
ನಟಿ ಸಮಂತಾ ರುತ್ ಪ್ರಭು (Samantha) ಈಗ ತಾಯಿ ಆಗುವ ಸಂಭ್ರಮದಲಿದ್ದಾರೆ. ಅವರಿಗೆ ಯಾರಾದರೂ ಏನಾದರೂ ಹೇಳಿದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುವವರು ಅವರು ಅಲ್ಲವೇ ಅಲ್ಲ. ಈಗ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅವರು ಪರೋಕ್ಷವಾಗಿ ನಟಿ ಶೋಭಿತಾ ಧೂಲಿಪಾಲಾಗೆ ತಿರುಗೇಟು ನೀಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ‘ಮಾ ಇಂಟಿ ಬಂಗಾರಂ’ ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಸಮಂತಾ, ‘ಕೆಲವೊಮ್ಮೆ ಸಂಬಂಧಗಳು ತುಂಬಾ ಜಟಿಲವಾಗಿರುತ್ತವೆ. ಅವು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಒಂದು ಸಂಬಂಧ ಚೆನ್ನಾಗಿರಲು ಇಬ್ಬರ ಶ್ರಮವೂ ಬೇಕಾಗುತ್ತದೆ’ ಎಂದು ಸಮಂತಾ ಹೇಳಿದ್ದಾರೆ.
‘ಮಹಿಳೆಯರು ಮುಖ್ಯವಾಗಿ ತಮ್ಮ ಮೇಲೆ ತಮಗೆ ನಂಬಿಕೆ ಇಟ್ಟುಕೊಳ್ಳಬೇಕು. ನಿಮ್ಮನ್ನು ಪೂರ್ಣಗೊಳಿಸಲು ಇನ್ನೊಬ್ಬರು ಬೇಕು ಎಂದು ಕಾಯಬಾರದು. ಹಾಗೆ ಕಾಯುತ್ತಾ ಕೂತರೆ ಎದುರಿಗಿರುವವರ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತವೆ. ಅದು ಖಂಡಿತಾ ಸರಿಯಲ್ಲ’ ಎಂದು ಸಮಂತಾ ಹೇಳಿದ್ದಾರೆ
ಸಮಂತಾ ಮಾತನಾಡಿದ್ದಕ್ಕೂ, ಶೋಭಿತಾಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ? ಖಂಡಿತ ಇದೆ. ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆಯ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆ ವಿಡಿಯೋದಲ್ಲಿ ಶೋಭಿತಾ ಒಂದು ಮಾತನ್ನು ಹೇಳಿದ್ದರು. ‘ಒಬ್ಬ ವ್ಯಕ್ತಿ ಅಪೂರ್ಣವಾಗಿರುತ್ತಾನೆ. ಇನ್ನೊಬ್ಬರು ಬಂದು ಆ ಶೂನ್ಯವನ್ನು ತುಂಬುತ್ತಾರೆ ಎಂದು ನಾನು ನಂಬುತ್ತೇನೆ. ಅವರ ಅನುಪಸ್ಥಿತಿಯಲ್ಲಿ ನಾನು ಪರಿಪೂರ್ಣವಾಗಿ ಇರಲು ಸಾಧ್ಯವಿಲ್ಲ’ ಎಂದು ಶೋಭಿತಾ ಹೇಳಿದ್ದರು. ಸಮಂತಾ ಈಗ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಮಂತಾ ಮೇಲೆ ವೈಯಕ್ತಿಕ ದಾಳಿ ಮಾಡಿದವರಿಗೆ ಕಾಲವೇ ಕೊಟ್ಟಿತು ತಕ್ಕ ಉತ್ತರ
ನಾಗ ಚೈತನ್ಯ ಮತ್ತು ಸಮಂತಾ ಹಿಂದೆ ಮದುವೆಯಾಗಿದ್ದರು. ಆದರೆ ನಾಲ್ಕು ವರ್ಷಗಳ ದಾಂಪತ್ಯದ ನಂತರ 2021ರಲ್ಲಿ ಇವರು ಬೇರ್ಪಟ್ಟರು. ನಂತರ ನಾಗ ಚೈತನ್ಯ ಅವರು ಶೋಭಿತಾ ಅವರನ್ನು ವಿವಾಹವಾದರು. ಮತ್ತೊಂದೆಡೆ ಸಮಂತಾ ಕೂಡ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ. ಅವರು ಡಿಸೆಂಬರ್ 2025 ರಲ್ಲಿ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:03 am, Fri, 26 June 26