‘ಕ್ಷಮಿಸಿ, ದಯವಿಟ್ಟು ಈ ಟ್ವೀಟ್​​ನ ಅನ್ಯಥಾ ಭಾವಿಸಬೇಡಿ’; ಪುನೀತ್ ಕುರಿತ ಟ್ವೀಟ್​ ವಿಚಾರದಲ್ಲಿ ಕ್ಷಮೆ ಕೇಳಿದ ಚಕ್ರವರ್ತಿ ಸೂಲಿಬೆಲೆ 

ಪುನೀತ್ ರಾಜ್​ಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದರು. ಮೂರು ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್​ಕುಮಾರ್ ಕುಟುಂಬದ ಜತೆ ಇದ್ದು ಸಾಂತ್ವನ ಹೇಳಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆ ಅವರು ಸಿಎಂ ಕಾಲೆಳೆದಿದ್ದರು.

‘ಕ್ಷಮಿಸಿ, ದಯವಿಟ್ಟು ಈ ಟ್ವೀಟ್​​ನ ಅನ್ಯಥಾ ಭಾವಿಸಬೇಡಿ’; ಪುನೀತ್ ಕುರಿತ ಟ್ವೀಟ್​ ವಿಚಾರದಲ್ಲಿ ಕ್ಷಮೆ ಕೇಳಿದ ಚಕ್ರವರ್ತಿ ಸೂಲಿಬೆಲೆ 
ಚಕ್ರವರ್ತಿ-ಪುನೀತ್
Edited By:

Updated on: Aug 01, 2022 | 5:15 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಅವರು ಮಾಡಿರುವ ಟ್ವೀಟ್​​ನಿಂದ ಪುನೀತ್ ರಾಜ್​ಕುಮಾರ್​ಗೆ (Puneeth Rajkumar) ಅವಮಾನ ಆಗಿದೆ ಎಂದು ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರಹಾಕಿದ್ದರು. ಈ ಆಕ್ರೋಶ ಇನ್ನೂ ಉಗ್ರ ಸ್ವರೂಪ ಪಡೆದುಕೊಳ್ಳುವ ಸೂಚನೆ ಸಿಕ್ಕ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ  ಅವರು ಕ್ಷಮೆ ಕೇಳಿದ್ದಾರೆ.

‘ಮುಖ್ಯಮಂತ್ರಿ ಅವರಿಗೆ ದಾಖಲೆಗಳಿಗೆ ಸಹಿ ಹಾಕಲೂ ಆಗುತ್ತಿಲ್ಲ ಎಂದು ಶಾಸಕರು ದೂರುತ್ತಿದ್ದಾರೆ. ಬಹುಶಃ ಅವರಿಗೆ ಸಮಯದ ಅಭಾವ ಇರಬಹುದು. ಆದರೆ ಪ್ರೀಮಿಯರ್​ನಲ್ಲಿ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಲು ಅವರಿಗೆ ಸಮಯವಿದೆ. ಚಿತ್ರರಂಗದ ಹೀರೋ ಸತ್ತಾಗ ಅವರು ಮೂರು ದಿನಗಳನ್ನು ವ್ಯಯಿಸಿದರು. ಈ ಆಕ್ರೋಶ ಇಲ್ಲದಿದ್ದರೆ ಅವರು ‘ವಿಕ್ರಾಂತ್ ರೋಣ’ ಚಿತ್ರವನ್ನು ಖಂಡಿತವಾಗಿಯೂ ವೀಕ್ಷಿಸುತ್ತಿದ್ದರು’ ಎಂದು ಚಕ್ರವರ್ತಿ ಸೂಲಿಬೆಲೆ  ಟ್ವೀಟ್ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ
‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್​ ಆಫ್​ ಡೇಂಜರ್​’; ಧೀರೇನ್ ರಾಮ್​ಕುಮಾರ್
Kishore Pathikonda: ‘ಜೇಮ್ಸ್​’ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಆತ್ಮೀಯತೆಯಿಂದ ಮಾತನಾಡಿದ ಶಿವರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್​ರಾಜ್​ಕುಮಾರ್; ಇಲ್ಲಿದೆ ವಿಡಿಯೋ
ಪುನೀತ್​ ನಟನೆಯ ‘ಜೇಮ್ಸ್’ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ರಿಪೋರ್ಟ್​

ಪುನೀತ್ ರಾಜ್​ಕುಮಾರ್ ಅವರು ಅಕ್ಟೋಬರ್ 29ರಂದು ನಿಧನ ಹೊಂದಿದರು. ಮೂರು ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್​ಕುಮಾರ್ ಕುಟುಂಬದ ಜತೆ ಇದ್ದು ಸಾಂತ್ವನ ಹೇಳಿದ್ದರು. ಈ ವಿಚಾರವನ್ನು ಇಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆ ಅವರು ಸಿಎಂ ಕಾಲೆಳೆದಿದ್ದರು. ಈ ವಿಚಾರದ ಮಧ್ಯೆ ‘ವಿಕ್ರಾಂತ್ ರೋಣ’ ಚಿತ್ರದ ಹೆಸರನ್ನೂ ಚಕ್ರವರ್ತಿ ಸೂಲಿಬೆಲೆ ಅವರು ಎಳೆದು ತಂದಿದ್ದರು. ಈ ಮೂಲಕ ಅವರು ಪುನೀತ್ ಹಾಗೂ ಸುದೀಪ್ ಫ್ಯಾನ್ಸ್ ವಿರೋಧ ಕಟ್ಟಿಕೊಂಡಿದ್ದಾರೆ.

ಪುನೀತ್ ನಿಧನದ ನೋವು ಇನ್ನೂ ಹಸಿಯಾಗಿದೆ. ಅವರು ನಿಧನ ಹೊಂದಿದ್ದಾರೆ ಎಂಬುದನ್ನು ನಂಬಲೂ ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರ ನಿಧನದ ವಿಚಾರದಲ್ಲಿ ಕೆಟ್ಟದಾಗಿ ಯಾರು ಹೇಳಿಕೆ ನೀಡಿದರೂ ಫ್ಯಾನ್ಸ್ ಅದನ್ನು ಸಹಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಚಕ್ರವರ್ತಿ ಸೂಲಿಬೆಲೆ  ಕ್ಷಮೆ ಕೇಳಿದ್ದಾರೆ.

‘ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ  ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟ್​​ನ ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು’ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.