‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ

ಒಂದು ಕಾಲದಲ್ಲಿ ಸುದೀಪ್​ ಮತ್ತು ದರ್ಶನ್​ ಸ್ನೇಹಿತರಾಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ದೂರ ಆದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ದರ್ಶನ್​ ಪ್ರಮುಖ ಆರೋಪಿ ಆಗಿದ್ದು, ಆ ಕುರಿತು ಸುದೀಪ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ
ಕಿಚ್ಚ ಸುದೀಪ್​, ದರ್ಶನ್​

Updated on: Jun 16, 2024 | 6:40 PM

ನಟ ದರ್ಶನ್​ (Darshan) ಅವರು ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಕಿಚ್ಚ ಸುದೀಪ್​ ಕೂಡ ಆ ಕುರಿತು ಮಾತನಾಡಿದ್ದಾರೆ. ‘ನನಗೆ ಗೊತ್ತಿರೋದು ಇಷ್ಟೇ.. ನೀವು (ಮಾಧ್ಯಮ) ಏನು ತೋರಿಸುತ್ತಿದ್ದೀರೋ ನಾವು ಅದನ್ನೇ ನೋಡಿ ವಿಚಾರ ತಿಳಿದುಕೊಳ್ಳುತ್ತಿದ್ದೇವೆ. ಅದರಲ್ಲಿ ಅರ್ಥ ಆಗಿರೋದು ಏನೆಂದರೆ, ಮಾಧ್ಯಮ ಮತ್ತು ಪೊಲೀಸ್​ ಸಿಬ್ಬಂದಿ ಬಹಳ ಪ್ರಯತ್ನ ಹಾಕಿ ಸತ್ಯಾಂಶ ಹೊರತರಲು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರಲ್ಲಿ ಎರಡನೇ ಮಾತೇ ಇಲ್ಲ’ ಎಂದು ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ.

‘ನನಗೆ ಗೊತ್ತಿರುವ ಹಾಗೆ, ಇತ್ತೀಚಿಗೆ ನಾನು ನಿಮ್ಮ ನ್ಯೂಸ್​ನಲ್ಲಿ ನೋಡಿದ್ದು, ಸಿಎಂ ಅವರೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕೂತಿದ್ದಾರೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿ ಇರುವ ಅವರು, ಮಾಧ್ಯಮದವರು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ, ಕಾಮನ್​ ಮ್ಯಾನ್​ ಆಗಿ ನನ್ನ ಪ್ರಕಾರ ಕಲಾವಿದರ ಹೆಸರು ಬರಲ್ಲ. ನಾನು ಅವರ ಪರ, ಇವರ ಪರ ಅಂತ ಮಾತಾಡುವುದು ತಪ್ಪಾಗುತ್ತದೆ. ವಿರುದ್ಧವಾಗಿ ಮಾತನಾಡಿದರೂ ತಪ್ಪಾಗತ್ತೆ’ ಎಂದಿದ್ದಾರೆ ಸುದೀಪ್​.

‘ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಹೆಣ್ಮಗುಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾ ಸ್ವಾಮಿ ಅವರು ಎಲ್ಲೋ ರಸ್ತೆಯಲ್ಲಿ ಆ ರೀತಿ ಬಿದ್ದಿದ್ದರಲ್ಲ, ಅವರಿಗೆ ನ್ಯಾಯ ಸಿಗಬೇಕು. ಹುಟ್ಟಬೇಕಾಗಿರುವ ಆ ಮಗುಗೆ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟುಬೇಕು ಎಂದರೆ ಈ ಕೇಸ್​ನಲ್ಲಿ ಒಳ್ಳೆಯ ನ್ಯಾಯ ಆಗಬೇಕು’ ಎಂದಿದ್ದಾರೆ ಕಿಚ್ಚ ಸುದೀಪ್​.

ಇದನ್ನೂ ಓದಿ: ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಚಾಲಕ ರವಿ ಮನೆಯಲ್ಲಿ ತೀವ್ರ ವಿಚಾರಣೆ

‘ನಾನು ಇಷ್ಟು ಹೇಳಬಲ್ಲೆ, ಮಾಧ್ಯಮದವರು ತೋರಿಸಿದ್ದು ನಮಗೆ ಗೊತ್ತೇ ಹೊರತು ನಾನು ಸ್ಟೇಷನ್​ ಒಳಗೆ ಇಲ್ಲ. ಯಾವ ಸ್ಥಳದಲ್ಲೂ ನಾವು ಇಲ್ಲ. ಆ ಕುಟುಂಬಕ್ಕಾಗಿ ಎಲ್ಲರ ಹೃದಯ ಮಿಡಿಯುತ್ತಿದೆ. ವಾತಾವರಣ ಏನೋ ಸರಿ ಕಾಣಿಸುತ್ತಿಲ್ಲ. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್​ಚಿಟ್​ ಬೇಕಾಗಿದೆ. ಕಲಾವಿದರು ತುಂಬ ಜನ ಇದ್ದಾರೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us