ದುಬೈನಿಂದ ಅಕ್ರಮವಾಗಿ ಚಿನ್ನ ತಂದ ರನ್ಯಾ ರಾವ್; ವಿಮಾನ ನಿಲ್ದಾಣದಲ್ಲೇ ಐಪಿಎಸ್ ಅಧಿಕಾರಿ ಮಗಳು ವಶಕ್ಕೆ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್ ಅವರನ್ನು ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ಬಂದ ಅವರನ್ನು ಡಿಆರ್ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ರನ್ಯಾ ರಾವ್ ಅವರು ಸುದೀಪ್ ಮತ್ತು ಗಣೇಶ್ ಅಭಿನಯದ ಚಿತ್ರಗಳಲ್ಲಿ ನಟಿಸಿದ್ದಾರೆ.

ಬೆಂಗಳೂರು, ಮಾರ್ಚ್ 4: ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರನ್ನು ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಲಾಗುತ್ತಿದೆ. ಅವರು ಸುದೀಪ್ ನಟನೆಯ ‘ಮಾಣಿಕ್ಯ’ ಸಿನಿಮಾದಲ್ಲಿ ನಟಿಸಿದ್ದರು. ನಟಿ ರನ್ಯಾ ರಾವ್ ಅವರು ಡಿಜಿಪಿ ರಾಮಚಂದ್ರ ರಾವ್ ಮಗಳು. ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್ಪೋರ್ಟ್ ಕಸ್ಟಮ್ಸ್ನ ಡಿಆರ್ಐ ಅಧಿಕಾರಿಗಳು ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ ಇದೆ.
ರನ್ಯಾ ಜನಿಸಿದ್ದು 1991ರಲ್ಲಿ. ಅವರು ಮೂಲತಃ ಚಿಕ್ಕಮಗಳೂರಿನವರು. ನಟನಾ ವೃತ್ತಿ ಆರಂಭಿಸಲು ಬೆಂಗಳೂರಿಗೆ ಬಂದರು. 2014ರಲ್ಲಿ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ತಮಿಳಿನ ಸಿನಿಮಾ ಒಂದನ್ನು ಮಾಡಿದರು. ಆದರೆ, ಇದು ಅಷ್ಟಾಗಿ ಗೆಲುವು ತಂದುಕೊಡಲಿಲ್ಲ.
ಇದನ್ನೂ ಓದಿ: ಮಜಾ ಟಾಕೀಸ್ನಲ್ಲಿ ಮಿನುಗು ತಾರೆಯರು; ಹಿರಿಯ ನಟಿಯರ ಸಮಾಗಮ
2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಸಿನಿಮಾದಲ್ಲಿ ಸಂಗೀತಾ ಹೆಸರಿನ ಪಾತ್ರ ಮಾಡಿದರು. ಆ ಬಳಿಕ ಅವರಿಗೆ ಅಷ್ಟಾಗಿ ಆಫರ್ಗಳು ಬರಲೇ ಇಲ್ಲ. ಆ ಬಳಿಕ ಅವರು ಸಿನಿಮಾ ಮಾಡಿಲ್ಲ. ಈಗ ಅವರು ಅಕ್ರಮ ಚಿನ್ನ ಸಾಗಣೆ ಮಾಡಿದ ಆರೋಪದಲ್ಲಿ ಸುದ್ದಿ ಆಗಿದ್ದಾರೆ.
ಪೊಲೀಸ್ ಅಧಿಕಾರಿ ಮಗಳು:
ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ರನ್ಯಾ ಮಲಮಗಳು. ರಾಮಚಂದ್ರ ರಾವ್ 2ನೇ ಮದುವೆ ಆಗಿದ್ದಾರೆ. ಆ ಮಹಿಳೆಗೂ ಇದು ಎರಡನೇ ಮದುವೆ. ರಾಮಚಂದ್ರ ಪತ್ನಿಯ ಮೊದಲ ಪತಿಯಿಂದ ಹುಟ್ಟಿದವರೇ ರನ್ಯಾ. ಮೊಟ್ಟ ಮೊದಲನೇ ಬಾರಿಗೆ IPS ಅಧಿಕಾರಿಯ ಮಗಳ ಅರೆಸ್ಟ್ ಆದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Tue, 4 March 25