
‘ಕೊತ್ತಲವಾಡಿ’ ಸಿನಿಮಾ (Kothalavadi ) ಆಗಸ್ಟ್ 1ರಂದು ಅದ್ದೂರಿಯಾಗಿ ರಿಲೀಸ್ ಆಯಿತು. ಯಶ್ ತಾಯಿ ನಿರ್ಮಾಣದ ಸಿನಿಮಾ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಕೆಲವರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದರು. ಈಗ ಸಿನಿಮಾ ಒಟಿಟಿಗೂ ಕಾಲಿಟ್ಟಿದೆ. ಆದರೆ, ಕೆಲವು ಕಲಾವಿದರಿಗೆ ಇನ್ನೂ ಪೇಮೆಂಟ್ ಆಗಿಲ್ಲವಂತೆ. ಈ ಬಗ್ಗೆ ಚಿತ್ರದ ಕಲಾವಿದ ಮಹೇಶ್ ಗುರು ಅವರು ವಿಡಿಯೋ ಮಾಡಿ ದೂರಿದ್ದಾರೆ. ಯಶ್ ತಾಯಿಗೆ ಈ ವಿಚಾರ ತಲುಪಬೇಕು ಎಂಬುದು ಅವರ ಆಶಯ.
‘ನನ್ನ ಹೆಸರು ಮಹೇಶ್ ಗುರು. ನಾನು ರಂಗಭೂಮಿ ಕಲಾವಿದ. ಸಿನಿಮಾ, ಧಾರಾವಾಹಿಗಳಲ್ಲೂ ನಟಿಸಿದ್ದೇನೆ. ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ರಿಲೀಸ್ ಆಯಿತು. ಯಶ್ ತಾಯಿ ಪುಷ್ಪ ಅವರು ಇದನ್ನು ನಿರ್ಮಾಣ ಮಾಡಿದ್ದರು. ಪೃಥ್ವಿ ಅಂಬರ್ ಸಹ ನಟನಾಗಿ ನಾನು ಸಿನಿಮಾದಲ್ಲಿ ಇದ್ದೆ. ಮೂರು ತಿಂಗಳಿಗೂ ಅಧಿಕ ಕಾಲ ಸಿನಿಮಾ ಶೂಟ್ನಲ್ಲಿ ಭಾಗಿ ಆಗಿದ್ದೆ’ ಎಂದು ಅವರು ಹೇಳಿದರು.
‘ನಾನು ಆಯ್ಕೆ ಆಗಿದ್ದು, ನಿರ್ಮಾಣ ಸಂಸ್ಥೆ ಕಡೆಯಿಂದ ಅಲ್ಲ ನಿರ್ದೇಶಕ ಶ್ರೀರಾಜ್ ಕಡೆಯಿಂದ. ನಿರ್ದೇಶಕರು ಪ್ಯಾಕೇಜ್ ಮಾತನಾಡಿದರು. ಸಿನಿಮಾ ಆರಂಭಕ್ಕೂ ಮೊದಲು ಅಡ್ವಾನ್ಸ್ ಕೊಡಸ್ತೀನಿ ಅಂತ ಹೇಳಿದ್ದರು. ಆದರೆ ಕೊಡಿಸಿಲ್ಲ. ಸಿನಿಮಾ ಮುಗಿದರೂ ಹಣ ಬಂದಿಲ್ಲ ಅಂತ ಹೇಳುತ್ತಲೇ ಬಂದರು. ಡಬ್ಬಿಂಗ್ ಮುಗಿದರೂ ಹಣ ಕೊಡಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಬರಲು ರೆಡಿ ಆಯ್ತು ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’; ಎಲ್ಲಿ, ಯಾವಾಗ?
‘ಆ ಬಳಿಕ ಕರೆ ಮಾಡಿದ್ರೆ ಕಾಲ್ ಎತ್ತಲಿಲ್ಲ. ಟೀಸರ್, ಟ್ರೇಲರ್ ಈವೆಂಟ್ ಆದರೂ ನಮಗೆ ಆಹ್ವಾನವೇ ಕೊಡಲಿಲ್ಲ. ಈಗ ಸಿನಿಮಾ ಒಟಿಟಿಗೆ ಬಂದಿದೆ. ಆದರೂ ನಮಗೆ ಪೇಮೆಂಟ್ ಆಗಿಲ್ಲ. ನಿರ್ಮಾಪಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ವಿಡಿಯೋ ಮಾಡಿದ್ದೇನೆ. ಇದು ಪುಷ್ಪಾ ಅವರಿಗೂ ಗೊತ್ತಾಗಲಿ’ ಎಂದು ಮಹೇಶ್ ಗುರು ಹೇಳಿದ್ದಾರೆ. ಅನೇಕರು ಈ ವಿಡಿಯೋಗೆ ಯಶ್ ತಾಯಿಗೆ ತಲುಪೋವರೆಗೂ ಶೇರ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:33 pm, Tue, 16 September 25