದ್ದಾರೆ. ರಾಜಕೀಯದಲ್ಲಿ ಸತತ ಬ್ಯುಸಿಯಾಗಿರುವ ನಟ ಪವನ್ ಕಲ್ಯಾಣ್, ಈ ಹಿಂದೆ ಒಪ್ಪಿಕೊಂಡಿದ್ದ ಅರ್ಧ ಚಿತ್ರೀಕರಣ ಮಾಡಿರುವ ಕೆಲ ಸಿನಿಮಾಗಳನ್ನು ಪೂರ್ಣಗೊಳಿಸಿ ಕೊಡಲೇ ಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜಕೀಯ, ಆಡಳಿತದ ನಡುವೆ ಅವರಿಗೆ ಬಿಡುವೇ ಸಿಕ್ಕಿರಲಿಲ್ಲ. ಅಂತೂ-ಇಂತೂ ಬಿಡುವು ಮಾಡಿಕೊಂಡು ಚಿತ್ರೀಕರಣ ಶುರು ಮಾಡಿದ್ದರು. ಅಷ್ಟರಲ್ಲೇ ಅವರ ಪುತ್ರ ವಿದೇಶದಲ್ಲಿ ಅಗ್ನಿ ಅವಘಡಕ್ಕೆ ಒಳಗಾದ. ಆದರೆ ಈಗ ಮತ್ತೆ ಪವನ್ ಕಲ್ಯಾಣ್ ಕ್ಯಾಮೆರಾ ಮುಂದೆ ಹಾಜರಾಗಿದ್ದಾರೆ.
ಅಗ್ನಿ ಅನಾಹುತ ಆಗುವ ಮುಂಚೆ ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ರಾಜಕೀಯದ ನಡುವೆ ಸಿನಿಮಾ ಚಿತ್ರೀಕರಣವನ್ನೂ ಸಹ ಮಾಡುತ್ತಿದ್ದರು. ಆದರೆ ಸಿಂಗಪುರ್ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಪುತ್ರನಿಗೆ ಗಾಯವಾದ ಕಾರಣ ಚಿತ್ರೀಕರಣ ನಿಲ್ಲಿಸಿ ಸಿಂಗಪುರಕ್ಕೆ ತೆರಳಿದ್ದರು. ಅಲ್ಲಿಂದ ಮರಳಿ ಬಂದ ಬಳಿಕವೂ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿರಲಿಲ್ಲ ಪವನ್ ಕಲ್ಯಾಣ್. ಆದರೆ ಈಗ ಮತ್ತೆ ಚಿತ್ರೀಕರಣ ಶುರು ಮಾಡಿದ್ದಾರೆ.
ಇದನ್ನೂ ಓದಿ:ತಪ್ಪಿತಸ್ಥ ಭಾವನೆಯಿಂದ ಹೊರ ಬರಲು ನಿರ್ಧರಿಸಿದ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಿದ್ದಾರೆ. ಕೇವಲ ನಾಲ್ಕು ದಿನಗಳ ಮಾತ್ರವೇ ಪವನ್ ಕಲ್ಯಾಣ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದ ಒಂದು ಹಾಡು ಹಾಗೂ ಕೆಲವು ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಉಳಿದಿದ್ದು ಆ ಭಾಗಗಳ ಚಿತ್ರೀಕರಣವನ್ನು ಈಗ ಮಾಡಲಾಗುತ್ತಿದೆ. ಜೊತೆಗೆ ಸಿನಿಮಾದ ಡಬ್ಬಿಂಗ್ ಕಾರ್ಯವನ್ನು ಸಹ ಈ ನಾಲ್ಕು ದಿನಗಳಲ್ಲಿಯೇ ಪವನ್ ಕಲ್ಯಾಣ್ ಪೂರ್ಣಗೊಳಿಸಲಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಏಪ್ರಿಲ್ನಲ್ಲಿಯೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಪವನ್ ಕಲ್ಯಾಣ್ ಬ್ಯುಸಿ ಶೆಡ್ಯೂಲ್ನ ಕಾರಣಕ್ಕೆ ಸಿನಿಮಾ ತಡವಾಗುತ್ತಲೇ ಬಂತು. ಈಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಮೇ 30ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಮೇ 30ಕ್ಕೆ ತೆರೆಗೆ ಬರಲಿದ್ದು ಈ ಬಗ್ಗೆ ಘೋಷಣೆ ಮಾಡಲಾಗಿದೆ. ಒಂದೊಮ್ಮೆ ‘ಹರಿ ಹರ ವೀರ ಮಲ್ಲು’ ಸಹ ಮೇ 30ಕ್ಕೆ ಬಿಡುಗಡೆ ಆಗುವುದಾದರೆ ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
‘ಹರಿ ಹರ ವೀರ ಮಲ್ಲು’ ಮಾತ್ರವೇ ಅಲ್ಲದೆ ‘ಓಜಿ’ ಹಾಗೂ ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾಗಳ ಚಿತ್ರೀಕರಣವನ್ನು ಸಹ ಪವನ್ ಕಲ್ಯಾಣ್ ಪೂರ್ಣಗೊಳಿಸಬೇಕಿದೆ. ಇವುಗಳಲ್ಲಿ ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾ ಪವನ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ‘ಓಜಿ’ ಸಿನಿಮಾದ ಚಿತ್ರೀಕರಣದಲ್ಲಿ ಇನ್ನಷ್ಟೆ ಪವನ್, ಭಾಗಿ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ