ನಟ ಜಗ್ಗೇಶ್​ ನೆನಪಿನ ಪುಟದಲ್ಲಿವೆ ‘ಅಭಿನಯ ಶಾರದೆ’ ಜಯಂತಿ ಜೊತೆ ಕಳೆದ ಸುಂದರ ಕ್ಷಣಗಳು

| Updated By: ಮದನ್​ ಕುಮಾರ್​

Updated on: Jul 26, 2021 | 4:11 PM

‘ಆ ಮಹಾನಟಿ ಇಲ್ಲ ಎಂದಾಗ ಮನಸ್ಸಿಗೆ ನೋವಾಯಿತು. ಹೋದ ಅನೇಕ ಹಿರಿಯ ನಟಿಯರ ಸಾಲಿಗೆ ಜಯಮ್ಮ ಸೇರಿಬಿಟ್ಟರು’ ಎಂದು ಜಗ್ಗೇಶ್​ ಅವರು ಅಭಿನಯ ಶಾರದೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ನಟ ಜಗ್ಗೇಶ್​ ನೆನಪಿನ ಪುಟದಲ್ಲಿವೆ ‘ಅಭಿನಯ ಶಾರದೆ’ ಜಯಂತಿ ಜೊತೆ ಕಳೆದ ಸುಂದರ ಕ್ಷಣಗಳು
ಜಗ್ಗೇಶ್​-ಜಯಂತಿ
Follow us on

ಕನ್ನಡ ಚಿತ್ರರಂಗಕ್ಕೆ ನಟಿ ಜಯಂತಿ ಅವರ ಕೊಡುಗೆ ದೊಡ್ಡದು. ಇಂದು (ಜು.26) ಅವರ ಅಗಲಿಕೆಯಿಂದ ಸ್ಯಾಂಡಲ್​ವುಡ್​ ಕಣ್ಣೀರು ಹಾಕಿದೆ. ಚಂದನವನದ ಅನೇಕರು ಅಭಿನಯ ಶಾರದೆಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜಯಂತಿ ಜೊತೆ ನಟಿಸುವ ಅವಕಾಶ ಪಡೆದಿದ್ದ ಜಗ್ಗೇಶ್​ ಕೂಡ ತಮ್ಮ ನೆನಪಿನ ಪುಟದಿಂದ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜಯಂತಿ ಕುರಿತು ಟ್ವೀಟ್​ ಮಾಡಿರುವ ಅವರು ‘ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಿದೆ’ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ನನ್ನ ಬಾಲ್ಯದಿಂದ ನಾನು ತುಂಬ ಇಷ್ಟಪಟ್ಟ ನಟಿಯರು ಭಾರತಿ ಅಮ್ಮ ಹಾಗೂ ಜಯಂತಿ ಅಮ್ಮ. ಭಾರತಿ ಅಮ್ಮನ ಜೊತೆ ನಟಿಸಲು ನನಗೆ ಅವಕಾಶ ಸಿಗಲಿಲ್ಲ. ಆದರೆ ಜಯಂತಿ ಅಮ್ಮನ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ ಸಮಾಧಾನ, ಸಂತೋಷ ನನ್ನ ಕಲಾಬದುಕಿಗೆ’ ಎಂದು ಧನ್ಯತಾ ಭಾವದಿಂದ ಬರಹ ಆರಂಭಿಸಿದ್ದಾರೆ ಜಗ್ಗೇಶ್​.

‘ಜಯಂತಿ ಅವರ ಜೊತೆ ಪಟೇಲ ಸಿನಿಮಾದಲ್ಲಿ ನಟಿಸುವಾಗ ಪಾಂಡುಪುರದ ಚಿಕ್ಕಾಡೆ ಗ್ರಾಮದಲ್ಲಿ ಶೂಟಿಂಗ್ ವಿರಾಮ ಸಿಕ್ಕು, ಸಮಯ ಕಳೆಯುವ ಅವಕಾಶ ಸಿಕ್ಕಿತು. ಆಗ ನನ್ನ ಸಿನಿಮಾ ಪಯಣ ಅವರ ಜೊತೆ ಹಂಚಿಕೊಂಡ ಸಮಯ ಮರೆಯಲಾಗದ ಕ್ಷಣ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಅವರಿಗೆ ನಾನು ರೇಗಿಸಿದ್ದು; ಜಯಮ್ಮ ದೂರದ ಬೆಟ್ಟ ಚಿತ್ರದಲ್ಲಿ ನಿಮ್ಮ ನೋಡಿ ಈಗ ಅನ್ನಿಸುತ್ತದೆ ಅಯ್ಯೋ ದೇವರೆ ಇಂದು ನಾಯಕನಟ ಆಗುವ ಬದಲು ದೂರದ ಬೆಟ್ಟದ ಸಮಯ ಆಗಿದ್ದರೆ ಎಂಥ ಅದ್ಭುತ ಇರುತ್ತಿತ್ತು ಎಂದಾಗ ನಾಚಿ ನೀರಾಗಿದ್ದರು. ಕೋಲು ಹಿಡಿದು ಅಟ್ಟಾಡಿಸಿ ನಕ್ಕು ಆನಂದಿಸಿ ಯೂ ಆರ್​ ಮೈ ಫೇವರಿಟ್​ ಆಕ್ಟರ್​ ಎಂದು ಮುತ್ತಿಕ್ಕಿದ್ದರು. ಕೆಲವೊಮ್ಮೆ ನನ್ನ ಹಾಸ್ಯ ಕಂಡು ಮಗುವಂತೆ ನಗುತ್ತಿದ್ದರು. ಮನಸ್ಸು ಮಗುವಂತೆ ನಡೆದ ಸಂಗತಿಯನ್ನು ಮೆಲುಕಾಕಿ ಆನಂದಿಸುತ್ತದೆ. ಇಂದು ಆ ಮಹಾನಟಿ ಇಲ್ಲ ಎಂದಾಗ ಮನಸ್ಸಿಗೆ ನೋವಾಯಿತು. ಹೋದ ಅನೇಕ ಹಿರಿಯ ನಟಿಯರ ಸಾಲಿಗೆ ಜಯಮ್ಮ ಸೇರಿಬಿಟ್ಟರು. ನಿಮ್ಮ ಆತ್ಮ ಶಾರದೆಯಲ್ಲಿ ಲೀನವಾಗಲಿದೆ. ಲವ್​ ಯೂ ಅಮ್ಮ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

ಬನಶಂಕರಿ ಚಿತಾಗಾರದಲ್ಲಿ ಸೋಮವಾರ (ಜು.26) ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನರೆವೇರಲಿದೆ. ಜಯಂತಿ ನಿಧನಕ್ಕೆ ಬಿಎಸ್​ ಯಡಿಯೂರಪ್ಪ, ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ರೇಣುಕಾಚಾರ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:

ಅಭಿನಯ ಶಾರದೆ ಜಯಂತಿ ಕೊನೇ ದಿನಗಳ ಬಗ್ಗೆ ಪುತ್ರ ಕೃಷ್ಣ ಕುಮಾರ್​ ತೆರೆದಿಟ್ಟ ವಿವರ

‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್​ವುಡ್ ಶ್ರದ್ಧಾಂಜಲಿ