ನೇಹಾ ಹಿರೇಮಠ್ ಸಾವಿಗೆ ನ್ಯಾಯ ಕೇಳಿದ ಸೆಲೆಬ್ರಿಟಿಗಳು; ಏನಂದ್ರು ದರ್ಶನ್​?

ಪ್ರಣಿತಾ ಸುಭಾಷ್​, ಶಿವರಾಜ್​ಕುಮಾರ್​, ದರ್ಶನ್​, ಧ್ರುವ ಸರ್ಜಾ, ಕಾರುಣ್ಯಾ ರಾಮ್​, ರಚಿತಾ ರಾಮ್​, ರಿಷಬ್​ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ನೇಹಾ ಹಿರೇಮಠ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಹಾ ಸಾವಿಗೆ ಕಾರಣವಾದ ಫಯಾಜ್​ಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ನೇಹಾ ಹಿರೇಮಠ್ ಸಾವಿಗೆ ನ್ಯಾಯ ಕೇಳಿದ ಸೆಲೆಬ್ರಿಟಿಗಳು; ಏನಂದ್ರು ದರ್ಶನ್​?
ದರ್ಶನ್​, ಶಿವರಾಜ್​ಕುಮಾರ್​, ನೇಹಾ ಹಿರೇಮಠ್​

Updated on: Apr 21, 2024 | 12:03 PM

ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ್​ (Neha Hiremath) ಸಾವಿಗೆ ನ್ಯಾಯ ಸಿಗಬೇಕು ಎಂದು ಎಲ್ಲರೂ ಆಗ್ರಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ ಕುರಿತು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಧ್ವನಿ ಎತ್ತಿದ್ದಾರೆ. ನಟ ದರ್ಶನ್​ ಕೂಡ ನೇಹಾ ಹಿರೇಮಠ್ ಹತ್ಯೆ (Neha Hiremath Death) ಬಗ್ಗೆ ಪೋಸ್ಟ್​ ಮಾಡಿದ್ದಾರೆ. ‘ಪ್ರೀತಿಯ ಹೆಸರಲ್ಲಿ ಇಂತಹ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನೂ ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ’ ಎಂದು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್ (Darshan)​ ಬರೆದುಕೊಂಡಿದ್ದಾರೆ. ಇದರ ಜೊತೆಗೆ #JusticeForNehaHiremath ಎಂಬ ಹ್ಯಾಶ್​ಟ್ಯಾಗ್​ ಬಳಸಿದ್ದಾರೆ.

ನಟಿ ಪ್ರಣಿತಾ ಸುಭಾಶ್ ಕೂಡ ಈ ಬಗ್ಗೆ ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ‘ನೇಹಾ ಹಿರೇಮಠ್​ ಅವರ ಕಥೆ ಹೇಳಿ ಬಹಳ ನೋವಾಯಿತು. ಅವರ ಕುಟುಂಬಕ್ಕೆ ದೇವರ ಶಕ್ತಿ ನೀಡಲಿ. ಜಾತಿ, ಧರ್ಮ, ಕೋಮುವಾದದ ವಿಚಾರಗಳು ಕೇವಲ ಓಟ್​ ಬ್ಯಾಂಕ್​ ರಾಜಕೀಯ ಆಗಿರುವ ಈ ದೇಶದಲ್ಲಿ ನ್ಯಾಯ ಗೆಲ್ಲುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇನೆ’ ಎಂದು ಪ್ರಣಿತಾ ಸುಭಾಷ್​ ಬರೆದುಕೊಂಡಿದ್ದಾರೆ.

‘ಮನಸ್ಸಿನಲ್ಲಿ ಹೆಚ್ಚು ಆತಂಕ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇದೆಯಾ? ನೇಹಾ ಹಿರೇಮಠ್ ಅವರ ಹತ್ಯೆ ಪ್ರತಿಯೊಬ್ಬ ಹೆಣ್ಣುಮಗಳಿಗೂ ಹಾಗು ಪೋಷಕರಿಗೆ ಆತಂಕ ಉಂಟು ಮಾಡಿದೆ. ಈ ಹೀನ ಕೃತ್ಯವನ್ನು ಮಾಡಿರುವ ಪಾಪಿ ಫಯಾಜ್​ಗೆ ಅತ್ಯಂತ ಕ್ರೂರವಾದ ಶಿಕ್ಷೆಯಾಗಬೇಕು. ನೇಹಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ನಟಿ ಕಾರುಣ್​ ರಾಮ್​ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ’ ಎಂದು ನಟ ಶಿವರಾಜ್​ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನೇಹಾ ಹಿರೇಮಠ್ ಹತ್ಯೆ ಅತ್ಯಂತ ಹೀನ ಕೃತ್ಯ’: ಧ್ರುವ ಸರ್ಜಾ ಆಕ್ರೋಶ

ಕೆಲವು ಸೆಲೆಬ್ರಿಟಿಗಳು ಈ ಘಟನೆ ಬಗ್ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:08 am, Sun, 21 April 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us