ಶಿಕ್ಷೆ ಆಗುವ ನಂಬಿಕೆಯಿದೆ: ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ

ಹೈಕೋರ್ಟ್​ನಲ್ಲಿ ಇಂದು (ಡಿಸೆಂಬರ್​ 13) ದರ್ಶನ್​, ಪವಿತ್ರಾ ಗೌಡ, ಜಗದೀಶ್​, ಅನುಕುಮಾರ್​, ಪ್ರದೋಶ್, ಲಕ್ಷ್ಮಣ್, ನಾಗರಾಜ್​ ಅವರಿಗೆ ಜಾಮೀನು ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಂತಾಗಿದೆ. ಈ ಕುರಿತು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಶಿಕ್ಷೆ ಆಗುವ ನಂಬಿಕೆಯಿದೆ: ದರ್ಶನ್​ಗೆ ಬೇಲ್ ಸಿಕ್ಕ ಬಳಿಕ ರೇಣುಕಾಸ್ವಾಮಿ ತಂದೆ ಹೇಳಿಕೆ
ಕಾಶಿನಾಥಯ್ಯ
Edited By:

Updated on: Dec 13, 2024 | 4:10 PM

ನಟ ದರ್ಶನ್ ಮತ್ತು ಅವರ ಗ್ಯಾಂಗ್​ನವರಿಗೆ ಜಾಮೀನು ನೀಡಲಾಗಿದೆ. ರೇಣಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಎಲ್ಲ ಆರೋಪಿಗಳಿಗೆ ಸದ್ಯಕ್ಕೆ ರಿಲೀಫ್​ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರೇಣಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ್ದಾರೆ. ‘ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಜಾಮೀನು ಮಂಜೂರು ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ವಿಚಾರಣೆ ಬಳಿಕ ಸೂಕ್ತ ನ್ಯಾಯ ಸಿಗುವ ನಂಬಿಕೆಯಿದೆ. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಆಗಿರಬಹುದು. ಆದರೆ ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ’ ಎಂದು ಕಾಶಿನಾಥಯ್ಯ ಅವರು ಹೇಳಿದ್ದಾರೆ.

‘ಸರ್ಕಾರ ನಮ್ಮ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಹೇಳುತ್ತಾ ಕಾಶೀನಾಥಯ್ಯ ಅವರು ಭಾವುಕರಾಗಿದ್ದಾರೆ. ‘ದರ್ಶನ್ ನಮ್ಮ ಜತೆ ಮಾತುಕತೆಗೆ ಬರುವ ವಿಚಾರ ಇಲ್ಲ. ದರ್ಶನ್ ಜತೆ ಮಾತನಾಡುವಂಥದ್ದು ಏನೂ ಇಲ್ಲ. ನಾವು ಮಗನ ಕಳೆದುಕೊಂಡು ದುಖ:ದಲ್ಲಿದ್ದೇವೆ. ನಮಗೆ ಮಗ ಬೇಕೆ ಹೊರತು ಮಾತುಕತೆ ಏನೂ ಬೇಕಿಲ್ಲ’ ಎಂದು ಕಾಶಿನಾಥಯ್ಯ ಅವರು ಹೇಳಿದ್ದಾರೆ.

‘ಈವರೆಗೆ ನಮಗೆ ಮಾತುಕತೆಗೆಂದು ಯಾರೂ ಸಂಪರ್ಕ ಮಾಡಿಲ್ಲ. ಮಾತುಕತೆಗೆಂದು ನಮ್ಮ ಸಂಪರ್ಕ ಮಾಡಲು ಅವಕಾಶ ಇಲ್ಲ. ನಾವು ದರ್ಶನ್ ಜತೆ ಮಾತುಕತೆ ಬಗ್ಗೆ ಅಪೇಕ್ಷೆಪಡಲ್ಲ. ಸಿಎಂ ಭೇಟಿ ಮಾಡಿ ಮನವಿ ಮಾಡುವ ಬಗ್ಗೆ ಆಪ್ತರ ಜತೆ ಚರ್ಚಿಸುತ್ತೇವೆ. ಸರ್ಕಾರ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದೆ. ಜಾಮೀನು ಪ್ರಶ್ನಿಸಿ ಸಹ ಸುಪ್ರೀಂ ಮೊರೆ ಹೋಗುವ ವಿಶ್ವಾಸವಿದೆ. ಸಿಎಂ ಹಾಗೂ ಸರ್ಕಾರದ ಮೇಲೆ ಒತ್ತಡ ಹಾಕಲ್ಲ, ಯೋಚಿಸುತ್ತೇವೆ’ ಎಂದಿದ್ದಾರೆ ಕಾಶಿನಾಥಯ್ಯ.

ಇದನ್ನೂ ಓದಿ:  ರೇಣುಕಾ ಸ್ವಾಮಿ ಪ್ರಕರಣ: ದರ್ಶನ್​ ಸೇರಿ 7 ಆರೋಪಿಗಳಿಗೆ ಜಾಮೀನು

ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂಬ ಕಾರಣದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಲಾಗಿತ್ತು. ಈ ಹಲ್ಲೆಯಿಂದಾಗಿ ಆತ ಮೃತಪಟ್ಟ ಎಂಬ ಆರೋಪಿ ಇದೆ. ಈ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ದರ್ಶನ್​ ಎ2 ಆಗಿದ್ದಾರೆ. ಅವರಿಗೆ ಈಗ ಜಾಮೀನು ಸಿಕ್ಕಿದೆ. ಆದರೆ ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us