ಬ್ಯಾಂಕ್ ಲೂಟಿಗೆ ಇಳಿದ ದೀಕ್ಷಿತ್ ಶೆಟ್ಟಿ ಮತ್ತು ತಂಡ

Dheekshith Shetty: ‘ದಿಯಾ’ ಸಿನಿಮಾ ಮೂಲಕ ಗಮನ ಸೆಳೆದ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟರಾಗಿದ್ದಾರೆ. ದೀಕ್ಷಿತ್ ನಟಿಸಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬ್ಯಾಂಕ್ ಲೂಟಿಗೆ ಇಳಿದ ದೀಕ್ಷಿತ್ ಶೆಟ್ಟಿ ಮತ್ತು ತಂಡ
Follow us
|

Updated on: Dec 21, 2023 | 9:38 PM

‘ದಿಯಾ’ ಸಿನಿಮಾ ಮೂಲಕ ಗಮನ ಸೆಳೆದು ಇತ್ತೀಚೆಗೆ ತೆಲುಗಿನ ‘ದಸರಾ’ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರತಿಭೆ ಸಾಬೀತು ಮಾಡಿರುವ ದೀಕ್ಷಿತ್ ಶೆಟ್ಟಿ (Dheekshit Shetty) ನಾಯಕರಾಗಿ ನಟಿಸುತ್ತಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ತನ್ನ ಭಿನ್ನ ಹೆಸರು, ಪೋಸ್ಟರ್​ ಮೂಲಕ ಗಮನ ಸೆಳೆಯುತ್ತಿದೆ. ಈ ವರೆಗೆ ಭಾವುಕ, ರೊಮ್ಯಾಂಟಿಕ್, ಆಕ್ಷನ್ ಮಾದರಿಯ ಪಾತ್ರಗಳನ್ನು ಮಾಡುತ್ತಾ ಬಂದಿರುವ ದೀಕ್ಷಿತ್​ಗೆ ಇದು ಮೊದಲ ಹಾಸ್ಯಮಿಶ್ರಿತ ಆಕ್ಷನ್ ಸಿನಿಮಾ ಆಗಿರಲಿದೆ.

‘ದಿಯಾ’ ಮೂಲಕ ಗುರುತಿಸಿಕೊಂಡ ಈ ಕನ್ನಡ ಪ್ರತಿಭೆ ಇದೀಗ ತಮಿಳು ,ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ನಾಯಕನಾಗಿ ನಟಿಸುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿರುವ ನಿರ್ಮಾಪಕ ಹೆಚ್. ಕೆ ಪ್ರಕಾಶ್ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾಕ್ಕೆ ಬಂಡವಾಳ ತೊಡಗಿಸಿದ್ದು ಹೊಸ ಪ್ರತಿಭಾವಂತ ನಿರ್ದೇಶಕ ಅಭಿಷೇಕ್ ಎಂ ಅವರಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದ್ದಾರೆ.

ಹಿಟ್ ಸಿನಿಮಾಗಳಾದ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲ ಸಿನೆಮಾಗಳಿಗೆ ಎಡಿಟರ್ ಆಗಿಯೂ ಕೆಲಸ ಮಾಡಿದ ಅನುಭವ ಅಭಿಷೇಕ್ ಎಂ ಅವರಿಗಿದೆ. ‘ಪಿನಾಕ’ ಹೆಸರಿನ ವಿಎಫ್​ಎಕ್ಸ್ ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ:ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​

ಬ್ಯಾಂಕ್ ಒಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿಸಿರುವ ಬಹುತೇಕ ನಟರು ಸಹ ಹೊಸಬರೇ ಎಂಬುದು ವಿಶೇಷ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ಅಶ್ವಿನ್ ರಾವ್, ಹಾಸ್ಟೇಲ್ ಹುಡುಗರು ಖ್ಯಾತಿಯ ಶ್ರೀ ವತ್ಸ, ಶ್ರೇಯಸ್ ಶರ್ಮಾ , ವಿನುತ ಇನ್ನಿತರು ಇದ್ದಾರೆ.

ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಹಾಗೂ ಚಿತ್ರದುರ್ಗ ಸುತ್ತ ಮುತ್ತ ಮುಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಜನವರಿ ಮೊದಲ ವಾರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ನಿರ್ಮಾಪಕರು ಚಿತ್ರವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಮೇಲೆ ತರುವ ಯೋಜನೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ