ಕುತೂಹಲ ಹೆಚ್ಚಿಸುತ್ತಲೇ ಸಾಗುತ್ತಿರುವ ‘ಕ್ರೇತ್ರಪತಿ’ ಬಿಡುಗಡೆ ಯಾವಾಗ?

Kshetrapati: ನಟ ನವೀನ್ ಶಂಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ಷೇತ್ರಪತಿ'ಯ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಯಾವಾಗ?

ಕುತೂಹಲ ಹೆಚ್ಚಿಸುತ್ತಲೇ ಸಾಗುತ್ತಿರುವ ಕ್ರೇತ್ರಪತಿ ಬಿಡುಗಡೆ ಯಾವಾಗ?
ಕ್ಷೇತ್ರಪತಿ

Updated on: Jul 30, 2023 | 7:25 PM

ನವೀನ್ ಶಂಕರ್ (Naveen Shankar) ಕನ್ನಡ ಚಿತ್ರರಂಗದ ಪ್ರತಿಭಾನ್ವಿಯ ಯುವನಟ. ‘ಗುಲ್ಟು’ ಸಿನಿಮಾದ ಮೂಲಕ ನಟನಾ ಪ್ರತಿಭೆ ಸಾಬೀತುಪಡಿಸಿರುವ ನವೀನ್ ಶಂಕರ್, ತಮ್ಮನ್ನು ತಾವು ಹೊಸ ರೀತಿಯ ಕತೆಗಳಿಗೆ, ಹೊಸ ರೀತಿಯ ಪ್ರಯೋಗಗಳಿಗೆ ಒಗ್ಗಿಗೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಬಿಡುಗಡೆ ಆದ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಸಿನಿಮಾದಲ್ಲಿ ವಿಲನ್ ಆಗಿ ಖಡಕ್ ಆಗಿ ಕಾಣಿಸಿಕೊಂಡಿದ್ದ ನವೀನ್, ‘ಕ್ರೇತ್ರಪತಿ’ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದ್ದು ಸಿನಿಮಾದ ಹೊಸ ಪೋಸ್ಟರ್ ಒಂದು ಬಿಡುಗಡೆ ಆಗಿದೆ.

‘ಗುಲ್ಟು’, ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಹೊಯ್ಸಳ’ ಚಿತ್ರಗಳ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ‌. ‘ಬಸವ’ ಹೆಸರಿನ ಪಾತ್ರದಲ್ಲಿ ನವೀನ್ ಶಂಕರ್ ‘ಕ್ಷೇತ್ರಪತಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಮಿಕಾ ಹೆಸರಿನ ಹೊಸ ತಲೆಮಾರಿನ ಪತ್ರಕರ್ತೆಯ ಪಾತ್ರದಲ್ಲಿ ನಟಿ ಅರ್ಚನಾ ಜೋಯಿಸ್ ನಟಿಸಿದ್ದಾರೆ.

ರೈತರ ಹೋರಾಟದ ಕತೆಯನ್ನು ‘ಕ್ಷೇತ್ರಪತಿ’ ಸಿನಿಮಾ ಒಳಗೊಂಡಿದ್ದು ಈ ರೈತ ಹೋರಾಟಕ್ಕೆ ಮಹಿಳಾ ಆಯಾಮವನ್ನು ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ ಎಂದಿದೆ ಚಿತ್ರತಂಡ. ಈ ಹಿಂದೆ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಜೋಡಿ ನಟಿಸಿತ್ತು. ಇದೀಗ ‘ಕ್ಷೇತ್ರಪತಿ’ ಸಿನಿಮಾದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಕ್ಷೇತ್ರಪತಿ” ಸಿನಿಮಾದ ಟೀಸರ್ ಗೆ ಪ್ರಶಂಸೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​

ರವಿ ಬಸ್ರೂರ್ ಮ್ಯೂಸಿಕ್ ಮತ್ತು ಮೂವೀಸ್ ಈ ಸಿನಿಮಾವನ್ನು ಅರ್ಪಿಸುತ್ತಿದೆ. ಆಶ್ರಗ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಕ್ಷೇತ್ರಪತಿ’ ಸಿನಿಮಾ ರಾಜಕೀಯ ಡ್ರಾಮಾ ಕಥಾಹಂದರವನ್ನು ಒಳಗೊಂಡಿದೆ. ‘ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್’ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದಾರೆ.

ಕೆ.ಜಿ.ಎಫ್ ಸಿನಿಮಾಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ ‘ಕ್ಷೇತ್ರಪತಿ’ ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. ವೈ.ವಿ.ಬಿ ಶಿವಸಾಗರ್ ಈ ಸಿನಿಮಾದ ಸಿನಿಮಾಟೊಗ್ರಾಫರ್. ಎಡಿಟಿಂಗ್ ಅನ್ನು ಮನು ಶೇಡ್ಗಾರ್ ಮಾಡಿದ್ದಾರೆ, ನರಸಿಂಹ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಜೀವನ್ ಅವರು ಸಿನಿಮಾಕ್ಕೆ ನೃತ್ಯ ಕೊರಯೋಗ್ರಫಿ ಮಾಡಿದ್ದಾರೆ. ಸಿನಿಮಾದಲ್ಲಿ ನವೀನ್ ಶಂಕರ್, ಅರ್ಚನಾ ಜೋಯಿಸ್, ಪೋಷಕ ನಟ ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 18ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us