ಅಣ್ಣಾವ್ರ ಅಭಿಮಾನಿಗಳ ಬಳಿಕ ಜೆಡಿಎಸ್ ಕಾರ್ಯಕರ್ತರ ಎದುರು ಹಾಕಿಕೊಂಡ ಚೇತನ್

Chetan Ahimsa controversy: ಚೇತನ್ ಅಹಿಂಸ, ಇತ್ತೀಚೆಗೆ ಡಾ ರಾಜ್​ಕುಮಾರ್ ಅವರ ಸ್ಮಾರಕದ ಕುರಿತಾಗಿ ನೀಡಿರುವ ಹೇಳಿಕೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.ಇದರ ನಡುವೆ ಚೇತನ್ ಅಹಿಂಸ ಎಚ್​​ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನೂ ಸಹ ಎದುರು ಹಾಕಿಕೊಂಡಿದ್ದಾರೆ.

ಅಣ್ಣಾವ್ರ ಅಭಿಮಾನಿಗಳ ಬಳಿಕ ಜೆಡಿಎಸ್ ಕಾರ್ಯಕರ್ತರ ಎದುರು ಹಾಕಿಕೊಂಡ ಚೇತನ್
Chetan Nikhil

Updated on: Apr 28, 2026 | 1:41 PM

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ (Chetan Ahimsa), ಇತ್ತೀಚೆಗೆ ಡಾ ರಾಜ್​ಕುಮಾರ್ ಅವರ ಸ್ಮಾರಕದ ಕುರಿತಾಗಿ ನೀಡಿರುವ ಹೇಳಿಕೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ. ಕನ್ನಡಪರ ಸಂಘಟನೆಗಳ ಎದುರು ಕ್ಷಮೆ ಕೇಳಿದರೂ ಆ ಬಳಿಕ ಮತ್ತೆ ತಮ್ಮದೇ ಮಾತಿಗೆ ಉಲ್ಟಾ ಹೊಡೆದು, ತಮ್ಮ ಹಿಂದಿನ ಹೇಳಿಕೆಗೆ ತಾವು ಬದ್ಧ ಎಂದಿದ್ದಾರೆ ಚೇತನ್. ಇದರಿಂದಾಗಿ ಅಣ್ಣಾವ್ರ ಅಭಿಮಾನಿಗಳು ಚೇತನ್ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದಾರೆ. ಇದರ ನಡುವೆ ಚೇತನ್ ಅಹಿಂಸ ಎಚ್​​ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನೂ ಸಹ ಎದುರು ಹಾಕಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮಾಧ್ಯಮಗಳು ಚೇತನ್ ಅಹಿಂಸ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ’ ಎಂದು ನಿಖಿಲ್ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ‘ಯೋಗ್ಯ’? ಮಾಜಿ ಪ್ರಧಾನಿಯ ಮಗ, 2006ರಲ್ಲಿ ಅವಕಾಶವಾದಿ ‘ಸ್ಮಾರಕ ಪಾಲಿಟಿಕ್ಸ್’ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆಸಂಬಂಧಪಟ್ಟ ‘ಫ್ಯಾನ್ ವಾರ್ಸ್’ ಪ್ರೇರೇಪಿಸಿದವರಾ? ಅಥವಾ ಅವರ ಮಗ, ಮೂರು ಬಾರಿ ಸೋತವರು ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ

ಈ ಪೋಸ್ಟ್ ಮೂಲಕ ಎಚ್​​ಡಿ ಕುಮಾರಸ್ವಾಮಿ ಅವರು ಸ್ಮಾರಕಕ್ಕೆ ಸ್ಥಳ ನೀಡಿದ್ದು ಅವರ ರಾಜಕೀಯದ ಭಾಗ ಎಂದು ಟೀಕೆ ಮಾಡಿರುವ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ಮೂರು ಚುನಾವಣೆಗಳಲ್ಲಿ ಸೋತಿರುವುದನ್ನು ಸಹ ಟೀಕೆ ಮಾಡಿದ್ದಾರೆ. ಚೇತನ್ ಅಹಿಂಸ ಅವರ ಪೋಸ್ಟ್​​ಗೆ ಜೆಡಿಎಸ್ ಕಾರ್ಯಕರ್ತರು, ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ತೀವ್ರ ಟೀಕೆ ಮಾಡಿದ್ದಾರೆ.

ಅಣ್ಣಾವ್ರ ಜಯಂತಿಯಂದು ಫೇಸ್​​ಬುಕ್ ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸ, ಅಣ್ಣಾವ್ರ ಸ್ಮಾರಕಕ್ಕೆ ಜಾಗ ಕೊಟ್ಟಿದ್ದನ್ನು ಖಂಡಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇಂದು ಸಹ ಚೇತನ್ ವಿರುದ್ಧ ಫಿಲಂ ಚೇಂಬರ್ ಎದುರು ಪ್ರತಿಭಟನೆಗಳು ನಡೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us