‘ಸಾವರ್ಕರ್’ ಕುರಿತು ಸಿನಿಮಾ ಮಾಡಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ರಾಷ್ಟ್ರ ಪ್ರಶಸ್ತಿ ಗೆದ್ದ ರಣದೀಪ್ ಹೂಡಾ
ಖ್ಯಾತ ನಟ ರಣದೀಪ್ ಹೂಡಾ ಅವರು ಸಾವರ್ಕರ್ ಜೀವನಾಧಾರಿತ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಹ್ಯಾಟ್ ಧರಿಸಿದ್ದರು. ಈ ಪ್ರಯತ್ನಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ಪ್ರಶಸ್ತಿಗೆ ಭಾಜನರಾದ ರಣದೀಪ್ ಹೂಡಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದ ಮೂಲಕ ಮೊದಲ ಬಾರಿ ನಿರ್ದೇಶಕನಾದ ರಣದೀಪ್ ಹೂಡಾ.
- ಚಿತ್ರದಲ್ಲಿ ನಟನೆ, ನಿರ್ದೇಶನ ಹಾಗೂ ಸಹ-ಬರಹಗಾರನಾಗಿ ಜವಾಬ್ದಾರಿ ನಿಭಾಯಿಸಿದ್ದ ಪ್ರತಿಭಾವಂತ.
- ಈ ಪ್ರಶಸ್ತಿಯಿಂದ ದೇಶಭಕ್ತಿಯ ಪರಂಪರೆಯು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
ಪ್ರತಿಷ್ಠಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಬಾಲಿವುಡ್ನ ಬಹುಮುಖ ಪ್ರತಿಭೆ ರಣದೀಪ್ ಹೂಡಾ (Randeep Hooda) ಅವರು ತಮ್ಮ ಚೊಚ್ಚಲ ನಿರ್ದೇಶನದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ (Swatantryaveer Savarkar) ಸಿನಿಮಾಗಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ (Best Debut Director) ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ, ಮುಖ್ಯ ಭೂಮಿಕೆಯಲ್ಲಿ ನಟಿಸಿ, ಸಹ-ಬರಹಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಗೌರವಕ್ಕೆ ಪಾತ್ರರಾದ ಬೆನ್ನಲ್ಲೇ ರಣದೀಪ್ ಹೂಡಾ ಅವರು ಚಿತ್ರದ ಜರ್ನಿ ಮತ್ತು ತಾವು ಎದುರಿಸಿದ ಸವಾಲುಗಳ ಕುರಿತು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.
ನನ್ನ ಶಕ್ತಿ ಮೀರಿದ ಸಿನಿಮಾ ಇದಾಗಿತ್ತು:
ಪ್ರಶಸ್ತಿ ಘೋಷಣೆಯಾದ ನಂತರ ಸಂತಸ ಹಂಚಿಕೊಂಡ ರಣದೀಪ್, ‘ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಒಲಿದಿರುವುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾ ನನ್ನ ಜೀವನದಲ್ಲಿ ನಾನು ಮಾಡಿರುವ ಇತರ ಎಲ್ಲಾ ಕೆಲಸಗಳಿಗಿಂತಲೂ ಹೆಚ್ಚಿನ ಶ್ರಮ ಮತ್ತು ಬದ್ಧತೆಯನ್ನು ಕೇಳಿತ್ತು. ನನ್ನಲ್ಲಿದ್ದ ಶಕ್ತಿಯನ್ನೆಲ್ಲಾ ನಾನು ಈ ಚಿತ್ರಕ್ಕಾಗಿ ಧಾರೆ ಎರೆದಿದ್ದೇನೆ’ ಎಂದಿದ್ದಾರೆ.
ಚಿತ್ರೀಕರಣದ ಸವಾಲುಗಳ ಬಗ್ಗೆ ನೆನೆದ ಅವರು, ‘ಈ ಸಿನಿಮಾದ ಪಯಣದ ಪ್ರತಿಯೊಂದು ಹಂತದಲ್ಲೂ ನಮಗೆ ಅಡೆತಡೆಗಳು ಎದುರಾದವು. ಆದರೆ, ಆ ಎಲ್ಲಾ ಸವಾಲುಗಳನ್ನು ಜಯಿಸಿ ನಾವು ಮುನ್ನಡೆದಿದ್ದಕ್ಕೆ ನನಗೆ ಹೆಮ್ಮೆಯಿದೆ. ಎಷ್ಟೇ ಕಷ್ಟಗಳು ಬಂದರೂ, ಯಾವುದೋ ಒಂದು ಅದೃಶ್ಯ ಶಕ್ತಿ ನಮಗೆ ಧೃತಿಗೆಡದೆ ಮುನ್ನಡೆಯಲು ಧೈರ್ಯ ನೀಡುತ್ತಿತ್ತು’ ಎಂದು ಹೇಳಿದ್ದಾರೆ.
ಸಾವರ್ಕರ್ ತ್ಯಾಗದ ಮುಂದೆ ನಮ್ಮ ಕಷ್ಟ ಶೂನ್ಯ:
ಚಿತ್ರದಲ್ಲಿ ನಟನಾಗಿ, ಬರಹಗಾರನಾಗಿ ಹಾಗೂ ಮೊದಲ ಬಾರಿಗೆ ನಿರ್ದೇಶಕನಾಗಿ ಮೂರು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಹಂಚಿಕೊಂಡ ಹೂಡಾ, ‘ವೀರ್ ಸಾವರ್ಕರ್ ಅವರ ಕಥೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಪ್ರೇಕ್ಷಕರಿಗೆ ತಲುಪಿಸಬೇಕೆಂಬ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು. ಹಾಗಾಗಿ ನಾನು ನನ್ನ ಸರ್ವಸ್ವವನ್ನೂ ಈ ಚಿತ್ರಕ್ಕೆ ನೀಡಿದ್ದೇನೆ. ಈ ಸಿನಿಮಾ ಮಾಡುವಾಗ ನಾವು ಅನುಭವಿಸಿದ ಕಷ್ಟಗಳು, ವೀರ್ ಸಾವರ್ಕರ್ ಅವರು ದೇಶಕ್ಕಾಗಿ ಸವೆಸಿದ ಜೀವನ ಮತ್ತು ಮಾಡಿದ ತ್ಯಾಗಕ್ಕೆ ಹೋಲಿಸಿದರೆ ತೀರಾ ಶೂನ್ಯ’ ಎಂದು ಗೌರವ ಸಲ್ಲಿಸಿದರು.
ಇದನ್ನೂ ಓದಿ: ಸಾವರ್ಕರ್ ಮೇಲಿನ ಗೌರವಕ್ಕೆ ಈ ರೀತಿ ಬದಲಾದ ನಟ ರಣದೀಪ್ ಹೂಡಾ
ಯುವ ಪೀಳಿಗೆಗೆ ಪ್ರೇರಣೆಯಾಗಲಿ:
ತಮ್ಮ ಇಡೀ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ‘ಪ್ರತಿಯೊಂದು ಕಷ್ಟ-ಸುಖದಲ್ಲೂ ನನ್ನ ಬೆನ್ನಿಗೆ ನಿಂತು, ಈ ಕನಸನ್ನು ನನಸು ಮಾಡಿದ ಇಡೀ ತಂಡಕ್ಕೆ ನಾನು ಚಿರಋಣಿ. ಈ ಗೌರವ ಕೇವಲ ನನಗೊಬ್ಬನಿಗೆ ಸಂದಿದ್ದಲ್ಲ, ನಮ್ಮ ಇಡೀ ತಂಡಕ್ಕೆ ಸೇರಿದ್ದು. ಈ ಪ್ರಶಸ್ತಿಯು ಮುಂಬರುವ ಯುವ ಪೀಳಿಗೆಗೆ ವೀರ್ ಸಾವರ್ಕರ್ ಅವರ ದೇಶಭಕ್ತಿಯ ಪರಂಪರೆಯನ್ನು ಅರಿಯಲು ಮತ್ತು ಅದರ ಬಗ್ಗೆ ಯೋಚಿಸಲು ಪ್ರೇರಣೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಮಾತು ಮುಗಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




