‘ಬಾಸ್’ ಸಿನಿಮಾಗೆ ಸಂಕಷ್ಟ; ನೋಟಿಸ್ ಕೊಟ್ಟ ದರ್ಶನ್ ಲಾಯರ್

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವಾಗಲೇ, ‘ಬಾಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟೀಸರ್ ರೇಣುಕಾಸ್ವಾಮಿ ಪ್ರಕರಣವನ್ನು ಹೋಲುತ್ತದೆ ಮತ್ತು "ನೈಜ ಘಟನೆ ಆಧಾರಿತ" ಎಂದು ಹೇಳಿಕೊಳ್ಳುವುದರಿಂದ ವಿವಾದ ಸೃಷ್ಟಿಯಾಗಿದೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವುದರಿಂದ, ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿ, ಚಿತ್ರಕ್ಕೆ ಪ್ರಮಾಣೀಕರಣ ನೀಡದಂತೆ ಕೋರಿದ್ದಾರೆ.

‘ಬಾಸ್’ ಸಿನಿಮಾಗೆ ಸಂಕಷ್ಟ; ನೋಟಿಸ್ ಕೊಟ್ಟ ದರ್ಶನ್ ಲಾಯರ್
ದರ್ಶನ್
Edited By:

Updated on: Mar 16, 2026 | 3:12 PM

ನಟ ದರ್ಶನ್ ಅವರು (Darshan) ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಈ ಪ್ರಕರಣದಲ್ಲಿ ಎ2 ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದ ವಿವರ ಎಲ್ಲರಿಗೂ ತಿಳಿದಿದೆ. ಚಾರ್ಜ್​​ಶೀಟ್​​​ನಲ್ಲಿ ಎಲ್ಲ ವಿಷಯವನ್ನೂ ವಿವರವಾಗಿ ಬರೆಯಲಾಗಿದೆ. ಹೀಗಿರುವಾಗಲೇ ‘ಬಾಸ್’ ಹೆಸರಿನ ಸಿನಿಮಾ ಸೆಟ್ಟೇರಿ, ರಿಲೀಸ್​​​ಗೆ ರೆಡಿ ಆಗಿದೆ. ಈ ಸಿನಿಮಾ ಟೀಸರ್ ನೋಡಿದರೆ ಇದು ದರ್ಶನ್ ಪ್ರಕರಣವನ್ನೇ ನೆನಪಿಸಿದೆ. ಇದು ಚರ್ಚೆಗೆ ಕಾರಣ ಆಗಿತ್ತು. ಹೀಗಿರುವಾಗಲೇ ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಸಿನಿಮಾಗೆ ಸೆನ್ಸಾರ್ ಮಾಡದಂತೆ ಕೋರಿದೆ.

ರೇಣಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಬೆಂಗಳೂರಿನ ಪಟ್ಟಣಗೆರೆ ಶೆಡ್​ ಅಲ್ಲಿ ಕೊಲೆ ಮಾಡಲಾಯಿತು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಕೂಡ ಸ್ಥಳದಲ್ಲಿ ಇದ್ದರು ಎನ್ನುವ ಆರೋಪ ಇದೆ. ಆ ಬಳಿಕ ಹೆಣವನ್ನು ಮೋರಿ ಪಕ್ಕದಲ್ಲಿ ಹಾಕಲಾಯಿತು. ಹೆಣ ಬಿಸಾಕಿದವರು ಸಿಕ್ಕಿ ಬಿದ್ದರು. ನಂತರ ದರ್ಶನ್ ಹೆಸರು ಕೂಡ ಹೊರಬಿತ್ತು. ಅವರನ್ನು ಬಂಧಿಸಲಾಯಿತು. ತಾವು ನಿರಪರಾಧಿ ಎಂದು ಅವರು ಹೇಳುತ್ತಾ ಬರುತ್ತಿದ್ದಾರೆ.

ಈಗ ರಿಲೀಸ್ ಆಗಿರೋ ‘ಬಾಸ್’ ಸಿನಿಮಾ ಟೀಸರ್ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವ ರೀತಿಯಲ್ಲಿ ಇದೆ. ಟೀಸರ್​​​ನಲ್ಲಿ ಶೆಡ್​, ಮೋರಿಗಳನ್ನು ತೋರಿಸಲಾಗಿದೆ. ಸೆಲೆಬ್ರಿಟಿ ಓರ್ವ ಈ ಪ್ರಕರಣದಲ್ಲಿ ಸಿಲುಕುತ್ತಾನೆ. ತಾನು ನಿರಪರಾಧಿ ಎಂದು ಹೇಳುತ್ತಾನೆ. ಇದು ಕೇವಲ ಕಾಲ್ಪನಿಕ ಕಥೆ ಎಂದರೆ ಪ್ರಕರಣ ಅಷ್ಟು ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲವೇನೋ. ಆದರೆ, ಇದು ನೈಜ ಘಟನೆ ಆಧಾರಿತ ಕಥೆ ಎಂದು ಹೇಳಿರೋದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಈ ಪ್ರಕರಣ ಇನ್ನೂ ಕೋರ್ಟ್​​​ನಲ್ಲಿದೆ. ದರ್ಶನ್ ತಪ್ಪು ಮಾಡಿದ್ದಾನೆ ಅಥವಾ ಮಾಡಿಲ್ಲ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಅದಕ್ಕೂ ಮೊದಲೇ ಈ ಘಟನೆ ಆಧರಿಸಿ ಸಿನಿಮಾ ಮಾಡೋದು ಎಷ್ಟು ಸರಿ ಎಂಬ ಪ್ರಶ್ನೆ ಕೆಲವರದ್ದು. ಈಗ ದರ್ಶನ್ ಪರ ವಕೀಲರು ಸೆನ್ಸರ್ ಮಂಡಳಿಗೆ ನೋಟೀಸ್ ನೀಡಿ, ಯಾವುದೇ ಕಾರಣಕ್ಕೂ ಸಿನಿಮಾಗೆ ಸೆನ್ಸಾರ್ ಮಾಡಬಾರದು ಎಂದು ಹೇಳಿದ್ದಾರೆ. ನಿರ್ದೇಶಕ ಲವ ಆ್ಯಕ್ಷನ್ ಕಟ್ ಹೇಳಿದ್ದು, ತನುಷ್ ಶಿವಣ್ಣ ನಾಯಕನಾಗಿ ಸಿನಿಮಾದಲ್ಲ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us