ವಿವಾದ ಇತ್ಯರ್ಥ, ಧನುಶ್​ ಮೇಲೆ ವಿಧಿಸಿದ್ದ ನಿಷೇಧ ತೆರವು

|

Updated on: Sep 11, 2024 | 6:49 PM

ತಮಿಳು ಚಿತ್ರರಂಗದ ನಿರ್ಮಾಪಕರ ಸಂಘವು ನಟ ಧನುಶ್​ ವಿರುದ್ಧ ನಿಷೇಧ ಹೇರಿತ್ತು, ಧನುಶ್ ವೃತ್ತಿಪರವಾಗಿ ನಡೆದುಕೊಂಡಿಲ್ಲ, ನಿರ್ಮಾಪಕರಿಂದ ಹಣ ಪಡೆದು ಸಿನಿಮಾದಲ್ಲಿ ನಟಿಸಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದರು. ಇದೀಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದ್ದು ನಿಷೇಧವನ್ನು ತೆರವು ಮಾಡಲಾಗಿದೆ.

ವಿವಾದ ಇತ್ಯರ್ಥ, ಧನುಶ್​ ಮೇಲೆ ವಿಧಿಸಿದ್ದ ನಿಷೇಧ ತೆರವು
Follow us on

ತಮಿಳಿನ ಸ್ಟಾರ್ ನಟ, ಬಾಲಿವುಡ್, ಹಾಲಿವುಡ್​ ಸಿನಿಮಾಗಳಲ್ಲಿಯೂ ನಟಿಸಿ ಬಂದಿರುವ ಧನುಶ್ ಮೇಲೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿತ್ತು, ಧನುಶ್​, ಸಿನಿಮಾಗಳಿಗೆ ಡೇಟ್ಸ್ ನೀಡಿಲ್ಲವೆಂಬ ಕಾರಣಕ್ಕೆ ಈ ನಿಷೇಧ ಹೇರಲಾಗಿತ್ತು. ಧನುಶ್​ ಮೇಲೆ ಹೇರಲಾದ ನಿಷೇಧಕ್ಕೆ ತೀವ್ರ ವಿರೋಧ ಕಲಾವಿದರಿಂದ ವ್ಯಕ್ತವಾಗಿತ್ತು. ಈ ಬಗ್ಗೆ ತಮಿಳು ಚಿತ್ರರಂಗದ ಕಲಾವಿದರ ಸಂಘ ಮಧ್ಯಸ್ಥಿಕೆ ವಹಿಸಿ, ನಿರ್ಮಾಪಕರ ಸಂಘದೊಂದಿಗೆ ಮಾತುಕತೆ ಆಡಿದ ಮೇಲೆ ಇದೀಗ ವಿವಾದ ಬಗೆಹರಿದಿದೆ. ಧನುಶ್​ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.

ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಈ ಹಿಂದೆ ಧನುಷ್ ವಿರುದ್ಧ ಕೆಲ ಆರೋಪಗಳನ್ನು ಮಾಡಿತ್ತು. ಧನುಶ್ ವೃತ್ತಿಪರವಲ್ಲದ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿತ್ತು, ನಿರ್ಮಾಪಕರಿಂದ ಮುಂಗಡ ಹಣ ಪಡೆದ ಬಳಿಕವೂ ಡೇಟ್ಸ್​ ನೀಡದೆ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂದು ನಿರ್ಮಾಪಕರ ಸಂಘ ಆರೋಪಿಸಿ ಅವರೊಟ್ಟಿಗೆ ಕೆಲಸ ಮಾಡುವುದಿಲ್ಲವೆಂದು ನಿಷೇಧ ಹೇರಿತ್ತು. ಆದರೆ, ಇದೀಗ ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಮಾಪಕರ ಸಂಘ ಹಿಂತೆಗೆದುಕೊಂಡಿದೆ.

ಇದನ್ನೂ ಓದಿ:ಧನುಶ್ ಮೇಲೆ ನಿಷೇಧ, ಸಂಧಾನಕ್ಕೆ ಮುಂದಾದ ಕಲಾವಿದರ ಸಂಘ

ಈ ಹಿಂದೆ ತೆನಾಂಡಾಲ್ ಫಿಲಮ್ಸ್ ಮತ್ತು 5 ಸ್ಟಾರ್ ಕ್ರಿಯೇಷನ್ಸ್​ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳು ನಿರ್ಮಾಪಕರ ಸಂಘಕ್ಕೆ ಧನುಶ್​ ವಿರುದ್ಧ ದೂರು ನೀಡಿದ್ದರು. ಅದರ ವಿಚಾರಣೆ ಬಳಿಕವೇ ಧನುಶ್ ವಿರುದ್ಧ ನಿಷೇಧ ಹೇರಲಾಗಿತ್ತು. ಇದೀಗ ಮಾತು-ಕತೆ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತು. ತೆನಾಂಡಾಲ್ ಫಿಲಮ್ಸ್ ಜೊತೆಗೆ ಹೊಸ ಸಿನಿಮಾ ಮಾಡುವುದಾಗಿ ಧನುಶ್ ಒಪ್ಪಿಕೊಂಡಿದ್ದಾರೆ ಅಲ್ಲದೆ 5 ಸ್ಟಾರ್ ಕ್ರಿಯೇಷನ್ಸ್​ನಿಂದ ಪಡೆದಿದ್ದ ಹಣವನ್ನು ಮರಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ನಿರ್ಮಾಪಕರ ಸಂಘ ಧನುಷ್ ವಿರುದ್ಧ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ.

ಧನುಶ್ ಇತ್ತೀಚೆಗಷ್ಟೆ ‘ರಾಯನ್’ ಸಿನಿಮಾದಲ್ಲಿ ನಟಿಸಿದ್ದರು ಆ ಸಿನಿಮಾ ಸೂಪರ್ ಹಿಟ್ ಆಯ್ತು. ಸಿನಿಮಾವನ್ನು ಅವರೇ ನಿರ್ದೇಶನ ಸಹ ಮಾಡಿದ್ದರು. ಇನ್ನು ಪ್ರಸ್ತುತ ತೆಲುಗಿನ ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ ಸಹ ಇದ್ದಾರೆ. ಹಿಂದಿಯಲ್ಲಿ ‘ರಾಂಝನಾ’ ನಿರ್ದೇಶಕರ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲೇ ಇಳಯರಾಜ ಜೀವನ ಆಧರಿಸಿದ ‘ಇಳಯರಾಜ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆಯರತ್ತಿಲ್ ಒರುವನ್ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ