ಪವನ್ ಕಲ್ಯಾಣ್ ಹೈಡ್ರಾಮಾ, ಅರ್ಧರಾತ್ರಿಯಲ್ಲಿ ರಸ್ತೆ ಮೇಲೆ ಮಲಗಿದ ಪವನ್ ಅನ್ನು ಹೊತ್ತೊಯ್ದ ಪೊಲೀಸರು

|

Updated on: Sep 10, 2023 | 4:42 PM

Pawan Kalyan: ಹಗರಣವೊಂದರಲ್ಲಿ ಬಂಧನಕ್ಕೆ ಒಳಗಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಆಗುವ ಉದ್ದೇಶದಿಂದ ತೆರಳುತ್ತಿದ್ದ ನಟ ಪವನ್ ಕಲ್ಯಾಣ್​ರಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಪೊಲೀಸರ ಕ್ರಮ ವಿರೋಧಿಸಿ ರಸ್ತೆಯಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದ ಪವನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪವನ್ ಕಲ್ಯಾಣ್ ಹೈಡ್ರಾಮಾ, ಅರ್ಧರಾತ್ರಿಯಲ್ಲಿ ರಸ್ತೆ ಮೇಲೆ ಮಲಗಿದ ಪವನ್ ಅನ್ನು ಹೊತ್ತೊಯ್ದ ಪೊಲೀಸರು
ಪವನ್ ಕಲ್ಯಾಣ್
Follow us on

ಆಂಧ್ರ ಪ್ರದೇಶದಲ್ಲಿ (Andhra Pradesh) ವಿಧಾನಸಭೆ ಚುನಾವಣೆ ಸನಿಹದಲ್ಲಿದೆ. ಈ ನಡುವೆ ಹಲವು ರಾಜಕೀಯ ಘಟನೆಗಳು ಸಹ ನಡೆಯುತ್ತಿವೆ. ಸೆಪ್ಟೆಂಬರ್ 9 ರಂದು ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಸ್ಕಿಲ್ ಡೆವೆಲೆಪ್​ಮೆಂಟ್ ಯೋಜನೆ ಅವ್ಯವಹಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ಚಂದ್ರಬಾಬು ನಾಯ್ಡು ಬಂಧನಕ್ಕೆ ಟಿಡಿಪಿ ನಾಯಕರು, ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ, ಬಂಧನದಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಭೇಟಿಗೆ ಯತ್ನಿಸಿದ ಪವನ್ ಕಲ್ಯಾಣ್ (Pawan Kalyan) ಅನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 9ರ ನಸುಕಿನಲ್ಲಿ ಆಂಧ್ರ ಪ್ರದೇಶ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ವಿಶೇಷ ತನಿಖಾ ತಂಡವು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದೆ. ವಿಜಯವಾಡನಲ್ಲಿ ಇರಿಸಲಾಗಿದ್ದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಆಗಲು ಆಗಮಿಸುತ್ತಿದ್ದ ನಟ, ರಾಜಕಾರಣಿ ಪವನ್ ಕಲ್ಯಾಣ್ ಅನ್ನು ಪೊಲೀಸರು ತಡೆದಿದ್ದಲ್ಲದೆ ವಶಕ್ಕೆ ಸಹ ಪಡೆದಿದ್ದಾರೆ.

ಹೈದರಾಬಾದ್​ನಲ್ಲಿ ಪವನ್ ಕಲ್ಯಾಣ್, ಅಲ್ಲಿಂದ ವಿಶೇಷ ವಿಮಾನದಲ್ಲಿ ವಿಜಯವಾಡಕ್ಕೆ ಬರಲು ಮುಂದಾದರು. ಆದರೆ ಪೊಲೀಸರು ವಿಶೇಷ ವಿಮಾನ ಹಾರಾಟವನ್ನು ರದ್ದು ಮಾಡಿದರು. ಅದಾದ ಬಳಿಕ ರಸ್ತೆ ಮಾರ್ಗವಾಗಿ ಹೈದರಾಬಾದ್​ನಿಂದ ವಿಜಯವಾಡಕ್ಕೆ ಪವನ್ ಕಲ್ಯಾಣ್ ಪ್ರಯಾಣ ಬೆಳೆಸಿದರು. ಭಾರಿ ಸಂಖ್ಯೆಯ ಬೆಂಬಲಿಗರೊಟ್ಟಿಗೆ ಪವನ್ ಕಲ್ಯಾನ್ ವಿಜಯವಾಡದ ಕಡೆಗೆ ಆಗಮಿಸುತ್ತಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ಜನ್ಮದಿನ: ಸ್ಟಾರ್ ನಟನ ಒಟ್ಟೂ ಆಸ್ತಿ, ಕಾರ್ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ

ಪವನ್ ಅವರನ್ನು ಎನ್​ಟಿಆರ್ ಜಿಲ್ಲೆಯ ಚೆಕ್​ಪೋಸ್ಟ್​ ಬಳಿ ತಡೆದ ಪೊಲೀಸರು ಪವನ್ ಕಲ್ಯಾಣ್ ಅವರ ವಾಹನಗಳನ್ನು ಮುಂದಕ್ಕೆ ಚಲಿಸಲು ಬಿಡಲಿಲ್ಲ. ಕೊನೆಗೆ ಪವನ್ ಕಲ್ಯಾಣ್ ವಾಹನದಿಂದ ಇಳಿದು ನಡೆದುಕೊಂಡೆ ವಿಜಯವಾಡ ತಲುಪುವುದಾಗಿ ಪಾದಯಾತ್ರೆ ಪ್ರಾರಂಭಿಸಿದರು. ಆದರೆ ಅದಕ್ಕೂ ಪೊಲೀಸರು ಅಡ್ಡಿ ಪಡಿಸಿದಾಗ ಹೈವೇನಲ್ಲಿಯೇ ಪವನ್ ಕಲ್ಯಾಣ್ ಮಲಗಿಬಿಟ್ಟರು. ಪೊಲೀಸರು ಪವನ್ ಕಲ್ಯಾಣ್ ಮನವೊಲಿಸಲು ಪ್ರಯತ್ನಿಸಿದರಾದರು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪವನ್ ಕಲ್ಯಾಣ್ ಅನ್ನು ಪೊಲೀಸರು ವಶಕ್ಕೆ ಪಡೆದರು.

”ನಾವು ಪವನ್ ಕಲ್ಯಾಣ್ ಹಾಗೂ ಮನೋಹರ್ ಅವರನ್ನು ವಶಕ್ಕೆ ಪಡೆದಿದ್ದೇವೆ. ಅವರನ್ನು ವಿಜಯವಾಡಕ್ಕೆ ಕರೆದೊಯ್ಯುತ್ತಿದ್ದೇವೆ. ಇದು ಪ್ರಿವೆಂಟಿವ್ ಬಂಧನ ಮಾತ್ರವೇ ಆಗಿದೆ. ಇವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ನಿನ್ನೆಯೇ ಬಂಧನಕ್ಕೆ ಒಳಗಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ