ಕೋಟಿ ರಾಮು ಹುಟ್ಟುಹಬ್ಬ; ಕಣ್ಣೀರು ತುಂಬಿಕೊಂಡು ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

Koti Ramu: ‘ನೀವು ದೂರವಾದ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೇ ಇವೆ. ನಿಮ್ಮನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತಿ ಕೋಟಿ ರಾಮುಗೆ ಮಾಲಾಶ್ರೀ ಪತ್ರ ಬರೆದಿದ್ದಾರೆ.

ಕೋಟಿ ರಾಮು ಹುಟ್ಟುಹಬ್ಬ; ಕಣ್ಣೀರು ತುಂಬಿಕೊಂಡು ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ
ಕೋಟಿ ರಾಮು, ಮಾಲಾಶ್ರೀ ಕುಟುಂಬ
Edited By:

Updated on: Jun 20, 2021 | 4:12 PM

ಕೊರೊನಾ ವೈರಸ್​ನಿಂದಾಗಿ ಸ್ಯಾಂಡಲ್​ವುಡ್​ನ ಜನಪ್ರಿಯ ನಿರ್ಮಾಪಕ ಕೋಟಿ ರಾಮು ಅವರು ನಿಧನರಾಗಿದ್ದು ತುಂಬ ನೋವಿನ ಸಂಗತಿ. ಏ.26ರಂದು ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಸುದ್ದಿ ಇಡೀ ಸ್ಯಾಂಡಲ್​ವುಡ್​ಗೆ ಆಘಾತ ಉಂಟು ಮಾಡಿತ್ತು. ಅವರ ಪತ್ನಿ ಮಾಲಾಶ್ರೀ ಮತ್ತು ಮಕ್ಕಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಯಿತು. ಇಂದು (ಜೂ.20) ರಾಮು ಜನ್ಮದಿನ. ಆ ಸಲುವಾಗಿ ಪತಿಗೆ ಭಾವುಕವಾಗಿ ಪತ್ರ ಬರೆದಿರುವ ಮಾಲಾಶ್ರೀ ಅವರು, ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

‘ನನ್ನ ಆತ್ಮವೇ, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ನನಗೆ ದೇವರ ವರವಾಗಿ ಬಂದ್ರಿ. ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ. ಈ ದಿನ ನನ್ನ ದೇವರ ಹುಟ್ಟುಹಬ್ಬ. 23 ವರ್ಷಗಳ ಕಾಲ ಈ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸಿ, ನನ್ನ ಉಸಿರಲ್ಲಿ ಉಸಿರಾಗ್ತಾ ಬಂದ್ರಿ. ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ. ನನ್ನ ನುಡಿ, ನಗು, ನೆಮ್ಮದಿ ನೀವಾಗಿದ್ರಿ. ನನ್ನ ಹೆಸರಿಗೆ ಬೆಳಕಾಗಿದ್ರಿ’ ಎಂದು ಪತಿಯನ್ನು ಮಾಲಾಶ್ರೀ ನೆನದಿದ್ದಾರೆ.

‘ದಿನ ರಾತ್ರಿ ನನ್ನ ಆಗುಹೋಗುಗಳನ್ನು ಆಲಿಸಿ, ನನಗೆ ಬುದ್ಧಿ ಹೇಳಿ ಬದುಕಿಗೆ ಬುನಾದಿ ಕಟ್ಟಿಕೊಟ್ಟ ಗುರುಗಳಾಗಿದ್ರಿ. ಮಕ್ಕಳ ಜೀವನವನ್ನು ಹಸನಾಗಿ ರೂಪಿಸಿದ ಪರ್ಫೆಕ್ಟ್​ ತಂದೆ ಆಗಿದ್ರಿ. ನೀವು ದೂರವಾದ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೇ ಇವೆ. ನಿಮ್ಮನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮಾಲಾಶ್ರೀ ಪತ್ರದಲ್ಲಿ ಬರೆದಿದ್ದಾರೆ.

‘ನನಗಾಗಿ ಜನ್ಮ ಪಡೆದು ಬಂದ ನನ್ನ ಹೃದಯ ನೀವು. ನನಗೆ ಏನೇನು ಬೇಕೋ ಅದನ್ನೆಲ್ಲ ಕೊಟ್ಟವರು ನೀವು. ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿರೀ.. ಎಂದೆಂದಿಗೂ ನಿಮ್ಮನ್ನು ನಾವು ಮಿಸ್​ ಮಾಡಿಕೊಳ್ಳುತ್ತೇವೆ. ಸದಾ ನಿಮ್ಮನ್ನು ಪ್ರೀತಿಸುತ್ತೇವೆ’ ಎಂದು ಮಾಲಾಶ್ರೀ ಭಾವುಕವಾಗಿ ಪತ್ರವನ್ನು ಮುಗಿಸಿದ್ದಾರೆ.

ಇದನ್ನೂ ಓದಿ:

Koti Ramu: ಕೋಟಿ ರಾಮು ನಿಧನದ ಬಳಿಕ ಮೊದಲ ಬಾರಿ ಮೌನ ಮುರಿದ ಪತ್ನಿ ಮಾಲಾಶ್ರೀ

ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್​ ಹೀಗೆ ಹೇಳಿದ್ದೇಕೆ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us