ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ದಿಗಂತ್, ಆದರೆ ಸಿನಿಮಾ ನಿಂತು ಹೋಗಿದ್ದೇಕೆ?

|

Updated on: Aug 28, 2024 | 8:38 PM

Diganth Manchale: ದಿಗಂತ್ ಕನ್ನಡದ ಜನಪ್ರಿಯ ನಟರಲ್ಲೊಬ್ಬರು. ಕನ್ನಡದಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರಾಗಿರುವ ದಿಗಂತ್, ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆ ಆಗಲಿಲ್ಲ.

ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ದಿಗಂತ್, ಆದರೆ ಸಿನಿಮಾ ನಿಂತು ಹೋಗಿದ್ದೇಕೆ?
Follow us on

ಕನ್ನಡ ಚಿತ್ರರಂಗ, ತುಸು ಕಡಿಮೆ ಬಳಸಿಕೊಂಡಿರುವ ನಟ ದಿಗಂತ್. ಹಲವು ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲ ಛಾತಿ ಇದ್ದಾಗಿಯೂ ಚಾಕಲೇಟ್ ಬಾಯ್ ಅಥವಾ ಕಾಮಿಡಿ ಹೀರೋ ಪಾತ್ರಗಳಿಗಷ್ಟೆ ದಿಗಂತ್​ ಅನ್ನು ಮೀಸಲಾಗಿಡಲಾಗಿದೆ. ಈಗಿನ ಕೆಲವು ದೊಡ್ಡ ಸ್ಟಾರ್ ನಟರ ಜೊತೆಗೆ ಹೋಲಿಸಬಹುದಾದ ಅಂದ, ಪ್ರತಿಭೆ ಇರುವ ನಟ ದಿಗಂತ್. ಕೆಲ ಪರಭಾಷೆ ಸಿನಿಮಾಗಳ ಅವಕಾಶಗಳೂ ಸಹ ದಿಗಂತ್​ಗೆ ಬಂದಿದ್ದಿದೆ. ಕೆಲ ವರ್ಷಗಳ ಹಿಂದೆಯಷ್ಟೆ ದಿಗಂತ್, ವಿಜಯ್ ದೇವರಕೊಂಡ ಜೊತೆಗೆ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದರು. ಕೆಲ ದಿನಗಳ ಚಿತ್ರೀಕರಣವೂ ನಡೆದಿತ್ತು. ಆದರೆ ಆ ಸಿನಿಮಾ ಮುಂದುವರೆಯಲಿಲ್ಲ. ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

‘ಅರ್ಜುನ್ ರೆಡ್ಡಿ’, ‘ಗೀತಾ ಗೋವಿಂದಂ’ ಹಿಟ್ ಆಗಿ ಆ ಬಳಿಕ ರಶ್ಮಿಕಾ ಮಂದಣ್ಣ ಜೊತೆಗೆ ‘ಡಿಯರ್ ಕಾಮರೇಡ್’ ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ 2020ರಲ್ಲಿ ‘ಹೀರೋ’ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದರು. ಆ ಸಿನಿಮಾದಲ್ಲಿ ದಿಗಂತ್ ಬಹಳ ಪ್ರಮುಖ ಪಾತ್ರದಲ್ಲಿ ನಟಿಸುವವರಿದ್ದರು. ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿ. ಆ ಸಿನಿಮಾದ ಚಿತ್ರೀಕರಣ ಸಹ ನಡೆದಿತ್ತು. ಆದರೆ ಕೇವಲ 10 ದಿನದ ಚಿತ್ರೀಕರಣದ ಬಳಿಕ ಸಿನಿಮಾ ನಿಂತು ಹೋಯಿತು.

ಇದನ್ನೂ ಓದಿ:ದೂದ್​ ಪೇಡಾ ಈಗ ‘ಮಿರ್ಚಿ ಮಲ್ಲಿಗೆ’; ‘ಉತ್ತರಕಾಂಡ’ ಸಿನಿಮಾದಲ್ಲಿ ದಿಗಂತ್ ಹೊಸ ಅವತಾರ

ದಿಗಂತ್ ಹೇಳಿರುವಂತೆ, ಆ ಸಿನಿಮಾ ಬೈಕ್ ರೇಸರ್​ಗಳ ಕುರಿತಾದ ಸಿನಿಮಾ ಆಗಿತ್ತಂತೆ. ಸಿನಿಮಾ ಚಿತ್ರೀಕರಣಕ್ಕೆ ಮುಂಚೆ ದಿಗಂತ್ ಹಾಗೂ ವಿಜಯ್ ದೇವರಕೊಂಡ ಅವರನ್ನು ಕೊಯಂಬತ್ತೂರಿನ ರೇಸ್ ಟ್ರ್ಯಾಕ್​ಗೆ ಕಳಿಸಿ ಐದು ದಿನಗಳ ಕಾಲ ಬೈಕ್ ರೇಸಿಂಗ್ ತರಬೇತಿ ಸಹ ಕೊಡಿಸಲಾಗಿತ್ತಂತೆ. ದೇಶದ ನಂಬರ್ ಒನ್ ಟ್ರ್ಯಾಕ್ ಬೈಕ್ ರೇಸರ್ ರಜನೀಕೃಷ್ಣನ್ ಅವರು ದಿಗಂತ್ ಹಾಗೂ ವಿಜಯ್​ಗೆ ತರಬೇತಿ ಕೊಟ್ಟಿದ್ದರಂತೆ. ಬಹಳ ಒಳ್ಳೆಯ ಸಮಯವನ್ನು ಅಲ್ಲಿ ಕಳೆದಿದ್ದಾಗಿ ನಟ ದಿಗಂತ್ ಹೇಳಿಕೊಂಡಿದ್ದಾರೆ.

‘ನಾನೊಬ್ಬ ಬೈಕರ್, ನನಗೆ ಬೈಕುಗಳೆಂದರೆ ಪಂಚ ಪ್ರಾಣ. ಬೈಕ್ ರೇಸ್ ತರಬೇತಿಯನ್ನು ನಾನು ಬಹಳ ಎಂಜಾಯ್ ಮಾಡಿದೆ. ರೇಸ್ ಬಗ್ಗೆ ಹಲವು ವಿಷಯಗಳನ್ನು ಕಲಿತುಕೊಂಡೆ. ಸಿನಿಮಾದ ಬಗ್ಗೆ ನಾನು ಬಹಳ ಎಕ್ಸೈಟ್ ಆಗಿದ್ದೆ. ಆದರೆ ಆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಹತ್ತು ದಿನಗಳಲ್ಲೇ ನಿಂತು ಹೋಯಿತು. ಆಗ ನನಗೆ ನಿಜಕ್ಕೂ ಬಹಳ ಬೇಸರವಾಯ್ತು’ ಎಂದಿದ್ದಾರೆ ದಿಗಂತ್. ಆ ಸಿನಿಮಾವನ್ನು ತಮಿಳಿನ ಆನಂದ್ ಅಣ್ಣಾಮಲೈ ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ನಿಂತ ಕಾರಣ ಏನೆಂಬುದನ್ನು ದಿಗಂತ್ ವಿವರಿಸಿಲ್ಲ.

ದಿಗಂತ್ ನಟನೆಯ ‘ಪೌಡರ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು ಸಾಧಾರಣ ಯಶಸ್ಸು ಕಂಡಿದೆ. ದಿಗಂತ್ ಪ್ರಸ್ತುತ ‘ಉತ್ತರಕಾಂಡ’ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ಜೊತೆಗೆ ನಟಿಸುತ್ತಿದ್ದಾರೆ. ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ