AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramu Death: ನಿಧನಕ್ಕೂ ಮುನ್ನ ಫೋನ್​ನಲ್ಲಿ ಕೊವಿಡ್​ ಕಷ್ಟ ವಿವರಿಸಿದ್ದ ಕೋಟಿ ರಾಮು

Coronavirus: ಆಸ್ಪತ್ರೆಗೆ ರಾಮು ದಾಖಲಾಗಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರ ಆಪ್ತ ಗೋವಿಂದ ರಾಜು ಅವರು ದೂರವಾಣಿ ಕರೆ ಮಾಡಿದ್ದರು. ಆಗ ಮಾತನಾಡಿದ ರಾಮು ತುಂಬ ಬಳಲಿದಂತೆ ಕಂಡರು.

Ramu Death: ನಿಧನಕ್ಕೂ ಮುನ್ನ ಫೋನ್​ನಲ್ಲಿ ಕೊವಿಡ್​ ಕಷ್ಟ ವಿವರಿಸಿದ್ದ ಕೋಟಿ ರಾಮು
ರಾಮು - ಗೋವಿಂದ ರಾಜು
ಮದನ್​ ಕುಮಾರ್​
|

Updated on: Apr 27, 2021 | 2:19 PM

Share

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಸೋಮವಾರ (ಏ.26)  ನಿಧನರಾಗಿದ್ದು ದುಃಖದ ಸಂಗತಿ. ಕೊರೊನಾ ವೈರಸ್​ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಿಧನರಾಗುವುದಕ್ಕೂ ಮುನ್ನ ಅವರು ದೂರವಾಣಿ ಮೂಲಕ ಆಪ್ತರ ಜೊತೆ ಮಾತನಾಡಿದ ಆಡಿಯೋ ಕ್ಲಿಪ್​​ ಲಭ್ಯವಾಗಿದೆ. ಅದರಲ್ಲಿ ಕೊವಿಡ್​ ನೀಡುತ್ತಿರುವ ಕಷ್ಟದ ಬಗ್ಗೆ ರಾಮು ವಿವರಿಸಿದ್ದರು.

ಆಸ್ಪತ್ರೆಗೆ ರಾಮು ದಾಖಲಾಗಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅವರ ಆಪ್ತ ಗೋವಿಂದ ರಾಜು ಅವರು ದೂರವಾಣಿ ಕರೆ ಮಾಡಿದ್ದರು. ಆಗ ಮಾತನಾಡಿದ ರಾಮು ತುಂಬ ಬಳಲಿದಂತೆ ಕಂಡರು. ಅವರ ಆರೋಗ್ಯ ಎಷ್ಟು ಕ್ಷೀಣಿಸಿತ್ತು ಎಂಬುದನ್ನು ಅವರ ಸೊರಗಿದ ಧ್ವನಿಯಲ್ಲೇ ಊಹಿಸಬಹುದಾಗಿತ್ತು. ಇಬ್ಬರ ನಡುವಿನ ಫೋನ್​ ಸಂಭಾಷಣೆ ಈ ರೀತಿ ಇತ್ತು…

ಗೋವಿಂದ ರಾಜು: ಯಾಕಣ್ಣ.. ಹುಷಾರಿಲ್ವಾ?

ರಾಮು: ಒಂದು ವಾರವಾಯಿತು, ಕೊವಿಡ್​.

ಗೋವಿಂದ ರಾಜು: ಹೌದಾ, ನಮ್ಮ ಹುಡುಗನಿಗೂ ಕೊವಿಡ್​ ಆಗಿದೆ.

ರಾಮು: ನಾನು ಆಸ್ಪತ್ರೆಯಲ್ಲಿದ್ದೇನೆ. ತುಂಬ ಸುಸ್ತಾಗುತ್ತಿದೆ. ಮಾತನಾಡೋಕೆ ಕೂಡ ಆಗ್ತಾ ಇಲ್ಲ.

ಗೋವಿಂದ ರಾಜು: ನಾನು ಬರಬೇಕಾ ಅಣ್ಣಾ?

ರಾಮು: ಇಲ್ಲ.. ಇಲ್ಲಿ ಯಾರನ್ನೂ ಬಿಡಲ್ಲ.

ಅವರ ಕೊನೇ ದಿನದ ಬಗ್ಗೆ ಗೋವಿಂದ ರಾಜು ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಭಾನುವಾರ ನಾನು ಮತ್ತು ಮೇಡಂ (ಮಾಲಾಶ್ರೀ) ಬಂದು ಮಾತನಾಡಿಸಿಕೊಂಡು ಹೋದೆವು. ಆಗ ಸ್ಟೇಬಲ್​ ಆಗಿದ್ರು. ಚೆನ್ನಾಗಿ ಮಾತನಾಡುತ್ತಿದ್ರು. ಅದಾದ ನಂತರ ಇನ್​ಫೆಕ್ಷನ್​ ಜಾಸ್ತಿ ಆಗಿದೆ ಅಂತ ಗೊತ್ತಾಯ್ತು. ನಿನ್ನೆ ಮೇಡಂ ಬಂದು ಊಟ ಕೊಟ್ಟು ಹೋಗಿದ್ದರು. ಆದರೆ ಸಂಜೆ ಅವರಿಗೆ ಉಸಿರಾಟದ ತೊಂದರೆ ಆಯಿತು’ ಎಂದು ಗೋವಿಂದ ರಾಜು ಹೇಳಿದ್ದಾರೆ.

ಮಂಗಳವಾರ (ಏ.27) ರಾಮು ಅಂತ್ಯಕ್ರಿಯೆ ನೆರವೇರಿದೆ. ತುಮಕೂರು ತಾಲೂಕಿನ ಕುಣಿಗಲ್ ಬಳಿಯ ಕೊಡಿಗೇನಹಳ್ಳಿಯಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ರಾಮು ಅಂತ್ಯಕ್ರಿಯೆ ನಡೆದಿದೆ. ಇದು ಅವರ ಹುಟ್ಟೂರು ಆದ ಕಾರಣ ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಯಿತು. ರಾಮು ಪತ್ನಿ ಮಾಲಾಶ್ರೀ ಸೇರಿದಂತೆ ಕುಟುಂಬದ ಕೆಲವೇ ಕೆಲವು ಮಂದಿ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ: ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ

ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​