
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಹೊಸ ಹೇಳಿಕೆಯೊಂದು ದಕ್ಷಿಣ ಭಾರತದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ‘ಹಿಂದಿ ಹೇರಿಕೆ’ಯನ್ನು ವಿರೋಧಿಸುತ್ತಿದ್ದ ಪವನ್, ಈಗ ಇದ್ದಕ್ಕಿದ್ದಂತೆ ಹಿಂದಿ ಭಾಷೆಯ ಪರವಾಗಿ ಬ್ಯಾಟ್ ಬೀಸಿರುವುದು ಪ್ರಾದೇಶಿಕ ಭಾಷಾ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದ, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತೆಲುಗು ಬಿಟ್ಟು ಹಿಂದಿಯಲ್ಲಿ ಭಾಷಣ ಮಾಡಲು ಆರಂಭಿಸಿದರು. ಇದಕ್ಕೆ ಕಾರಣ ನೀಡಿದ ಅವರು, ‘ನಾನು ಹಿಂದಿಯಲ್ಲಿ ಏಕೆ ಮಾತನಾಡುತ್ತಿದ್ದೇನೆ ಎಂದರೆ, ನಾವೆಲ್ಲರೂ ಗೌರವಿಸುವ, ಆದರಿಸುವ ಭಾಷೆ ಅದು. ನಮ್ಮ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ನಮ್ಮ ಭಾಷೆ, ರಾಜಭಾಷೆ ಹಿಂದಿ. ನಮ್ಮ ಭಾಷೆಗಳು ಭಿನ್ನವಾಗಿದ್ದರೂ, ನಮ್ಮ ಭಾವನೆ ಹಾಗೂ ಭಾರತೀಯತೆ ಒಂದೇ’ ಎಂದು ಪ್ರತಿಪಾದಿಸಿದರು.
కుల మత రాజకీయాలు అయిపోయాయి ఇప్పుడు భాష రాజకీయం మొదలెట్టాడు 😭💦 pic.twitter.com/8JAtBdp6aa
— 𝐑𝐚𝐠𝐮𝐥𝐮𝐭𝐮𝐧𝐧𝐚 𝐘𝐮𝐯𝐚𝐭𝐡𝐚𝐫𝐚𝐦 (@KarnaReddy4512) July 2, 2026
ರಾಜಕೀಯಕ್ಕೆ ಬರುವ ಮುನ್ನ ಹಾಗೂ ಆರಂಭದ ದಿನಗಳಲ್ಲಿ ಪವನ್ ಕಲ್ಯಾಣ್ ದಕ್ಷಿಣ ಭಾರತದ ಭಾಷೆಗಳ ಮೇಲಿನ ಹಿಂದಿ ಹೇರಿಕೆಯನ್ನು ಬಲವಾಗಿ ಖಂಡಿಸುತ್ತಿದ್ದರು. ‘ಉತ್ತರ ಭಾರತದ ನಾಯಕರು ದಕ್ಷಿಣದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಬಾರದು. ನಮಗೆ ನಮ್ಮದೇ ಆದ ಪ್ರಾದೇಶಿಕ ಅಸ್ಮಿತೆ ಇದೆ. ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲಾಗುತ್ತದೆ, ಅದೇ ರೀತಿ ಹಿಂದಿ ಭಾಷೆಯ ಸಿನಿಮಾಗಳನ್ನು ತಮಿಳಿಗೆ ಡಬ್ ಮಾಡಲಾಗುತ್ತದೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದರು. ಆದರೆ, ಈಗ ಹಿಂದಿಯನ್ನು ರಾಜಭಾಷೆ ಎಂದು ಹೊಗಳುವ ಮೂಲಕ ತಮ್ಮ ಹಳೆಯ ನಿಲುವಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್
ಪವನ್ ಕಲ್ಯಾಣ್ ಅವರ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪ್ರಾದೇಶಿಕ ಭಾಷಾ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತಕ್ಕೆ ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರಭಾಷೆ ಇಲ್ಲ. ಸಂವಿಧಾನದ ಪ್ರಕಾರ ಎಲ್ಲವೂ ಅಧಿಕೃತ ಭಾಷೆಗಳೇ ಆಗಿರುವಾಗ ಪವನ್ ಕಲ್ಯಾಣ್ ಹಿಂದಿಯ ಪರ ನಿಲುವು ತೋರಿಸುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.