ಜೈಲಿನಲ್ಲಿ ದರ್ಶನ್​​ಗೆ ಮತ್ತೆ ಸಂಕಷ್ಟ: ವಾಕ್ ಮಾಡಲು ಅವಕಾಶ ಇಲ್ಲ; ಕಠಿಣ ನಿಯಮ ಜಾರಿ

ಪರಪ್ಪನ ಅಗ್ರಹಾರ ಮುಖ್ಯ ಜೈಲು ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ನೇಮಕ ಆಗಿದ್ದಾರೆ. ಅವರು ನೇಮಕ ಆದ ಬಳಿಕ ಜೈಲಿನ ಎಲ್ಲ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಾಗಿದೆ. ವಾಕಿಂಗ್ ಮಾಡಲು ಕೂಡ ಅವಕಾಶ ಇಲ್ಲದಂತಾಗಿದೆ.

ಜೈಲಿನಲ್ಲಿ ದರ್ಶನ್​​ಗೆ ಮತ್ತೆ ಸಂಕಷ್ಟ: ವಾಕ್ ಮಾಡಲು ಅವಕಾಶ ಇಲ್ಲ; ಕಠಿಣ ನಿಯಮ ಜಾರಿ
Darshan
Edited By:

Updated on: Nov 28, 2025 | 6:32 PM

ನಟ ದರ್ಶನ್ (Darshan Thoogudeepa) ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇನ್ನಷ್ಟು ಕಷ್ಟಪಡಬೇಕಾದ ಸಂದರ್ಭ ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಅವರು ಕನಿಷ್ಟ ಸೌಲಭ್ಯಗಳಿಗಾಗಿ ಮತ್ತೆ ಪರದಾಡಬೇಕಾಗಿದೆ. ಈ ಮೊದಲು ಅವರಿಗೆ ವಾಕಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಈಗ ಅದನ್ನು ಕೂಡ ನಿರಾಕರಿಸಲಾಗಿದೆ. ಜೊತೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ನಡೆದಿರುವುದು ಪದೇಪದೇ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಜೈಲು ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಜೈಲಿನಲ್ಲಿ ಬದಲಾವಣೆ ತರಲು ಅಂಶು ಕುಮಾರ್ ಅವರು ಮುಂದಾಗಿದ್ದಾರೆ. ಪ್ರತಿ ದಿನ ಐಪಿಎಸ್ ಅಧಿಕಾರಿಯಿಂದ ಜೈಲಿನಲ್ಲಿ ಮಾನಿಟರಿಂಗ್ ಮಾಡಲಾಗುತ್ತಿದೆ.

ಸಿಬ್ಬಂದಿಗಳಿಂದ ಪ್ರತಿದಿನ ಜೈಲಿನಲ್ಲಿ ತಪಾಸಣೆ ನಡೆಯುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರು ಜೈಲಿನೊಳಗೆ ಮೊಬೈಲ್ ಪತ್ತೆ ಆಗುತ್ತಲೇ ಇದೆ. ಮೊಬೈಲ್​​ ಫೋನ್​ಗಳಿಗೆ ಕಡಿವಾಣ ಹಾಕಲು ಐಪಿಎಸ್ ಅಧಿಕಾರಿ ಹರಸಾಹಸ ಮಾಡುತ್ತಿದ್ದಾರೆ. ಜೈಲಿನಲ್ಲಿ ಮೊಬೈಲ್ ಸಿಗುತ್ತಿದ್ದಂತೆಯೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಸಾಲು ಸಾಲು ಕೇಸ್ ದಾಖಲಾಗುತ್ತಿವೆ. ಅಂಶು ಕುಮಾರ್ ಅವರ ಕಠಿಣ ಕ್ರಮದಿಂದ ದರ್ಶನ್ ಅವರಿಗೂ ಸಂಕಷ್ಟ ಶುರುವಾಗಿದೆ.

ಸದ್ಯಕ್ಕೆ ದರ್ಶನ್ ಅವರಿಗೆ ವಾಕಿಂಗ್ ಮಾಡಲು ಅವಕಾಶ ಇಲ್ಲ. ರೂಮಿಗೆ ಬರುತ್ತಿದ್ದ ಊಟ, ತಿಂಡಿ ಕೂಡ ಬಂದ್ ಆಗಿದೆ. ದರ್ಶನ್ ಈಗ ತಾವೇ ಹೋಗಿ ಊಟ, ತಿಂಡಿ ತರಬೇಕಿದೆ. ಈ ಮೊದಲು ಜೈಲಿನ ಸಿಬ್ಬಂದಿಯೇ ದರ್ಶನ್ ಕೊಠಡಿಗೆ ಊಟ, ತಿಂಡಿ ತಂದು ಕೊಡುತ್ತಿದ್ದರು. ಈಗ ಅದನ್ನು ಬಂದ್ ಮಾಡಲಾಗಿದೆ. ಈ ರೀತಿಯ ನಿಯಮಗಳಿಂದ ದರ್ಶನ್ ಅವರಿಗೆ ಜೈಲುವಾಸ ಕಷ್ಟ ಆಗಲಿದೆ.

ಇದನ್ನೂ ಓದಿ: ನಟ ದರ್ಶನ್ 2ನೇ ಬಾರಿ ಜೈಲು ಸೇರಿ ಪರಪ್ಪನ ಅಗ್ರಹಾರದಲ್ಲಿ ಕಳೆಯಿತು 100 ದಿನ

ದರ್ಶನ್ ಅವರು ಈಗ ಬಟ್ಟೆ ಒಗೆಯಲು ಮತ್ತು ಒಣಗಿಸಲು ಮಾತ್ರ ಹೊರಗೆ ಬರಬೇಕು. ಅಲ್ಲದೇ ದರ್ಶನ್ ಕೊಠಡಿ ಹೊರಭಾಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ದರ್ಶನ್ ಕೊಠಡಿಗೆ ಹೋಗುವ ವಾರ್ಡರ್​ಗೆ ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯ ಮಾಡಲಾಗಿದೆ. ರೇಣುಕಾಸ್ವಾಮಿ ಕೇಸ್​​ನ ದೋಷಾರೋಪಣೆ ಈಗಾಗಲೇ ನಿಗದಿ ಆಗಿದೆ. ಸಾಕ್ಷಿಗಳ ವಿಚಾರಣೆ ನಡೆಯುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.