ಮತ್ತೆ ರಾಮಾಯಣ ಆಧರಿಸಿದ ಸಿನಿಮಾದಲ್ಲಿ ಪ್ರಭಾಸ್, ಆದರೆ ಈ ಬಾರಿ ರಾಮನಲ್ಲ

|

Updated on: Oct 01, 2024 | 11:18 AM

ಪ್ರಭಾಸ್ ನಟನೆಯ ರಾಮಾಯಣ ಕತೆ ಆಧರಿಸಿದ ‘ಆದಿಪುರುಷ್’ ಸಿನಿಮಾ ಸೋಲು ಕಂಡಿತ್ತು. ಈ ಸಿನಿಮಾದ ಬಳಿಕ ಪ್ರಭಾಸ್ ಯಾವುದೇ ಪೌರಾಣಿಕ ಕತೆಯುಳ್ಳ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ಮತ್ತೆ ರಾಮಾಯಣ ಕತೆ ಆಧರಿಸಿದ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ಮತ್ತೆ ರಾಮಾಯಣ ಆಧರಿಸಿದ ಸಿನಿಮಾದಲ್ಲಿ ಪ್ರಭಾಸ್, ಆದರೆ ಈ ಬಾರಿ ರಾಮನಲ್ಲ
Follow us on

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ರಾಮಾಯಣ ಕತೆ ಆಧರಿಸಿದ್ದಾಗಿತ್ತು. ಸಿನಿಮಾದ ಬಗ್ಗೆ ಭಾರಿ ಪ್ರಚಾರ ಮಾಡಲಾಗಿತ್ತು, ನಿರೀಕ್ಷೆಗಳು ಸಹ ದೊಡ್ಡ ಮಟ್ಟದಲ್ಲಿದ್ದವು, ರಾಷ್ಟ್ರಪ್ರಶಸ್ತಿ ವಿಜೇತ ಓಂ ರಾವತ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು. ಪ್ರಭಾಸ್ ದೆಸೆಯಿಂದ ಹಾಕಿದ್ದ ಬಂಡವಾಳ ವಾಪಸ್ ಬಂತಾದರು, ಸಿನಿಮಾ ವಿವಾದಗಳಿಗೆ ಕಾರಣವಾಗಿತ್ತು. ದೇಶದ ಹಲವೆಡೆ ಸಿನಿಮಾದ ವಿರುದ್ಧ ದೂರುಗಳು ದಾಖಲಾಗಿದ್ದವು, ಹಿಂದೂಪರ ಸಂಘಟನೆಗಳು ಪ್ರತಿಭಟನೆಗಳನ್ನು ಸಹ ಮಾಡಿದ್ದರು. ‘ಆದಿಪುರುಷ್’ ಸಿನಿಮಾ ಫ್ಲಾಪ್ ಆದ ಬಳಿಕ ಪ್ರಭಾಸ್ ಇನ್ನು ಮುಂದೆ ಪೌರಾಣಿಕ ಕತೆಯುಳ್ಳ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಮತ್ತೆ ಪ್ರಭಾಸ್ ರಾಮಾಯಣ ಕತೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ದಂಗಲ್’ ಸೇರಿದಂತೆ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿತೇಶ್ ತಿವಾರಿ ರಾಮಾಯಣ ಕತೆ ಆಧರಿಸಿದ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾಮಾತೆಯ ಪಾತ್ರದಲ್ಲಿ ಹಾಗೂ ನಟ ಯಶ್ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗ ಇದೇ ಸಿನಿಮಾದಲ್ಲಿ ಪ್ರಭಾಸ್, ಪವರ್​ಫುಲ್ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್, ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಾದರೂ ಅವರ ಪಾತ್ರ ಬಹಳ ಪವರ್​ಫುಲ್ ಆಗಿ ಇರಲಿದೆಯಂತೆ.

ಇದನ್ನೂ ಓದಿ:‘ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ’; ಅರ್ಷದ್ ವಾರ್ಸಿ ಸ್ಪಷ್ಟನೆ

ನಿತೇಶ್ ತಿವಾರಿಯ ರಾಮಾಯಣ ಸಿನಿಮಾದಲ್ಲಿ ಪ್ರಭಾಸ್, ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಪಾತ್ರ ಕೆಲವೇ ನಿಮಿಷಗಳು ಮಾತ್ರವೇ ಬಂದು ಹೋಗಲಿದೆಯಂತೆ ಆದರೆ ಬಹಳ ಪವರ್​ಫುಲ್ ಆಗಿ ತೆರೆಯ ಮೇಲೆ ಅವರ ಪಾತ್ರವನ್ನು ತೋರಿಸಲಾಗುತ್ತದೆ ಎನ್ನಲಾಗಿದೆ. ಪ್ರಭಾಸ್ ಪಾತ್ರದ ಚಿತ್ರೀಕರಣ ಆದಷ್ಟು ಶೀಘ್ರವಾಗಿ ಆಗಲಿದೆ ಎನ್ನಲಾಗುತ್ತಿದೆ. ‘ಆದಿಪುರುಷ್’ ಸಿನಿಮಾದ ಸೋಲಿನ ಬಳಿಕ ಪ್ರಭಾಸ್​ಗೆ ಪೌರಾಣಿಕ ಪಾತ್ರಗಳು ಆಗಿಬರುವುದಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದ ಕಾರಣ, ಪ್ರಭಾಸ್ ಇನ್ನು ಮುಂದೆ ಆ ರೀತಿಯ ಪಾತ್ರಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಆ ನಿಯಮವನ್ನು ಈಗ ಸ್ವತಃ ಪ್ರಭಾಸ್ ಮುರಿಯಲು ಮುಂದಾಗಿದ್ದಾರೆ. ಇನ್ನು ಪ್ರಭಾಸ್, ತೆಲುಗಿನ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿಯೂ ನಟಿಸುತ್ತಿದ್ದಾರೆ.

ಪ್ರಭಾಸ್ ಪ್ರಸ್ತುತ ಹನು ರಘುಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಜಾ ಡಿಲಕ್ಸ್’ ಸಿನಿಮಾದ ಚಿತ್ರೀಕರಣವನ್ನು ಸಹ ಬಹುತೇಕ ಮುಗಿಸಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಈ ಸಿನಿಮಾಗಳ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಬಳಿಕ ‘ಸಲಾರ್ 2’ ಸಿನಿಮಾದಲ್ಲಿ ಸಹ ಪ್ರಭಾಸ್ ನಟಿಸಲಿದ್ದಾರೆ. ಇವುಗಳ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಸಹ ಪ್ರಭಾಸ್ ನಟಿಸಲಿದ್ದಾರೆ. ಪ್ರಭಾಸ್ ಸುಮಾರು ಐದು ವರ್ಷಗಳ ಕಾಲ ಬ್ಯುಸಿಯಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ