ನಟ ಕಾಕ್ರೋಚ್ ಸುಧಿ ಈಗ ಹೀರೋ: ಸಿನಿಮಾ ಹೆಸರು ‘ಚೈಲ್ಡು’
ಕಾಕ್ರೋಚ್ ಸುಧಿ ಅವರು ‘ಚೈಲ್ಡು’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಶುರುವಾಗಿದೆ. ಅದಕ್ಕೂ ಮುನ್ನ ಚಿತ್ರತಂಡದವರು ಶೀರ್ಷಿಕೆ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಒಂದಷ್ಟು ಮಾಹಿತಿ ಹಂಚಿಕೊಂಡರು. ಸುಧಿ ಜೊತೆ ಅಶ್ವಿನ್ ಹಾಸನ್, ವಲ್ಲಭ್, ಉದಯ್ ಪ್ರಸನ್ನ ಮುಂತಾದರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಸೂಪರ್ ಹಿಟ್ ‘ಸಲಗ’, ‘ಭೀಮ’, ‘ಟಗರು’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕಾಕ್ರೋಜ್ ಸುಧಿ (Cockroach Sudhi) ಎಂದೇ ಫೇಮಸ್ ಆಗಿರುವ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹೀರೋ ಆಗಿಯೂ ಅವರಿಗೆ ಅವಕಾಶಗಳು ಬರುತ್ತಿವೆ. ಕಾಕ್ರೋಚ್ ಸುಧಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ (New Kannada Movie) ಸೆಟ್ಟೇರಿದೆ. ಈ ಸಿನಿಮಾಗೆ ‘ಚೈಲ್ಡು’ ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.
‘ಕಮಲ ಫಿಲ್ಮ್ಸ್’ ಬ್ಯಾನರ್ ಮೂಲಕ ಚಂದ್ರಶೇಖರ್ ಕೆ. ಅವರು ‘ಚೈಲ್ಡು’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹಫ್ತಾ’ ಸಿನಿಮಾ ಖ್ಯಾತಿಯ ಪ್ರಕಾಶ್ ಹೆಬ್ಬಾಳ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ. ಡಿಫರೆಂಟ್ ಪಾತ್ರಗಳನ್ನು ಮಾಡುತ್ತಾ ಜನರನ್ನು ರಂಜಿಸಿರುವ ಕಾಕ್ರೋಚ್ ಸುಧಿ ಅವರು ಈ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
‘ಚೈಲ್ಡು’ ಸಿನಿಮಾದ ಶೀರ್ಷಿಕೆಯನ್ನು ಸಮಾಜ ಸೇವಕ ಕಿರಣ್ ರೆಡ್ಡಿ ಅವರು ಅನಾವರಣ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ ಎಂದು ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ಹೇಳಿದರು.
‘ಹಫ್ತಾ ಬಳಿಕ ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಇಂದಿನಿಂದಲೇ ಬೆಂಗಳೂರಿನಲ್ಲಿ ಶೂಟಿಂಗ್ ಆರಂಭ ಆಗಲಿದೆ. ತಾರಾ ಅನುರಾಧಾ, ವಲ್ಲಭ್, ಅಶ್ವಿನ್ ಹಾಸನ್, ಉದಯ್ ಪ್ರಸನ್ನ ಮುಂತಾದವರು ನಟಿಸುತ್ತಿದ್ದಾರೆ. ರಂಗಾಯಣ ರಘು ಅವರ ಜೊತೆಗೆ ಮಾತುಕತೆ ನಡೆಯುತ್ತಿದೆ. ಸುಧಿ ಅವರನ್ನು ನೀವು ಈವರೆಗೂ ಮಾಡಿರದ ಪಾತ್ರದಲ್ಲಿ ನೋಡಲಿದ್ದೀರಿ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ‘ಓಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಎದುರು ಅಬ್ಬರಿಸುವ ಕನ್ನಡಿಗ ಸೌರವ್ ಲೋಕೇಶ್
ಅಂದಹಾಗೆ, ಕಾಕ್ರೋಜ್ ಸುಧಿ ಅವರು ಹೀರೋ ಆಗಿ ಅಭಿನಯಿಸುತ್ತಿರುವ ಮೂರನೇ ಸಿನಿಮಾ ಇದು. ‘ಡೈರೆಕ್ಟರ್ ಪ್ರಕಾಶ್ ಅವರು ಹೇಳಿದ ಕಥೆ ತುಂಬಾ ಇಷ್ಟ ಆಯಿತು. ನನಗೆ ತಕ್ಕಂತಹ ಕಥೆಯನ್ನು ನಿರ್ದೇಶಕರು ಬರೆದಿದ್ದಾರೆ. ರೌಡಿಸಂ ಸಿನಿಮಾ ಆದರೂ ಕೂಡ ಲವ್ ಇರುತ್ತದೆ. ನನ್ನ ಲುಕ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಕಾಕ್ರೋಜ್ ಸುಧಿ ಹೇಳಿದರು. ಈ ಸಿನಿಮಾಗೆ ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




