ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

| Updated By: ಮದನ್​ ಕುಮಾರ್​

Updated on: Feb 25, 2022 | 10:09 AM

ಕದ್ದು ತಂದ ಮೊಸರನ್ನು ‘ವಲಿಮೈ’ ನಿರ್ಮಾಪಕ ಬೋನಿ ಕಪೂರ್​ ಅವರ ಕಾರಿನ ಮೇಲೆ ಸುರಿಯಲಾಗಿದೆ. ಅಜಿತ್​ ಅಭಿಮಾನಿಗಳು ಈ ಎಡವಟ್ಟು ಮಾಡಿದ್ದಾರೆ.

ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ
ಬೋನಿ ಕಪೂರ್​ ಕಾರು, ಅಜಿತ್​ ಕುಮಾರ್​
Follow us on

ದಕ್ಷಿಣ ಭಾರತದಲ್ಲಿ ಅಭಿಮಾನಿಗಳು ಸ್ಟಾರ್​ ನಟರನ್ನು ಯಾವ ರೀತಿ ಆರಾಧಿಸುತ್ತಾರೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಯಾವುದೇ ಸ್ಟಾರ್​ ನಟನ ಸಿನಿಮಾ ರಿಲೀಸ್​ ಆದರೂ ಚಿತ್ರಮಂದಿರದ ಮುಂದೆ ಫ್ಯಾನ್ಸ್​ ಹಬ್ಬ ಮಾಡುತ್ತಾರೆ. ಹೀರೋ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಆದರೆ ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ ಮಾಡಿದ್ದರ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಈಗ ಅದೂ ಕೂಡ ನಡೆದುಹೋಗಿದೆ. ಹೌದು, ಕಾಲಿವುಡ್​ ಖ್ಯಾತ ನಟ ಅಜಿತ್​ ಕುಮಾರ್ (Ajith Kumar)​ ಅವರ ಅಭಿಮಾನಿಗಳು ಇಂಥ ಕೆಲಸ ಮಾಡಿದ್ದಾರೆ. ಈ ಸಿನಿಮಾಗೆ ಬಾಲಿವುಡ್​ನ ಜನಪ್ರಿಯ ನಿರ್ಮಾಪಕ ಬೋನಿ ಕಪೂರ್​ ಅವರು ಬಂಡವಾಳ ಹೂಡಿದ್ದಾರೆ. ಗುರುವಾರ (ಫೆ.24) ‘ವಲಿಮೈ’ (Valimai Movie) ಸಿನಿಮಾ ಬಿಡುಗಡೆ ಆಗಿದೆ. ಜನರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಬಂದಿದ್ದ ಬೋನಿ ಕಪೂರ್​ (Boney Kapoor) ಅವರ ಕಾರಿನ ಮೇಲೆ ಅಭಿಮಾನಿಗಳು ಮೊಸರಿನ ಅಭಿಷೇಕ ಮಾಡಿದ್ದಾರೆ. ಇದರಿಂದ ಐಷಾರಾಮಿ ಕಾರಿನ ಸ್ಥಿತಿ ಕುಲಗೆಟ್ಟು ಹೋಗಿದೆ. ಸದ್ಯ ಅದರ ವಿಡಿಯೋ ವೈರಲ್​ ಆಗುತ್ತಿದೆ. ಇನ್ನೂ ಎಡವಟ್ಟಿನ ಸಂಗತಿ ಏನೆಂದರೆ, ಈ ಮೊಸರನ್ನು ಅಭಿಮಾನಿಗಳು ಯಾವುದೋ ಅಂಗಡಿಯಿಂದ ಕದ್ದು ತಂದಿದ್ದು ಎಂಬ ಮಾಹಿತಿ ಕೂಡ ಕೇಳಿಬಂದಿದೆ!

ಬಹಳ ತಿಂಗಳಿಂದಲೂ ‘ವಲಿಮೈ’ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಪದೇಪದೇ ರಿಲೀಸ್​ ಡೇಟ್​ ಬದಲಾಗುತ್ತಲೇ ಇತ್ತು. ಕೊನೆಗೂ ಫೆ.24ರಂದು ಸಿನಿಮಾ ಬಿಡುಗಡೆ ಆಯಿತು. ಸ್ಟಾರ್​ ನಟರ ಸಿನಿಮಾಗಳು ಬಿಡುಗಡೆ ಆದಾಗ ಅವರ ಕಟೌಟ್​ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಾರೆ. ಅಜಿತ್​ ಫ್ಯಾನ್ಸ್​ ಕೂಡ ಅದೇ ಪ್ಲ್ಯಾನ್​ ಹಾಕಿಕೊಂಡಿದ್ದರು. ಆದರೆ ದುಡ್ಡು ಕೊಟ್ಟು ಹಾಲು ಖರೀದಿಸುವ ಬದಲು ಯಾವುದೋ ಅಂಗಡಿಯಲ್ಲಿ ಕಳ್ಳತನ ಮಾಡಿ ತಂದಿದ್ದಾರೆ. ನಗೆಪಾಟಲಿನ ಸಂಗತಿ ಏನೆಂದರೆ, ಚಿತ್ರಮಂದಿರದ ಬಳಿ ಬಂದು ಹಾಲಿನ ಪಾಕೆಟ್​ ಓಪನ್​ ಮಾಡಿದಾಗಲೇ ಒಂದು ಎಡವಟ್ಟು ಆಗಿರುವುದು ಅಭಿಮಾನಿಗಳ ಗಮನಕ್ಕೆ ಬಂತು. ಹಾಲಿನ ಬದಲಾಗಿ ಅವರು ಮೊಸರಿನ ಪಾಕೆಟ್​ಗಳನ್ನು ಕದ್ದು ತಂದಿದ್ದರು!

ಕದ್ದು ತಂದ ಮೊಸರನ್ನು ನಿರ್ಮಾಪಕ ಬೋನಿ ಕಪೂರ್​ ಅವರ ಕಾರಿನ ಮೇಲೆ ಸುರಿಯಲಾಗಿದೆ. ಇದರ ಜೊತೆಗೆ ಒಂದು ಭಯಾನಕ ಘಟನೆ ಕೂಡ ನಡೆದಿದೆ. ಕೊಯಂಬತ್ತೂರಿನಲ್ಲಿ ಅಜಿತ್​ ಅಭಿಮಾನಿಗಳು ‘ವಲಿಮೈ’ ಸಿನಿಮಾವನ್ನು ನೋಡಲು ಫೆ.24ರ ಮುಂಜಾನೆಯೇ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಆ ಸಂದರ್ಭದಲ್ಲಿ ಅವರ ಮೇಲೆ ಯಾರೋ ಕಿಡಿಗೇಡಿಗಳು ಪೆಟ್ರೋಲ್​ ಬಾಂಬ್​ ಎಸೆದಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗುರುವಾರ ಬಿಡುಗಡೆ ಆಗಿರುವ ‘ವಲಿಮೈ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಜಿತ್​ ನಟಿಸಿದ್ದಾರೆ. ಹುಮಾ ಖುರೇಶಿ, ಕಾರ್ತಿಕೇಯ ಮುಂತಾದವರು ಕೂಡ ಅಭಿನಯಿಸಿದ್ದಾರೆ. ಎಚ್​. ವಿನೋದ್​ ಅವರು ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಯುವನ್​ ಶಂಕರ್​ ರಾಜಾ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಆ್ಯಕ್ಷನ್​ ದೃಶ್ಯಗಳನ್ನು ಫ್ಯಾನ್ಸ್​ ಇಷ್ಪಟ್ಟಿದ್ದಾರೆ.

ಇದನ್ನೂ ಓದಿ:

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

‘ಮೊದಲ ಪ್ಯಾನ್​ ಇಂಡಿಯಾ ಚಿತ್ರ ನಮ್ಮ ಕನ್ನಡದ್ದು’: ದಶಕಗಳ ಹಿಂದಿನ ಮಾಹಿತಿ ತಿಳಿಸಿದ ಎಸ್​. ನಾರಾಯಣ್​