‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ

|

Updated on: Oct 31, 2023 | 9:50 AM

ಕ್ಲೈಮ್ಯಾಕ್ಸ್​ ವೇಳೆ ಒಂದು ಸಾಂಗ್ ಬೇಕು ಎಂದರಂತೆ ವರದಣ್ಣ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು. ನಾಗಾಭರಣ ಅವರಿಗೆ ಇದು ಸರಿ ಎನಿಸಲೇ ಇಲ್ಲ. ಕ್ಲೈಮ್ಯಾಕ್ಸ್​ ವೇಳೆ ಹಾಡು ಇಟ್ಟರೆ ಸಿನಿಮಾ ರೋಚಕತೆ ಹೋಗಿ ಬಿಡುತ್ತದೆ ಎನ್ನುವ ಅಭಿಪ್ರಾಯ ನಾಗಾಭರಣ ಅವರದ್ದಾಗಿತ್ತು.

‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ
Follow us on

‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಕೇಳಿದರೆ ಎಂಥವರಿಗಾದರೂ ಒಮ್ಮೆ ರೋಮಾಂಚನ ಆಗುತ್ತದೆ. ಈ ಹಾಡಿಗೆ ಇರುವ ತಾಕತ್ತು ಅಂಥದ್ದು. ಹಾಡಿನ ಪ್ರತಿ ಸಾಲುಗಳು ಕನ್ನಡ ನಾಡಿನ ಬಗ್ಗೆ ಇರುವುದು ಒಂದು ವಿಶೇಷವಾದರೆ, ರಾಜ್​ಕುಮಾರ್ ಅವರ ಕಂಠದಲ್ಲಿ ಈ ಸಾಂಗ್ ಮೂಡಿ ಬಂದಿದೆ ಅನ್ನೋದು ಮತ್ತೊಂದು ವಿಶೇಷ. ರಾಜ್​ಕುಮಾರ್ (Rajkumar) ನಟನೆಯ, ಟಿಎಸ್​ ನಾಗಾಭರಣ ನಿರ್ದೇಶನದ ‘ಆಕಸ್ಮಿಕ’ ಚಿತ್ರದ ಹಾಡನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಹಾಡು ಹುಟ್ಟಿದ್ದು ಹೇಗೆ, ಈ ಹಾಡನ್ನು ಸಿನಿಮಾದಲ್ಲಿ ಬಳಕೆ ಮಾಡಿಕೊಂಡಿದ್ದು ಏಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ನಾಗಾಭರಣ ಅವರು ‘ಆಕಸ್ಮಿಕ’ ಸಿನಿಮಾ ನಿರ್ದೇಶನ ಮಾಡಿದ್ದರು. ರಾಜ್​ಕುಮಾರ್ ಸಹೋದರ ವರದಣ್ಣ ಅವರಿಗೆ ನಾಗಾಭರಣ ಅವರು ಸಿನಿಮಾದ ಕಥೆ ಹೇಳಿದರು. ಕ್ಲೈಮ್ಯಾಕ್ಸ್​ ವೇಳೆ ಒಂದು ಸಾಂಗ್ ಬೇಕು ಎಂದರಂತೆ ವರದಣ್ಣ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು. ನಾಗಾಭರಣ ಅವರಿಗೆ ಇದು ಸರಿ ಎನಿಸಲೇ ಇಲ್ಲ. ಕ್ಲೈಮ್ಯಾಕ್ಸ್​ ವೇಳೆ ಹಾಡು ಇಟ್ಟರೆ ಸಿನಿಮಾ ರೋಚಕತೆ ಹೋಗಿ ಬಿಡುತ್ತದೆ ಎನ್ನುವ ಅಭಿಪ್ರಾಯ ನಾಗಾಭರಣ ಅವರದ್ದಾಗಿತ್ತು.

ಆದರೆ, ವರದಣ್ಣ ಅವರ ಲೆಕ್ಕಾಚಾರ ಬೇರೆಯದೇ ಇತ್ತು. ಕಥೆಯನ್ನು ಮರೆತು ಜನರು ಹಾಡಿನಲ್ಲಿ ಕಳೆದು ಹೋಗಬೇಕು. ಹಾಡಿನ ಕೊನೆಯಲ್ಲಿ ಮತ್ತೆ ಕಥೆಯನ್ನು ತರಬೇಕು ಎಂಬುದು ವರದಣ್ಣ ಅವರ ಲೆಕ್ಕಾಚಾರ ಆಗಿತ್ತು. ಕನ್ನಡದ ಬಗ್ಗೆ ಹಾಡು ಇದ್ದರೆ ಚೆಂದ ಅನ್ನೋದು ವರದಣ್ಣ ಅವರ ಸೂಚನೆ ಆಗಿತ್ತು.

ಕನ್ನಡದ ಕುರಿತು ಹಾಡನ್ನು ಬರೆಯಲು ಹಂಸಲೇಖ ರೆಡಿ ಆದರು. ಹಲವು ಕವಿಗಳ ಪುಸ್ತಕವನ್ನು ನಾಗಾಭರಣ ಅವರು ಹಂಸಲೇಖಗೆ ತಂದುಕೊಟ್ಟರು. ಹಂಸಲೇಖ ಅವರು ತಮಗೆ ತೋಚಿದಂತೆ ಹಾಡು ಬರೆದರು. ನಾಗಾಭರಣ ಹಾಗೂ ಹಂಸಲೇಖ ಅವರು ರಾಜ್​ಕುಮಾರ್ ಅವರನ್ನು ಭೇಟಿ ಮಾಡಲು ತೆರಳಿದರು. ರಾಜ್​ಕುಮಾರ್ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಈ ವೇಳೆ ಹಂಸಲೇಖ ಅವರು ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಎಂದು ಹೇಳಿದರಂತೆ. ‘ಏನು ಇದು’ ಎಂದು ರಾಜ್​ಕುಮಾರ್ ಕೇಳಿದರಂತೆ. ‘ಹುಬ್ಬಳಿಗೆ ಹೋಗ್ತಾ ಇದೀರಲ್ಲ. ಅಲ್ಲಿ, ಜಟಕಾ ಬಂಡಿ ಮೇಲೆ ಕುಳಿತು ಈ ಹಾಡು ಹೇಳಿಬಿಡಿ’ ಎಂದರು ಹಂಸಲೇಖ. ಮುಂದಿನ ಸಾಲು ಹೇಳುವಂತೆ ರಾಜ್​ಕುಮಾರ್ ಕೋರಿದರು. ‘ಮೆಟ್ಟಿದರೇ ಕನ್ನಡ ಮಣ್ಣ ಮೆಟ್ಟಬೇಕು..’ ಎಂದರು ಹಂಸಲೇಖ. ಈ ಸಾಲುಗಳು ರಾಜ್​ಕುಮಾರ್ ಅವರಿಗೂ ಇಷ್ಟ ಆಯ್ತು.

ಇದನ್ನೂ ಓದಿ: Mysore Dasara 2023: ಮೈಸೂರು ದಸರಾಗೆ ಚಾಲನೆ, ಹಂಸಲೇಖ ಉದ್ಘಾಟನಾ ಭಾಷಣದ ಮುಖ್ಯಾಂಶಗಳು

‘ಚಿತ್ರರಂಗದಲ್ಲಿ ಇರುವ ಎಲ್ಲರಿಗೂ ಈಗೋ ಜಾಸ್ತಿ. ಆದರೆ, ನಾಗಾಭರಣ ಅವರಿಗೆ ಈ ಈಗೋ ಇರಲಿಲ್ಲ. ಅವರು ನನ್ನ ಪ್ರಶ್ನೆ ಮಾಡಿಲ್ಲ. ನಾನು, ರಾಜ್​ಕುಮಾರ್ ಮಾತನಾಡುವಾಗ ನೀವು ಏಕೆ ಮಧ್ಯ ಮಾತನಾಡುತ್ತೀರಿ ಎಂದು ಕೇಳಲಿಲ್ಲ. ಅವರು ಆಗುವ ಕೆಲಸಕ್ಕೆ ಕಲ್ಲು ಹಾಕಲಿಲ್ಲ. ಇದರಿಂದ ಕನ್ನಡದ ಹಾಡು ಹುಟ್ಟಿತು’ ಎಂದು ಹಂಸಲೇಖ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ