
ಟಾಲಿವುಡ್ನ ಸ್ಟಾರ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಕಳೆದ ಫೆಬ್ರವರಿ 26ರಂದು ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಕೆಲವು ತಿಂಗಳು ಕಳೆದರೂ ಈ ತಾರಾ ಜೋಡಿಯ ಮದುವೆಯ ಉಡುಪು, ಆಭರಣ ಮತ್ತು ಆಚರಣೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಇನ್ನೂ ನಿಂತಿಲ್ಲ. ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆಯ ಲುಕ್ ವಿನ್ಯಾಸಗೊಳಿಸಿದ್ದ ಪ್ರಸಿದ್ಧ ಸ್ಟೈಲಿಸ್ಟ್ ಪ್ರಿಯಾ ಮಗಂತಿ ಅವರು, ಮದುವೆಯ ದಿನ ರಶ್ಮಿಕಾ ಅವರ ವಿಶಿಷ್ಟ ಆಯ್ಕೆಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ಪ್ರಿಯಾ ಮಗಂತಿ, ‘ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಮಂಗಳಸೂತ್ರವನ್ನು ತಾವೇ ಸ್ವತಃ ವಿನ್ಯಾಸಗೊಳಿಸಿದ್ದರು. ಇದು ಅವರ ವಿಭಿನ್ನ ಮತ್ತು ವಿಶಿಷ್ಟ ಅಭಿರುಚಿಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಅಲ್ಲದೆ, ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಮ್ಮ ಮದುವೆ ಬೇರೆ ಸೆಲೆಬ್ರಿಟಿಗಳ ಮದುವೆಯಂತೆ ಟ್ರೆಂಡ್ ಫಾಲೋ ಮಾಡಬಾರದು, ಬದಲಿಗೆ ಪ್ರತಿಯೊಂದು ಆಯ್ಕೆಯೂ ತಮ್ಮ ಮನಸ್ಸಿಗೆ ಹತ್ತಿರವಾಗಿರಬೇಕು ಅಂತ ಮೊದಲೇ ನಿರ್ಧರಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿ ವಧುಗಳು ತಮ್ಮ ಮದುವೆಗೆ ಕೆಂಪು, ಬಿಳಿ ಅಥವಾ ಇನ್ನಿತರ ಬಣ್ಣದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಶ್ಮಿಕಾ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಕಿತ್ತಳೆ ಬಣ್ಣದ ಸೀರೆಯನ್ನು ಉಡಲು ಬಯಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಕೂಡ ಪ್ರಿಯಾ ಅವರು ಮಾತನಾಡಿದ್ದಾರೆ.
‘ಮದುವೆಯ ಸೀರೆಗೆ ಕಿತ್ತಳೆ ಬಣ್ಣ ಅಷ್ಟಾಗಿ ಬಳಸದ ಕಾರಣ, ಹಲವು ಪ್ರಮುಖ ಡಿಸೈನರ್ಗಳು ರಶ್ಮಿಕಾಗೆ ಕೆಂಪು ಅಥವಾ ಬಿಳಿ ಬಣ್ಣದ ಸೀರೆ ಉಡುವಂತೆ ಸಲಹೆ ನೀಡಿದ್ದರು. ಆದರೆ ರಶ್ಮಿಕಾ ಮಾತ್ರ ಕಿತ್ತಳೆ ಬಣ್ಣಕ್ಕೇ ಪಟ್ಟು ಹಿಡಿದಿದ್ದರು. ಆಗ ನಾನು ಅವರಿಗೆ ಧೈರ್ಯ ತುಂಬಿ, ಬೇರೆಯವರ ಮಾತನ್ನು ಕೇಳಬೇಡಿ, ನಿಮ್ಮ ಮನಸ್ಸಿಗೆ ಅನಿಸಿದ್ದನ್ನೇ ಮಾಡಿ ಎಂದು ಹೇಳಿದೆ. ಅದರಂತೆ ಅವರು ಕಿತ್ತಳೆ ಬಣ್ಣದ ಸೀರೆಯಲ್ಲಿಯೇ ಮಿಂಚಿದರು’ ಎಂದು ಪ್ರಿಯಾ ಅವರು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
ಇಂಟರ್ನೆಟ್ನಲ್ಲಿ ಯಾವುದು ಟ್ರೆಂಡ್ ಆಗುತ್ತಿದೆ ಎನ್ನುವುದಕ್ಕಿಂತ, ತಮಗೆ ಯಾವುದು ಸಂತೋಷ ನೀಡುತ್ತದೆ ಎಂಬದಕ್ಕೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆದ್ಯತೆ ನೀಡಿದ್ದರು ಎಂದು ವೆಡ್ಡಿಂಗ್ ಪ್ಲಾನರ್ ತಂಡದ ಪ್ರಿಯಾ ಹೇಳಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ರಣಬಾಲಿ’ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.