ಮದ್ಯದ ಬೆಲೆ ಇಳಿಸುವ ಭರವಸೆ ನೀಡಿದ ಪವನ್ ಕಲ್ಯಾಣ್: ಯುವಕರು ಫುಲ್ ಖುಷ್

|

Updated on: Jun 30, 2023 | 9:47 PM

Pawan Kalyan: ತಾವು ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶದಲ್ಲಿ ಮದ್ಯದ ಬೆಲೆ ಇಳಿಸುವುದಾಗಿ ನಟ, ರಾಜಕಾರಣಿ ಪವನ್ ಕಲ್ಯಾಣ್ ಭರವಸೆ ನೀಡಿದ್ದಾರೆ.

ಮದ್ಯದ ಬೆಲೆ ಇಳಿಸುವ ಭರವಸೆ ನೀಡಿದ ಪವನ್ ಕಲ್ಯಾಣ್: ಯುವಕರು ಫುಲ್ ಖುಷ್
ಪವನ್ ಕಲ್ಯಾಣ್
Follow us on

ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದು ನಟ, ಜನಸೇನಾ ರಾಜಕೀಯ ಪಕ್ಷ ಸಂಸ್ಥಾಪಕ ಪವನ್ ಕಲ್ಯಾಣ್ (Pawan Kalyan) ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಹಠತೊಟ್ಟು ಪ್ರಚಾರ, ರಾಜ್ಯ ಪ್ರವಾಸದಲ್ಲಿ ತೊಡಗಿದ್ದಾರೆ. ಕೆಲವು ದಿನಗಳ ಹಿಂದೆ ಅನ್ನವರಂನಲ್ಲಿ ಪ್ರಾರಂಭಿಸಿದ್ದ ವಾರಾಹಿ ಯಾತ್ರೆಯನ್ನು ಭೀಮವರಂನಲ್ಲಿ ಮುಕ್ತಾಯ ಮಾಡಿದ ಪವನ್ ಕಲ್ಯಾಣ್ ಆಡಳಿತ ಪಕ್ಷ ವೈಸಿಪಿ ವಿರುದ್ಧ ಟೀಕಾ ಪ್ರಹಾರ ಮಾಡಿರುವ ಜೊತೆಗೆ ಕೆಲವು ಭರವಸೆಗಳನ್ನೂ ಸಹ ನೀಡಿದ್ದು, ಮದ್ಯದ (Liquor) ಬೆಲೆ ಇಳಿಸುವುದು ಅದರಲ್ಲಿ ಒಂದು.

ಭೀಮವರಂನಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ”ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬರುವ ಮುನ್ನ ಸಂಪೂರ್ಣ ಮದ್ಯ ನಿಷೇಧ ಮಾಡುವುದಾಗಿ ಹೇಳಿದ್ದರು. ಆದರೆ ಹೇಳಿದಂತೆ ನಡೆದುಕೊಳ್ಳಲಿಲ್ಲ ಅದರ ಬದಲಾಗಿ ಯಾವುದ್ಯಾವುದೋ ಬ್ರ್ಯಾಂಡ್​ಗಳನ್ನು ಬಿಟ್ಟು ಬಡವರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ. ಮಾತ್ರವಲ್ಲದೆ ಈಗಿರುವ ಮದ್ಯದ ಮೇಲೆ ಭಾರಿ ತೆರಿಗೆ ವಿಧಿಸಿ, ದರಗಳನ್ನು ಹೆಚ್ಚು ಮಾಡಿ ಬಡ ಜನರು, ಶ್ರಮಿಕ ವರ್ಗ ಕಳ್ಳಭಟ್ಟಿ ಕುಡಿಯುವಂತೆ ಪ್ರೇರೇಪಿಸಿದ್ದಾರೆ” ಎಂದಿದ್ದಾರೆ.

”ಬೀರಾ ಎನ್ನುವ ಬಿಯರ್ ಬ್ರ್ಯಾಂಡ್​ಗೆ ಬೇರೆ ದರಪಟ್ಟಿ ಅಂಟಿಸಿ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ನಾನು ಒಪ್ಪಿಕೊಳ್ಳುತ್ತೇನೆ ಮದ್ಯ ನಿಷೇಧ ಸುಲಭವಲ್ಲ, ಅದರಿಂದ ರಾಜ್ಯಕ್ಕೂ ಆರ್ಥಿಕ ಹೊಡೆತ ಬೀಳುತ್ತದೆ. ಆದರೆ ಒಂದೊಮ್ಮೆ ನಾವು ಅಧಿಕಾರಕ್ಕೆ ಬಂದರೆ ಏರಿರುವ ಮದ್ಯದ ಬೆಲೆಯನ್ನು ಇಳಿಸುತ್ತೇವೆ. ಜೊತೆಗೆ ಒಂದೊಮ್ಮೆ ಯಾವುದಾದರೂ ಪ್ರದೇಶದಲ್ಲಿ ಮಹಿಳೆಯರು ಮದ್ಯ ನಿಷೇಧಕ್ಕೆ ಆಗ್ರಹಿಸಿದರೆ ಆ ಪ್ರದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುತ್ತೇವೆ” ಎಂದಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?

ದೇಶದಲ್ಲಿ ಅತಿ ಹೆಚ್ಚು ಬೆಲೆಗೆ ಮದ್ಯ ಮಾರುವ ರಾಜ್ಯಗಳಲ್ಲಿ ಆಂಧ್ರ ಪ್ರದೇಶವೂ ಒಂದು. ಮದ್ಯದ ಮೇಲೆ ಭಾರಿ ತೆರಿಗೆಯನ್ನು ಆಂಧ್ರ ಪ್ರದೇಶದಲ್ಲಿ ವಿಧಿಸಲಾಗಿದೆ. ಮಾತ್ರವಲ್ಲದೆ ರಾಜ್ಯದ ಡಿಸ್ಟಿಲರಿ, ಬ್ರೂವರಿಗಳು ಸರ್ಕಾರದ ಅಧೀನದಲ್ಲಿದ್ದು ಮಾಲೀಕರಿಗೆ ಕೇವಲ ಲೀಜ್ ಹಣವನ್ನು ಮಾತ್ರವೇ ನೀಡಿ ವಶೀಲಿಬಾಜಿ ಮಾಡಿ ಲೈಸೆನ್ಸ್ ಪಡೆದ ಕೆಲವರು ಆ ಡಿಸ್ಟಿಲರಿ, ಬ್ರೂವರಿಗಳಲ್ಲಿ ತಮ್ಮದೇ ಹೊಸ ಬ್ರ್ಯಾಂಡ್​ಗಳ ಮಧ್ಯವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ವಿಪಕ್ಷಗಳು ಆರೋಪಿಸಿರುವಂತೆ ಸರ್ಕಾರವೇ ಕಳಪೆ ಮದ್ಯವನ್ನು ಜನರಿಗೆ ಕುಡಿಸುತ್ತಿದ್ದು, ತಮ್ಮದೇ ಮದ್ಯವನ್ನು ಮಾರಾಟ ಮಾಡುವಂತೆ ಮದ್ಯದ ಅಂಗಡಿಗಳಿಗೆ ನಿರ್ದೇಶನ ನೀಡಿವೆಯಂತೆ.

ಇನ್ನು ಪವನ್ ಕಲ್ಯಾಣ್, ಈ ಬಾರಿ ತಮ್ಮ ಜನಸೇನಾ ಪಕ್ಷವನ್ನು ಹೇಗಾದರೂ ಮಾಡಿ ಅಧಿಕಾರಕ್ಕೆ ತರಬೇಕೆಂಬ ಅತ್ಯುತ್ಸಾಹದಲ್ಲಿ ಜೋರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಪಕ್ಷದೊಟ್ಟಿಗೆ ಕೈಜೋಡಿಸಿದ್ದಾರೆ. ಚುನಾವಣೆಯಲ್ಲಿ ಪವನ್​ರ ಜನಸೇನಾ ಹಾಗೂ ಟಿಡಿಪಿ ಪಕ್ಷಗಳು ಸೀಟು ಹಂಚಿಕೆ ಆಧಾರದಲ್ಲಿ ಚುನಾವಣೆಗೆ ಹೋಗಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಸ್ಪಷ್ಟನೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ