ಶೀಘ್ರವೇ ದೇಶದಾದ್ಯಂತ ಕಡಿಮೆ ಆಗಲಿದೆ ಚಿತ್ರಮಂದಿರಗಳ ಟಿಕೆಟ್ ಬೆಲೆ: ಹೇಗೆ?

Movie Ticket price: ಸಿನಿಮಾ ಟಿಕೆಟ್ ದರಗಳ ಏರಿಕೆ ಬಗ್ಗೆ ಪದೇ-ಪದೇ ಚರ್ಚೆಗಳಾಗುತ್ತಲೇ ಇರುತ್ತವೆ. ಕೆಲ ವಾರಗಳ ಹಿಂದೆ ಸಿದ್ದರಾಮಯ್ಯ ಸಹ ರಾಜ್ಯದಲ್ಲಿ ಟಿಕೆಟ್ ದರಗಳನ್ನು ತಗ್ಗಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದೀಗ ದೇಶದಾದ್ಯಂತ ಚಿತ್ರಮಂದಿರಗಳ ಟಿಕೆಟ್ ದರಗಳು ತಗ್ಗುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ...

ಶೀಘ್ರವೇ ದೇಶದಾದ್ಯಂತ ಕಡಿಮೆ ಆಗಲಿದೆ ಚಿತ್ರಮಂದಿರಗಳ ಟಿಕೆಟ್ ಬೆಲೆ: ಹೇಗೆ?
Ticket

Updated on: Aug 28, 2025 | 5:08 PM

ಚಿತ್ರಮಂದಿರಗಳ ಟಿಕೆಟ್ ಬೆಲೆಯ ವಿಷಯ ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತದೆ. ಟಿಕೆಟ್ ಬೆಲೆಯ ವಿಷಯದಲ್ಲಿ ಚಿತ್ರರಂಗಗಳಲ್ಲಿಯೇ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ. ಕೆಲ ತಿಂಗಳ ಹಿಂದಷ್ಟೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರದ ಭರವಸೆ ನೀಡಿದ್ದರು. ಆದರೆ ಅದಿನ್ನೂ ಜಾರಿ ಆಗಿಲ್ಲ. ಆಂಧ್ರ ಪ್ರದೇಶ, ಕೇರಳಗಳಲ್ಲಿಯೂ ಸಹ ಟಿಕೆಟ್ ದರದ ಚರ್ಚೆ ಆಗುತ್ತಲೇ ಇರುತ್ತದೆ. ಆದರೆ ಇದೀಗ ಒಮ್ಮೆಲೆ ದೇಶದಾದ್ಯಂತ ಸಿನಿಮಾ ಟಿಕೆಟ್​ ದರಗಳು ಕಡಿಮೆ ಆಗುವ ಸೂಚನೆ ದೊರೆತಿದೆ.

ದೇಶದಲ್ಲಿ ಪ್ರಸ್ತುತ ಮನೊರಂಜನಾ ತೆರಿಗೆ 18% ಇದೆ. ಇದು ಒಟ್ಟಾರೆ ಟಿಕೆಟ್ ದರ ಹೆಚ್ಚಳಕ್ಕೆ ಪರೋಕ್ಷ ಕಾರಣವಾಗಿತ್ತು. ಮನೊರಂಜನಾ ತೆರಿಗೆ ಇಳಿಕೆ ಮಾಡುವಂತೆ ಚಿತ್ರಮಂದಿರಗಳ ಮಾಲೀಕರು, ಮಲ್ಟಿಪ್ಲೆಕ್ಸ್​ಗಳವರು ಸಹ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರು. ಟಿಕೆಟ್ ದರ 300 ರೂಪಾಯಿಗಳಿದ್ದರೆ ತೆರಿಗೆ ಹಣವೇ 54 ರೂಪಾಯಿಗಳಾಗುತ್ತಿತ್ತು. ಜಿಎಸ್​​ಟಿಯನ್ನು 5%ಗೆ ತಗ್ಗಿಸಬೇಕೆಂದು ಬೇಡಿಕೆ ಮೊದಲೇ ಇಟ್ಟಿದ್ದರು. ಮನವಿಯನ್ನು ಸರ್ಕಾರ ಪುರಸ್ಕರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ದರ: ಯಾವ ರಾಜ್ಯದಲ್ಲಿ ಎಷ್ಟಿದೆ?

2018 ರಿಂದಲೂ ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​​ಗಳವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ತೆರಿಗೆ ಇಳಿಕೆ ಮಾಡುವಂತೆ ಮನವಿ ಮಾಡುತ್ತಲೇ ಬರುತ್ತಿವೆ. ಇದೀಗ ಸರ್ಕಾರವು ಈ ಬಗ್ಗೆ ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​ಗಳಿಗೆ ಭರವಸೆ ನೀಡಿದ್ದು, ಜಿಎಸ್​​ಟಿ ಸಭೆಯಲ್ಲಿ ಮನೊರಂಜನಾ ತೆರಿಗೆಯನ್ನು ಇಳಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

300 ರೂಪಾಯಿಗಳ ವರೆಗಿನ ಟಿಕೆಟ್ ದರಕ್ಕೆ 5% ಅದಕ್ಕೂ ಹೆಚ್ಚಿನ ಟಿಕೆಟ್ ದರಕ್ಕೆ 12% ತೆರಿಗೆ ವಿಧಿಸುವಂತೆ ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್ ಅವರುಗಳು ಸರ್ಕಾರದ ಬಳಿ ಮನವಿ ಮಾಡಿದ್ದರು. ಪ್ರಸ್ತುತ 100 ರೂಪಾಯಿಗಳಿಗೂ ಕಡಿಮೆ ಟಿಕೆಟ್ ದರಕ್ಕೆ 12% ಮತ್ತು ಅದಕ್ಕಿಂತಲೂ ಹೆಚ್ಚಿನ ಟಿಕೆಟ್ ದರಕ್ಕೆ 18% ಟಿಕೆಟ್ ದರವನ್ನು ವಿಧಿಸಲಾಗಿದೆ. ಇದರಿಂದಾಗಿ ದೇಶದಾದ್ಯಂತ ಟಿಕೆಟ್ ದರ ಬಹಳ ಹೆಚ್ಚಿದೆ.

ಕಳೆದ ರಾಜ್ಯ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರುವ ಬಗ್ಗೆ ಮಾತನಾಡಿದ್ದರು. ರಾಜ್ಯದಲ್ಲಿ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಮಾತನ್ನಾಡಿದ್ದರು. ಫಿಲಂ ಚೇಂಬರ್ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತ ಮಾಡಿತ್ತು. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ