ಕನ್ನಡ ಚಿತ್ರಗಳಿಗೆ ಹೆಚ್ಚಾಯ್ತು ಪೈರಸಿ ಸಮಸ್ಯೆ; ದೂರು ನೀಡಿದ ‘ಶಾರ್ದೂಲ’ ನಿರ್ಮಾಪಕ ರೋಹಿತ್

ಕನ್ನಡ ಸಿನಿಮಾಗಳಿಗೆ ಪೈರಸಿ ಸಂಕಷ್ಟ ಎದುರಾಗಿದೆ. ಬಿಡುಗಡೆಯಾದ ಕನ್ನಡ ಚಿತ್ರಗಳನ್ನು ಟೆಲಿಗ್ರಾಂಗೆ ಅಪ್​ಲೋಡ್ ಮಾಡಿ ಪೈರಸಿ ಮಾಡುತ್ತಿದ್ದ ಚಾನಲ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕನ್ನಡ ಚಿತ್ರಗಳಿಗೆ ಹೆಚ್ಚಾಯ್ತು ಪೈರಸಿ ಸಮಸ್ಯೆ; ದೂರು ನೀಡಿದ ‘ಶಾರ್ದೂಲ’ ನಿರ್ಮಾಪಕ ರೋಹಿತ್
ಸಾಂಕೇತಿಕ ಚಿತ್ರ
Edited By:

Updated on: Oct 13, 2021 | 11:36 AM

ಬೆಂಗಳೂರು: ಕನ್ನಡ ಚಿತ್ರಗಳಿಗೆ ಪೈರಸಿ ಸಮಸ್ಯೆ ಬಹಳ ಗಂಭೀರವಾಗಿ ಕಾಡುತ್ತಿದೆ. ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿಯಾಗುತ್ತಿದೆ. ಪೈರಸಿ ಮಾಫಿಯಾ ವಿರುದ್ಧ ‘ಶಾರ್ದೂಲ’ ಚಿತ್ರದ ನಿರ್ಮಾಪಕ ರೋಹಿತ್ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಐಟಿ ಆಕ್ಟ್ 84C, 66C, 66D , ಐಪಿಸಿ 420, 511 ಹಾಗೂ ಕಾಫಿರೈಟ್ಸ್ ಆಕ್ಟ್ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ಆಗುತ್ತಿದ್ದಂತೆ ಟೆಲಿಗ್ರಾಂನಲ್ಲಿ ಲಿಂಕ್ ಡಿಲೀಟ್ ಆಗಿದ್ದು, ಯುವ ಮೂವೀಸ್ ಗ್ರೂಪ್ ಕೂಡ ಡಿಲೀಟ್‌ ಆಗಿದೆ.

ಕರೋನ ಎರಡನೇ ಅಲೆ ಬಳಿಕ ಬಂದ ಎಲ್ಲಾ ಕನ್ನಡ ಸಿನಿಮಾ ಪೈರಸಿ ಮಾಡಲಾಗಿದೆ. ಯುವ ಸಿನಿಮಾಸ್ ಹೆಸರಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳ ಪೈರಸಿ ಮಾಡಲಾಗಿದ್ದು, ಕಳೆದ ವಾರ ರಿಲೀಸ್ ಆಗಿ ವೀಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಿದ್ದ ‘ನಿನ್ನ ಸನಿಹಕೆ’ ಸಿನಿಮಾ ಕೂಡ ಈ ಪಟ್ಟಿಯಲ್ಲಿದೆ. ಇದಲ್ಲದೇ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’, ಅಜಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’, ನಟ ಚೇತನ್ ಚಂದ್ರ ಅಭಿನಯದ ‘ಶಾರ್ದೂಲ’ ಚಿತ್ರಗಳೂ ಪೈರಸಿಯಾಗಿವೆ.

ಈ ಚಿತ್ರಗಳೊಂದಿಗೆ ತೆಲುಗು, ತಮಿಳಿನಿಂದ ಕನ್ನಡಕ್ಕೆ ಡಬ್ ಆದ ಸಿನೆಮಾಗಳಿಗೂ ಪೈರಸಿ ಕಾಟವಿದೆ. ಸೂರರೈ ಪೊಟ್ರು, ನಶಾ, ಪದ್ಮವ್ಯೂಹ, ಸ್ಪೈಡರ್ ಮ್ಯಾನ್, ಆ ಧ್ವನಿ, ಕಲ್ಯಾಣಮಂಟಪಂ, ಜಸ್ಟ್ ಮ್ಯಾರೀಡ್ ಮೊದಲಾದ ಚಿತ್ರಗಳನ್ನೂ ಪೈರಸಿ ಮಾಡಲಾಗಿದೆ. ಓಟಿಪಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆದ ವೆಬ್ ಸಿರೀಸ್​ಗಳನ್ನೂ ಪೈರಸಿ ಮಾಡಿ ಅಪ್​ಲೋಡ್ ಮಾಡಲಾಗಿದೆ. ಈ ಕುರಿತು ಶಾರ್ದೂಲ ಚಿತ್ರದ ನಿರ್ಮಾಪಕ ರೋಹಿತ್, ಯುವ ಮೂವೀಸ್ ವಿರುದ್ಧ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ  ‘ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಭಜರಂಗಿ-2’ ಸಿನಿಮಾ ನಿರ್ಮಾಪಕ ಜಯಣ್ಣ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್, ಗಣೇಶ್​ ಅವರು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್​ಗೆ ಪೈರಸಿ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು. ಗೃಹ ಸಚಿವರೂ ಸೇರಿದಂತೆ ಹಲವರು ಈ ಕುರಿತು ಅಭಯ ನೀಡಿದ್ದರು. ಆದರೆ ಚಿತ್ರರಂಗಕ್ಕೆ ಪೈರಸಿ ಕಾಟ ಇನ್ನೂ ನಿಂತಿಲ್ಲದಿರುವುದು ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:

ಪೈರಸಿ ಮಾಡಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ; ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ ಪೊಲೀಸ್​ ತಂಡ

ಮುಂಬೈನ ಕುರ್ಲಾದಲ್ಲಿ ಅಗ್ನಿ ಅವಘಡ: 20 ದ್ವಿಚಕ್ರವಾಹನಗಳು ಸುಟ್ಟು ಭಸ್ಮ

Aryan Khan: ಆರ್ಯನ್​ಗೆ ಜಾಮೀನು ಕೊಡಿಸಬಹುದೇ ಸಲ್ಮಾನ್​ಗೆ ಜಾಮೀನು ಕೊಡಿಸಿದ್ದ ವಕೀಲರು?; ಇಂದು ನಡೆಯಲಿದೆ ವಿಚಾರಣೆ

Follow Us