ಬಡವರ ಮಗನ ಅದ್ಧೂರಿ ಮದುವೆ, ಡಾಲಿ ವಿವಾಹದ ಬಗ್ಗೆ ತರಹೇವಾರಿ ಪ್ರತಿಕ್ರಿಯೆ
Daali Dhananjay weds Dhanyatha: ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ಮದುವೆ ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ಸಾವಿರಾರು ಮಂದಿ ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆದರೆ ಕೆಲವರು ಡಾಲಿ ಅದ್ಧೂರಿ ಮದುವೆ ಆದ ಬಗ್ಗೆ ತಕರಾರು ಎತ್ತಿದ್ದಾರೆ. ಟೀಕೆ ಮಾಡಿದ್ದಾರೆ. ಆದರೆ ಇನ್ನು ಕೆಲವರು ಡಾಲಿಯ ಬೆಂಬಲಕ್ಕೆ ನಿಂತಿದ್ದು, ಡಾಲಿ ಮಾಡಿದ್ದು ಸರಿ ಇದೆ ಎಂದು ವಾದಿಸಿದ್ದಾರೆ.

ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ವಿವಾಹ ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. 27 ಎಕರೆ ಬೃಹತ್ ಪ್ರದೇಶದಲ್ಲಿ ಭರ್ಜರಿಯಾಗಿ ಎರಡು ಸೆಟ್ಗಳನ್ನು ನಿರ್ಮಿಸಿ, ಮೂರು ಎಕರೆಯಷ್ಟು ವಿಶಾಲವಾದ ಊಟದ ಹಾಲ್ ನಿರ್ಮಾಣ ಮಾಡಿ ಎರಡು ದಿನದಲ್ಲಿ ಸುಮಾರು 40 ರಿಂದ ಐವತ್ತು ಸಾವಿರ ಮಂದಿಗೆ ಭರ್ಜರಿ ಊಟ ಹಾಕಿಸಿ ಬಲು ಅದ್ಧೂರಿಯಾಗಿ ನಟ ಡಾಲಿ ಮದುವೆ ಆಗಿದ್ದಾರೆ. ಆದರೆ ಡಾಲಿಯ ಈ ಅದ್ಧೂರಿ ಮದುವೆ ಹಲವರ ಕಣ್ಣು ಕುಕ್ಕಿಸಿದೆ. ಕೆಲವರಿಗೆ ಜಠರದಲ್ಲಿ ಆಮ್ಲ ಉತ್ಪತ್ತಿಯಾಗುವಂತೆ (ಹೊಟ್ಟೆ ಉರಿ) ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಡಾಲಿಯ ಅದ್ಧೂರಿ ಮದುವೆ ಬಗ್ಗೆ ತರಹೇವಾರಿ ಚರ್ಚೆಗಳು ಚಾಲ್ತಿಯಲ್ಲಿದೆ.
ಡಾಲಿ ಧನಂಜಯ್ ಮೊದಲಿನಿಂದಲೂ ಬಸವತತ್ವ, ಶರಣತತ್ವ ಪಾಲಿಸಿಕೊಂಡು ಬಂದವರು. ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವ ಡಾಲಿ ಧನಂಜಯ್ ಕುವೆಂಪು ಅವರ ಆಲೋಚನೆಗಳ ಬಗ್ಗೆ ಗೌರವ ಉಳ್ಳವರು. ಅಲ್ಲದೆ ಸಿನಿಮಾಕ್ಕೆ ಬಂದು ಹೀರೋ ಆದ ಬಳಿಕ ಬಡವರ ಮಕ್ಳು ಬೆಳೀಬೇಕು ಎಂಬ ಸ್ಲೋಗನ್ ಇಟ್ಟುಕೊಂಡು ಅದೇ ನಿಟ್ಟಿನಲ್ಲಿ, ಬಡ, ಮಧ್ಯಮ ವರ್ಗದ ಪ್ರತಿಭೆಗಳಿಗೆ ಸಿನಿಮಾ ರಂಗದಲ್ಲಿ ಕೆಲಸ ಕೊಡುವ ಕಾರ್ಯ ಮಾಡುತ್ತಿದ್ದಾರೆ.
ಹಲವು ಜನರಿಗೆ ವಿಶೇಷವಾಗಿ, ಬಡ, ಮಧ್ಯಮ ವರ್ಗದ ಯುವಕರಿಗೆ ಆದರ್ಶವಾಗಿರುವ ಡಾಲಿ ಧನಂಜಯ್ ಶ್ರೀಮಂತರನ್ನು ನಾಚಿಸುವಂತೆ ಅದ್ಧೂರಿಯಾಗಿ, ವೈಭವೋಪೇತವಾಗಿ ಮದುವೆ ಆಗುತ್ತಿರುವುದಕ್ಕೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಬಡವರ ಮಕ್ಳು ಬೆಳೀಬೇಕು ಎಂದು ಹೇಳುತ್ತಾ ತಾನು ಶ್ರೀಮಂತರಂತೆ ವಿವಾಹ ಆಗುತ್ತಿದ್ದಾನೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಡಾಲಿಗೆ ಬಸವತತ್ವ, ಕುವೆಂಪು ಆಲೋಚನೆಗಳ ಬಗ್ಗೆ ಗೌರವ ಇದ್ದಿದ್ದರೆ ಮಂತ್ರ ಮಾಂಗಲ್ಯ ಅಥವಾ ಲಿಂಗ ಮಾಂಗಲ್ಯ ಆಗಬಹುದಿತ್ತು, ಈಗ ಡಾಲಿ ಆಗುತ್ತಿರುವ ಅದ್ಧೂರಿ ವಿವಾಹ ಬಸವ ತತ್ವಕ್ಕೆ ವಿರುದ್ಧವಾಗಿದೆ ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಆದರೆ ಡಾಲಿಯ ಬೆಂಬಲಕ್ಕೆ ಹಲವರು ಬಂದಿದ್ದು, ಬಡವರ ಮಕ್ಕಳು ಬಡವರಾಗಿಯೇ ಇರಬೇಕು ಎಂಬುದಿಲ್ಲ. ಇಂದು ಬಡವನ ಮಗನೊಬ್ಬ ಬೆಳೆದು ಇಡೀ ರಾಜ್ಯದ ಶಕ್ತಿಕೇಂದ್ರವನ್ನು ತನ್ನ ಮದುವೆಗೆ ಕರೆಸಿಕೊಂಡಿದ್ದಾನೆ. ಯಾವುದೇ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಬಂದು ಇಡೀ ಚಿತ್ರರಂಗ ತನ್ನ ಮದುವೆಯಲ್ಲಿ ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದಾನೆ. ಶ್ರೀಮಂತರು ನಾಚುವಂತೆ ಬಡವರ ಮಗನೊಬ್ಬ ಮದುವೆ ಆಗಿದ್ದಾನೆ ಇದೆಲ್ಲ ಹೆಮ್ಮೆಯ ವಿಷಯ ಆಗಬೇಕಿತ್ತು, ಆದರೆ ಇದನ್ನೇ ಕೆಲವರು ಟೀಕೆಗೆ ಬಳಸುತ್ತಿರುವುದು ಬೇಸರದ ಸಂಗತಿ ಎಂದು ವಿಷ್ಣುವರ್ಧನ್ ಅಭಿಮಾನಿ ಬಳಗದ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಇನ್ನೂ ಕೆಲವರು ಡಾಲಿಯ ಬೆಂಬಲಕ್ಕೆ ನಿಂತಿದ್ದು, ಡಾಲಿ, ಸೆಲೆಬ್ರಿಟಿ ಆಗಿದ್ದು ಅವರಿಗೆ ಅಭಿಮಾನಿಗಳೆಡೆಗೆ ಕೆಲವು ಕರ್ತವ್ಯಗಳು, ನಿರ್ದಿಷ್ಟ ರೀತಿಯಲ್ಲಿ ಪ್ರೀತಿ ತೋರಬೇಕಾದ ಒತ್ತಡ ಇರುತ್ತದೆ. ಹಾಗಾಗಿ ತಮಗಾಗಿ ಅಲ್ಲದೇ ಇದ್ದರೂ ಚಿತ್ರರಂಗಕ್ಕಾಗಿ, ತಮ್ಮ ಅಭಿಮಾನಿಗಳಿಗಾಗಿ ಅದ್ಧೂರಿ ಕಾರ್ಯಕ್ರಮ ಮಾಡಬೇಕಾಗಿರುತ್ತದೆ ಎಂದಿದ್ದಾರೆ. ನಿನ್ನೆ (ಫೆಬ್ರವರಿ 15) ಟಿವಿ9 ಜೊತೆಗೆ ಮಾತನಾಡಿದ ಅರುಣ್ ಸಾಗರ್, ‘ಡಾಲಿ ಧನಂಜಯ್ ಅವರದ್ದು ಕೆರೆಯ ನೀರಲು ಕೆರೆಗೆ ಚೆಲ್ಲಬೇಕು ಎಂಬ ನೀತಿ. ಡಾಲಿ ಅದ್ಧೂರಿಯಾಗಿ ವಿವಾಹ ಆಗುವ ಮೂಲಕ ತಾವು ಗಳಿಸಿದ ಹಣವನ್ನು ಮತ್ತೆ ಪರೋಕ್ಷವಾಗಿ ಸಮಾಜಕ್ಕೆ ನೀಡುತ್ತಿದ್ದಾರೆ. ಡಾಲಿಯ ಈ ಮದುವೆಯಿಂದ ಹಲವಾರು ಮಂದಿಗೆ ತಾತ್ಕಾಲಿಕ ಉದ್ಯೋಗ ದೊರೆತಿದೆ. ಸಂಬಳಗಳು ದೊರೆತಿದೆ. ಸಾವಿರಾರು ಮಂದಿಗೆ ಈ ಮದುವೆಯಿಂದ ನೆರವಾಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 16 February 25