
ಕೆಲ ದಿನಗಳ ಹಿಂದಷ್ಟೆ ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಭಿನ್ನ-ಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕ ವಸಂತ್ ಕುಮಾರ್ ಹೇಳಿರುವಂತೆ, ‘ರುದ್ರಾಭಿಷೇಕಂ’ ಸಿನಿಮಾ ವೀರಭದ್ರ ಸ್ವಾಮಿ ಭಕ್ತರಿಗಾಗಿ ಮಾಡಲಾದ ವಿಶೇಷ ಸಿನಿಮಾ ಇದಾಗಿದೆಯಂತೆ. ವೀರಭದ್ರ ಸ್ವಾಮಿ ಮಹಿಮೆ ಮತ್ತು ಭಕ್ತಿಯೇ ‘ರುದ್ರಾಭಿಷೇಕಂ’ ಸಿನಿಮಾದ ಜೀವಾಳ ಎಂದು ನಿರ್ದೇಶಕ ಹೇಳಿದ್ದಾರೆ.
ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ವಸಂತ್ ಕುಮಾರ್, ‘ರುದ್ರಾಭಿಷೇಕಂ’ ಆಧುನಿಕ ಮತ್ತು ಪೌರಾಣಿಕ ಕತೆಗಳ ಬೆಸುಗೆ. ಸಿನಿಮಾದ ಆಧುನಿಕ ಕಾಲದ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆಯಾದರೂ ಸಿನಿಮಾನಲ್ಲಿ ಪೌರಾಣಿಕ ಕತೆಗಳ ಛಾಯೆ ಇದೆ, ವಿಶೇಷವಾಗಿ ಅಪಾರ ಭಕ್ತಗಣವನ್ನು ಹೊಂದಿರುವ ವೀರಭದ್ರ ಸ್ವಾಮಿಯ ಮಹಿಮೆಯನ್ನು ತೋರಿಸಲಾಗಿದೆ ಎಂದು ಕತೆಯ ಬಗ್ಗೆ ವಿವರಿಸಿದ್ದಾರೆ.
‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಅವರು ಮೂರು ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕತೆಯು ಗ್ರಾಮ್ಯ ಭಾಗದ ಸರಳ ಕತೆಯ ಜೊತೆಗೆ ಸಾಕಷ್ಟು ಥ್ರಿಲ್ಲರ್ ಅಂಶಗಳನ್ನು ಸಹ ಒಳಗೊಂಡಿದೆ. ಸಿನಿಮಾದ ಕೆಲ ಪೋಸ್ಟರ್ಗಳು ಈಗಾಗಲೇ ಬಿಡುಗಡೆ ಆಗಿದ್ದು, ವಿಜಯ್ ರಾಘವೇಂದ್ರ ಅವರ ಹಲವು ಲುಕ್ಗಳ ಪರಿಚಯ ಮಾಡಿಕೊಡುತ್ತಿವೆ. ಒಂದು ಪೋಸ್ಟರ್ನಲ್ಲಿ ವಿಜಯ್ ರಾಘವೇಂದ್ರ ವೀರಗಾಸೆಯವರ ವೇಷದಲ್ಲಿದ್ದರೆ, ಮತ್ತೊಂದರಲ್ಲಿ ಗಿರಿಜಾ ಮೀಸೆ ಬಿಟ್ಟು ರಗಡ್ ಆಗಿ ಕಾಣುತ್ತಿದ್ದಾರೆ. ಮತ್ತೊಂದರಲ್ಲಿ ತಮ್ಮ ಎಂದಿನ ಚಾಕಲೇಟ್ ಬಾಯ್ ಇಮೇಜಿನಲ್ಲಿದ್ದಾರೆ.
ಇದನ್ನೂ ಓದಿ:ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
‘ರುದ್ರಾಭಿಷೇಕಂ’ ಸಿನಿಮಾವು ಕೆಲ ವಿಶೇಷತೆಗಳನ್ನು ಒಳಗೊಂಡಿದೆ. ಈ ಸಿನಿಮಾಕ್ಕೆ ಬರೋಬ್ಬರಿ ಒಂಬತ್ತು ಮಂದಿ ನಿರ್ಮಾಪಕರು. ರೈತರುಗಳು ಒಟ್ಟು ಸೇರಿ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ವಿಶೇಷ. ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ವಿ ಮನೋಹರ್. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಅನ್ನು ದೇವಹನಳ್ಳಿ ಸಮೀಪದ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು ಹಾಗೂ ಇನ್ನಿತರೆ ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ