
ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಇನ್ನೂ ಹಲವರು ಟ್ವೀಟ್ ಮಾಡಿ ಶೀಘ್ರ ಗುಣಮುಖವಾಗುವಂತೆ ಕೋರಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಜನಸೇನಾ ಪಕ್ಷದ ಸಭೆಯಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ವಿವರಿಸಿದರು. ‘ಕೋವಿಡ್ ಸಮಯದಲ್ಲಿ ನನಗೆ ಶ್ವಾಸಕೋಶದ ಸೋಂಕು ಆಗಿತ್ತು. ಅದು ಪೂರ್ಣವಾಗಿ ಗುಣವಾಗಿರಲಿಲ್ಲ. ಅದರ ಜೊತೆಗೆ ಚುನಾವಣೆಗೆ ಮುಂಚೆ ಸುಮಾರು ಒಂದೂವರೆ ವರ್ಷದ ಕಾಲ ದೂಳಿನಲ್ಲಿ ಓಡಾಟ, ವಿಶ್ರಾಂತಿ ಇಲ್ಲದ ಪ್ರಚಾರ ಇನ್ನಿತರೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿದ್ದವು’ ಎಂದರು.
‘ದೂಳಿನಲ್ಲಿ ಸಾಕಷ್ಟು ತಿರುಗಿ ಸೈನಸ್ ನಲ್ಲಿ ದೂಳು ಜಮೆಯಾಗಿ ಅಲ್ಲಿ ಗಟ್ಟಿಯಾಗಿಬಿಟ್ಟಿತ್ತು. ಇದರಿಂದ ಎಡಗಣ್ಣಿನ ಪಕ್ಕ ಪದೇ ಪದೇ ಊತ ಬರುತ್ತಿತ್ತು. ಒಂದು ಹಂತದಲ್ಲಂತೂ ಕಣ್ಣಿನ ದೃಷ್ಟಿ ಮಂದವಾಗಿತ್ತು, ಹಾಗೂ ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಲೇ ಇರಲಿಲ್ಲ. ಇದರ ಜೊತೆಗೆ ದೇಹದ ಕೆಲವೆಡೆ ಮಾಂಸಖಂಡಗಳು ಹರಿದಿವೆ, ಕೆಲ ಮೂಳೆಗಳಲ್ಲಿ ಬಿರುಕು ಮೂಡಿದೆ ಎಂಬುದು ಸಹ ಗೊತ್ತಾಯ್ತು’ ಎಂದಿದ್ದಾರೆ ಪವನ್.
ಇದನ್ನೂ ಓದಿ:ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್
‘ನಾನು ಹೋದಲ್ಲೆಲ್ಲ ಅಭಿಮಾನಿಗಳು ಕೈ ಕುಲುಕುವುದು, ಕೈ ಕೊಟ್ಟರೆ ಎಳೆಯುವುದು ಮಾಡುತ್ತಾರೆ ಅದು ಅವರ ಪ್ರೀತಿ, ಆದರೆ ಅದರಿಂದ ನನಗೆ ಎರಡೂ ಭುಜಗಳಲ್ಲಿ ಮಾಂಸಖಂಡಗಳು ತುಸು ಹರಿದಿದ್ದು, ಮೂಳೆಗಳಲ್ಲಿ ಸಣ್ಣ ಬಿರುಕುಗಳು ಮೂಡಿವೆ. ಆದರೆ ಜೊತೆಗೆ ಕೆಲವು ಭಾಗಗಳಲ್ಲಿ ಅಸಹನೀಯ ನೋವು ಸಹ ಇತ್ತು. ಆದರೆ ನಾನು ಮೊದಲಿನಿಂದಲೂ ಮಾರ್ಷಲ್ ಆರ್ಟ್ಸ್ ತರಬೇತಿ, ವ್ಯಾಯಾಮಗಳನ್ನು ಮಾಡುತ್ತಿದ್ದರಿಂದ ದೇಹ ತಡೆದುಕೊಂಡಿದೆ’ ಎಂದು ಪವನ್ ಕಲ್ಯಾಣ್ ಹೇಳಿದರು.
ವೈದ್ಯರ ಹಾಗಾಗಿ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ, ಚಿಕಿತ್ಸೆಗೆ ಒಳಗಾದೆ. ಈಗ ಸುಮಾರು ಒಂದು ತಿಂಗಳ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಜನರ ಪ್ರೀತಿಯಿಂದ ಸಮಸ್ಯೆ ಆದರೆ ನನಗೆ ನೋವೆನಿಸುವುದಿಲ್ಲ ಏಕೆಂದರೆ ಆ ನೋವನ್ನು ಹೋಗಲಾಡಿಸುವುದು ಸಹ ಜನರೇ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆರೋಗ್ಯ ಈಗ ಸಾಕಷ್ಟು ಸುಧಾರಿಸಿದ್ದು, ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯರಾಗಿರುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ