AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಠಾಣೆ ಮೆಟ್ಟಿಲೇರಿದ ರಜನೀಕಾಂತ್ ಮತ್ತೊಬ್ಬ ಪುತ್ರಿ

Rajinikanth: ಸೂಪರ್ ಸ್ಟಾರ್ ರಜನೀಕಾಂತ್ ಎರಡನೇ ಪುತ್ರಿ ಸೌಂದರ್ಯಾ ರಜನೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎರಡು ತಿಂಗಳ ಹಿಂದೆ ಐಶ್ವರ್ಯಾ ರಜನೀಕಾಂತ್ ಮನೆಯಲ್ಲಿ ಭಾರಿ ಮೊತ್ತದ ಆಭರಣ ಕಳುವಾಗಿದ್ದವು. ಇದೀಗ ಸೌಂದರ್ಯಾ, ಐಶಾರಾಮಿ ವಾಹನದ ಕೀಲಿ ಕೈ ಕಳೆದುಕೊಂಡು ಆ ಬಗ್ಗೆ ದೂರು ದಾಖಲಿಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ರಜನೀಕಾಂತ್ ಮತ್ತೊಬ್ಬ ಪುತ್ರಿ
ಸೌಂದರ್ಯ ರಜನೀಕಾಂತ್
ಮಂಜುನಾಥ ಸಿ.
|

Updated on: May 10, 2023 | 7:20 PM

Share

ನಟ ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ ರಜನೀಕಾಂತ್ (Aishwarya Rajinikanth) ಕೆಲ ತಿಂಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿ ತಮ್ಮ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ಕಳುವಾದ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಹಲವು ವರ್ಷಗಳಿಂದ ಸೌಂದರ್ಯ ರಜನೀಕಾಂತ್ (Soundarya Rajinikanth) ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದರು. ಇದೀಗ ರಜನೀಕಾಂತ್​ರ ಮತ್ತೊಬ್ಬ ಪುತ್ರಿ ಸೌಂದರ್ಯಾ ರಜನೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸೌಂದರ್ಯ ರಜನೀಕಾಂತ್​ರ ಐಶಾರಾಮಿ, ದುಬಾರಿ ಕಾರಿನ ಕೀಲಿ ಕಾಣೆಯಾಗಿದೆಯಂತೆ. ಹೀಗೆಂದು ಸೌಂದರ್ಯ ರಜನೀಕಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೌಂದರ್ಯಾ ಇತ್ತೀಚೆಗೆ ಮನೆಯಿಂದ ಖಾಸಗಿ ಕಾಲೇಜೊಂದಕ್ಕೆ ತೆರಳುವಾಗ ಅವರ ಕಾರಿನ ಕೀ ಕಾಣೆಯಾಗಿದೆಯಂತೆ. ಈ ಬಗ್ಗೆ ದೂರು ನೀಡಿರುವ ಸೌಂದರ್ಯಾ ಕೀ ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಸುಮಾರು ಮೂರು ಕೋಟಿಗೂ ಹೆಚ್ಚಿನ ಬೆಲೆಯ ರೇಂಜ್ ರೋವರ್ ಕಾರಿನ ಕೀಲಿ ಕೈ ಸಹ ಬಹು ದುಬಾರಿ. ಕೀಲಿ ಕೈ ಸಿಕ್ಕಿದವರು ಕಾರು ಕಳವು ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಲ್ಲದೆ, ಮತ್ತೊಂದು ಕೀಲಿ ಮಾಡಿಸಲು ಸಹ ಪೊಲೀಸ್ ದೂರು ಅವಶ್ಯಕ ಎನ್ನಲಾಗುತ್ತದೆ.

ಮಾರ್ಚ್ ತಿಂಗಳಲ್ಲಿ ರಜನೀಕಾಂತ್ ಪುತ್ರಿ ಐಶ್ವರ್ಯಾ ಮನೆಯಲ್ಲಿ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನವಾಗಿತ್ತು. ದೂರು ನೀಡಿದ್ದ ಐಶ್ವರ್ಯಾ, ಮನೆಗೆಲಸದವರಾದ ಈಶ್ವರಿ, ಲಕ್ಷ್ಮಿ ಹಾಗೂ ಈಶ್ವರಿಯ ಪತಿ ಉಮಾಪತಿ ಮೇಲೆ ಅನುಮಾನ ಇರುವುದಾಗಿ ಹೇಳಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಈಶ್ವರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ವತಃ ಐಶ್ವರ್ಯಾ ಗಾಬರಿಯಾಗುವಂಥಹಾ ವಿಷಯಗಳು ಬಹಿರಂಗವಾದವು. ಹಲವು ವರ್ಷಗಳಿಂದ ಐಶ್ವರ್ಯಾ ಮನೆಯಲ್ಲಿ ಕೆಲಸ ಮಾಡುತ್ತಿರುವ ಈಶ್ವರಿ, ಆಗೊಮ್ಮೆ-ಈಗೊಮ್ಮೆ ಕಳ್ಳತನ ಮಾಡುತ್ತ ಆಭರಣಗಳನ್ನು ಮಾರಿ ಬಂದ ಹಣದಿಂದ ಈಶ್ವರಿ ಸುಮಾರು ಒಂದು ಕೋಟಿ ಮೌಲ್ಯದ ಮನೆಯನ್ನು ಚೆನ್ನೈನ ಕೋಳಿಗನಲ್ಲೂರಿನಲ್ಲಿ ಖರೀದಿಸಿದ್ದರು. ಪೊಲೀಸರು ಈಶ್ವರಿಯ ಮನೆಯ ಮೇಲೆ ದಾಳಿ ಮಾಡಿದಾಗಲೂ ಅವರಿಗೆ ಸುಮಾರು 800 ಗ್ರಾಂ ಚಿನ್ನ, 30 ಗ್ರಾಂ ವಜ್ರ, ನಾಲ್ಕು ಕೆಜಿ ಬೆಳ್ಳಿ ಆಭರಣಗಳು ದೊರೆತಿವೆ. ಇವುಗಳ ಒಟ್ಟು ಮೌಲ್ಯ ಸುಮಾರು 4 ಕೋಟಿಗೂ ಹೆಚ್ಚೆಂದು ಪೊಲೀಸರು ಅಂದಾಜಿಸಿದ್ದಾರೆ. ಚಿನ್ನಾಭರಣಗಳ ಹೊರತಾಗಿ ಇನ್ನೂ ಕೆಲವು ವಸ್ತುಗಳನ್ನು, ನಗದು ಹಣವನ್ನು ಸಹ ಈಶ್ವರಿ ಹಾಗೂ ವೆಂಕಟ್ ಒಟ್ಟು ಸೇರಿ ಕದ್ದಿದ್ದಾರೆ ಎಂದಿದ್ದರು ಪೊಲೀಸರು.

ಇದನ್ನೂ ಓದಿ:ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ

ಇದೀಗ ಸೌಂದರ್ಯಾರ ಐಶಾರಾಮಿ ಕಾರಿನ ಕೀಲಿ ಕಾಣೆಯಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೌಂದರ್ಯಾ ರಜನೀಕಾಂತ್, ರಜನೀಕಾಂತ್​ರ ಎರಡನೇ ಪುತ್ರಿ. ಐಶ್ವರ್ಯಾರ ತಂಗಿ. 2010 ರಲ್ಲಿ ಅಶ್ವಿನ್ ರಾಮ್​ಕುಮಾರ್ ಎಂಬುವರನ್ನು ಸೌಂದರ್ಯಾ ವಿವಾಹವಾಗಿದ್ದರು. ಆ ಬಳಿಕ 2017 ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಬಳಿಕ 2019 ರಲ್ಲಿ ವಿಶಾಗನ್ ವನಗಮುಡಿ ಎಂಬುವರನ್ನು ಅದ್ಧೂರಿಯಾಗಿ ವಿವಾಹವಾದರು. 2020ರಲ್ಲಿ ಈ ದಂಪತಿಗೆ ಮಗುವೊಂದು ಜನಿಸಿದೆ. ಗ್ರಾಫಿಕ್ಸ್ ಕಲಾವಿದೆ ಆಗಿರುವ ಸೌಂದರ್ಯಾ, ರಜನೀಕಾಂತ್​ರ ಕೆಲವು ಸಿನಿಮಾಗಳಿಗೆ ಟೈಟಲ್ ಬರೆದುಕೊಟ್ಟಿದ್ದಾರೆ. ತಮಿಳಿನ ಸೂಪರ್ ಹಿಟ್ ಸಿನಿಮಾ ಗೋವಾನ ನಿರ್ಮಾಪಕರೂ ಆಗಿರುವ ಸೌಂದರ್ಯಾ, ಅವರ ಭಾವ ಧನುಶ್ ನಟನೆಯ ವಿಐಪಿ 2 ಸಿನಿಮಾದ ನಿರ್ದೇಶಕಿಯೂ ಹೌದು. ಇದರ ಜೊತೆಗೆ ರಜನೀಕಾಂತ್, ದೀಪಿಕಾ ಪಡುಕೋಣೆ ನಟಿಸಿರುವ ಅನಿಮೇಷನ್ ಸಿನಿಮಾ ಕೊಚಾಡಿಯನ್ ಸಿನಿಮಾ ಸಹ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ