ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?

Adipurush: ಈ ಹಿಂದೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಕಿಚ್ಚ ಸುದೀಪ್​ ಅವರು ವಿಶೇಷ ಪಾತ್ರಗಳನ್ನು ಮಾಡಿದ್ದುಂಟು. ಈಗ ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಸುದೀಪ್​ ಒಂದು ಅಥಿತಿ ಪಾತ್ರ ಮಾಡುತ್ತಾರೆಂಬ ಬಗ್ಗೆ ಕೆಲವೆಡೆ ವರದಿ ಆಗಿದೆ.

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?
ಆದಿಪುರುಷ್​ ಚಿತ್ರದ ಪೋಸ್ಟರ್​ - ಕಿಚ್ಚ ಸುದೀಪ್​
Edited By:

Updated on: May 06, 2021 | 4:25 PM

ಪ್ರಭಾಸ್​ ನಟನೆಯ ಆದಿಪುರುಷ್​ ಚಿತ್ರದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗೆ ಕಾರಣ ಹಲವು. ಖ್ಯಾತ ನಿರ್ದೇಶಕ ಓಂ ರಾವುತ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಾಮನಾಗಿ ಪ್ರಭಾಸ್​ ಕಾಣಿಸಿಕೊಂಡರೆ, ರಾವಣನ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಬಣ್ಣ ಹಚ್ಚುತ್ತಿದ್ದಾರೆ. ಈಗ ಈ ಚಿತ್ರತಂಡಕ್ಕೆ ಕಿಚ್ಚ ಸುದೀಪ್​ ಕೂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅವರು ರಾವಣನ ತಮ್ಮ ವಿಭೀಷಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಹಲವು ದಿನಗಳ ಹಿಂದೆಯೇ ಆದಿಪುರುಷ್​ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಿತ್ತು. ಆದರೆ ಕೊರೊನಾ ವೈರಸ್​ ಹರಡುತ್ತಿರುವ ಕಾರಣ ಚಿತ್ರೀಕರಣಕ್ಕೆ ಈಗ ಬ್ರೇಕ್​ ಹಾಕಲಾಗಿದೆ. ಪಾತ್ರವರ್ಗದ ಕಾರಣಕ್ಕಾಗಿ ಈ ಸಿನಿಮಾ ಹೆಚ್ಚು ಹೈಪ್​ ಪಡೆದುಕೊಳ್ಳುತ್ತಿದೆ. ಸುದೀಪ್ ಅವರು ವಿಭೀಷಣನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಗುಸುಗುಸು ಕೇಳಿಬಂದಿದೆಯಾದರೂ ಆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಪರಭಾಷೆಯಲ್ಲಿ ಸುದೀಪ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಹಿಂದೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಅವರು ವಿಶೇಷ ಪಾತ್ರಗಳನ್ನು ಮಾಡಿದ್ದಾರೆ. ಪ್ರಭಾಸ್​ ನಟನೆಯ ಬಾಹುಬಲಿ ಚಿತ್ರದಲ್ಲಿ ಸುದೀಪ್​ ಅವರು ಅಸ್ಲಮ್​ ಖಾನ್​ ಎಂಬ ಚಿಕ್ಕ ಪಾತ್ರವನ್ನು ಮಾಡಿದ್ದರು. ಈಗ ಮತ್ತೆ ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಅಥಿತಿ ಪಾತ್ರ ಮಾಡುವ ಬಗ್ಗೆ ಕೆಲವೆಡೆ ವರದಿ ಆಗಿದೆ. ಈ ಕುರಿತಂತೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಯಾವಾಗ ಹೊರಬರಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಅಜಯ್​ ದೇವಗನ್​ ನಟನೆಯ ‘ತಾನಾಜಿ: ದಿ ಅನ್​ ಸಂಗ್​ ವಾರಿಯರ್​’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಪಡೆದಿರುವ ನಿರ್ದೇಶಕ ಓಂ ರಾವುತ್​ ಅವರು ಆದಿಪುರುಷ್​ಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಫೆಬ್ರವರಿಯಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿರುವಾಗ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್​ ಯಾವುದೇ ಸಾವು ನೋವು ಆಗಿರಲಿಲ್ಲ.

ಇದನ್ನೂ ಓದಿ:

 Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Prabhas: ಪ್ರಭಾಸ್​ ಮನೆಗೆ ಬಂತು ದುಬಾರಿ ಲ್ಯಾಂಬೋರ್ಗಿನಿ! ಬೆಲೆ ಕೇಳಿ ಸುಸ್ತಾದ ಫ್ಯಾನ್ಸ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us