AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿಕೆ, ಆಚರಣೆಗಳ ಸುತ್ತ ಹೆಣೆದ ‘ಇನಾಮ್ದಾರ್’ ಸಿನಿಮಾದ ಟ್ರೈಲರ್ ಬಿಡುಗಡೆ

Inamdar: 'ಕಾಂತಾರ' ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ. ಅದೇ ಮಾದರಿಯಲ್ಲಿ ವಿವಿಧ ಪ್ರಾಂಥ್ಯದ ಮಣ್ಣಿನ ಕತೆಗಳನ್ನು ಹೇಳುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದೇ ವಿಭಾಗಕ್ಕೆ ಸೇರುತ್ತದೆ ಕನ್ನಡದ 'ಇನಾಮ್ದಾರ್'.

ನಂಬಿಕೆ, ಆಚರಣೆಗಳ ಸುತ್ತ ಹೆಣೆದ 'ಇನಾಮ್ದಾರ್' ಸಿನಿಮಾದ ಟ್ರೈಲರ್ ಬಿಡುಗಡೆ
ಮಂಜುನಾಥ ಸಿ.
|

Updated on: Oct 06, 2023 | 11:25 PM

Share

ಕರಾವಳಿ ಭಾಗದ ನಂಬಿಕೆ, ಸಂಸ್ಕೃತಿಗಳನ್ನೇ ಮೂಲವಾಗಿರಿಸಿಕೊಂಡು ಹೆಣೆಯಲಾಗಿದ್ದ ‘ಕಾಂತಾರ‘ (Kantara) ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ. ಅದೇ ಮಾದರಿಯಲ್ಲಿ ವಿವಿಧ ಪ್ರಾಂಥ್ಯದ ಮಣ್ಣಿನ ಕತೆಗಳನ್ನು ಹೇಳುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದೇ ವಿಭಾಗಕ್ಕೆ ಸೇರುತ್ತದೆ ಕನ್ನಡದ ‘ಇನಾಮ್ದಾರ್’. ಈ ಸಿನಿಮಾ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರಾವಳಿ ಭಾಗದ ಜನರ, ಅವರ ಆಚರಣೆಗಳ ಕುರಿತಾದ ಕತೆ ಹೊಂದಿದ್ದು, ಈ ಸಿನಿಮಾದ ಟ್ರೈಲರ್ ಪಂಚಭಾಷೆಗಳಲ್ಲಿ ಬಿಡುಗಡೆ ಆಗಿದೆ.

ಶಿವಾಜಿ ಮಹಾರಾಜರನ್ನು ಆರಾಧಿಸುವ ಉತ್ತರ ಕರ್ನಾಟಕ ಮೂಲದ ‘ಇನಾಮ್ದಾರ್’ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ಸಂಘರ್ಷದ ಕತೆಯನ್ನು ಈ ಸಿನಿಮಾ ಹೊಂದಿದೆ. “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವನ್ನು “ಇನಾಮ್ದಾರ್” ಸಿನಿಮಾಕ್ಕೆ ನೀಡಲಾಗಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಇನ್ನೂ ಕೆಲವು ಊರುಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿದೆ.‌ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದಿವೆ.

ಸಂದೇಶ್ ಶೆಟ್ಟಿ ಆಜ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ.ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಪುಂಡಾಟ ಮೆರೆದ ವಿಜಯ್ ಅಭಿಮಾನಿಗಳು, ಲಿಯೋ ಟ್ರೈಲರ್ ಬಿಡುಗಡೆ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ‘ಟ್ರೇಲರ್ ನೋಡಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾದಲ್ಲ ನನ್ನದು ಕಾಳಿಂಗ ಎಂಬ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಸದ್ಯದಲ್ಲೇ “ಇನಾಮ್ದಾರ್” ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹಾರೈಸಿ ಎಂದರು. ನಾಯಕ ರಂಜನ್ ಛತ್ರಪತಿ ಮಾತನಾಡಿ ‘ನಮ್ಮ ಸಿನಿಮಾ ಆರಂಭವಾದಾಗ ಬೇರೆ ನಿರ್ಮಾಪಕರಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಿಂದ ಹೊರಗೆ ಹೋದರು. ಆಗ ನಿರಂಜನ್ ಶೆಟ್ಟಿ ತಲ್ಲೂರು ಮುಂದೆ ಬಂದು ಈ ಸಿನಿಮಾವನ್ನು ಕೈಗೆತ್ತಿಕೊಂಡರು. ನಾನು ಈ ಸಿನಿಮಾದಲ್ಲಿ “ಇನಾಮ್ದಾರ್” ಕುಟುಂಬದ ಮಗನಾಗಿ ಕಾಣಿಸಿಕೊಂಡಿದ್ದೇನೆ ಎಂದು‘ ನಾಯಕ ರಂಜನ್ ಛತ್ರಪತಿ ತಿಳಿಸಿದರು.

ಸಿನಿಮಾದ ನಾಯಕಿ ಚಿರಶ್ರೀ ಅಂಚಿನ್ ನಟಿಸಿದ್ದಾರೆ. ಎಂ.ಕೆ.ಮಠ, ರಘು ಪಾಂಡೇಶ್ವರ, ಚಿತ್ರಕಲಾ ಮುಂತಾದ ಕಲಾವಿದರು ತಮ್ಮ ಪಾತ್ರದ ಬಗ್ಗೆ ಹೇಳಿದರು. ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು. ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಈ ಚಿತ್ರದ ಸಂಗೀತ ನಿರ್ದೇಶಕರು. ಅಕ್ಟೋಬರ್ 27 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ