‘ಗುರುಪ್ರಸಾದ್ ಸಾವಿನಲ್ಲಿ ವಿಕೃತಿ ಕಾಣುವ ವ್ಯಕ್ತಿ ಜಗ್ಗೇಶ್’: ಗರಂ ಆದ ಜಗದೀಶ್

ನಿರ್ದೇಶಕ ಗುರುಪ್ರಸಾದ್​ ಅವರನ್ನು ನಟ ಜಗ್ಗೇಶ್ ಹತ್ತಿರದಿಂದ ನೋಡಿದ್ದರು. ಗುರುಪ್ರಸಾದ್​ ಜೊತೆ ಅವರು 3 ಸಿನಿಮಾ ಮಾಡಿದ್ದರು. ಭಾನುವಾರ (ನ.3) ಗುರುಪ್ರಸಾದ್ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಜಗ್ಗೇಶ್ ಅವರು ಕೆಲವು ಹೇಳಿಕೆಗಳನ್ನು ನೀಡಿದರು. ಅದರಿಂದ ಬಿಗ್ ಬಾಸ್ ಖ್ಯಾತಿಯ ಜಗದೀಶ್ ಗರಂ ಆಗಿದ್ದಾರೆ.

‘ಗುರುಪ್ರಸಾದ್ ಸಾವಿನಲ್ಲಿ ವಿಕೃತಿ ಕಾಣುವ ವ್ಯಕ್ತಿ ಜಗ್ಗೇಶ್’: ಗರಂ ಆದ ಜಗದೀಶ್
ಗುರುಪ್ರಸಾದ್​, ಜಗದೀಶ್, ಜಗ್ಗೇಶ್

Updated on: Nov 04, 2024 | 8:10 AM

ನಟ ಜಗ್ಗೇಶ್ ಹಾಗು ನಿರ್ದೇಶಕ ಗುರುಪ್ರಸಾದ್ ಅವರು ಜೊತೆಯಾಗಿ ‘ಮಠ’, ‘ಎದ್ದೇಳು ಮಂಜುನಾಥ’, ‘ರಂಗನಾಯಕ’ ಸಿನಿಮಾಗಳನ್ನು ಮಾಡಿದ್ದರು. ಆದರೆ ಅವರಿಬ್ಬರ ನಡುವೆ ಮನಸ್ತಾಪ ಇತ್ತು. ಭಾನುವಾರ (ನವೆಂಬರ್​ 3) ಗುರುಪ್ರಸಾದ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಕೂಡಲೇ ಜಗ್ಗೇಶ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಆದರೆ ಅವರು ಗುರುಪ್ರಸಾದ್ ನಿಧನದ ಬಳಿಕ ಕೆಳಮಟ್ಟದಲ್ಲಿ ಟೀಕೆ ಮಾಡಿದ್ದು ಸರಿಯಲ್ಲ ಎಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಹೇಳಿದ್ದಾರೆ. ಈ ಮನಸ್ಥಿತಿಯನ್ನು ವಿಕೃತಿ ಎಂದು ಜಗದೀಶ್ ಹೇಳಿದ್ದಾರೆ.

ಜಗದೀಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬ ಆ್ಯಕ್ಟೀವ್. ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಅನೇಕ ವಿಚಾರಗಳ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ. ಈಗ ಗುರುಪ್ರಸಾದ್ ಸಾವಿನ ನಂತರ ಜಗ್ಗೇಶ್ ಹೇಳಿದ ಮಾತುಗಳನ್ನು ಜಗದೀಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

‘ವಾವ್​ ಜಗ್ಗೇಶ್.. ಸತ್ತ ವ್ಯಕ್ತಿ ಬಗ್ಗೆ ಎಂತಹಾ ವಿಶ್ಲೇಷಕ ಕೃತಿಯನ್ನು ಕೊಟ್ಟೆ. ಸಾವಿನಲ್ಲೂ ವಿಕೃತಿ ಕಾಣಬಹುದಾಗಿದೆ ಎಂಬುದನ್ನು ನಿನ್ನಿಂದ ಕಲಿಯಬೇಕಾಗಿದೆ. ಸಂಸ್ಕೃತಿಯೇ ಅದೇ ರೀತಿ ಇದೆಯೋ ಅಥವಾ ನಿನ್ನ ಮನಸ್ಥಿತಿಯೇ ಅಷ್ಟು ವಿಕೃತವಾಗಿದೆಯೋ ನನಗೆ ಗೊತ್ತಿಲ್ಲ. ಗುರುಪ್ರಸಾದ್​ಗೆ ಕೆರೆತ ಇತ್ತಾ? ಕೀವು, ರಕ್ತ ಬರುತ್ತಿತ್ತಾ? ಎಂಥ ಮನುಷ್ಯ ನೀನು? ಯಾವ ರೀತಿಯಲ್ಲಿ ಮನುಷ್ಯ ಎನ್ನಬೇಕೋ ತಿಳಿಯುತ್ತಿಲ್ಲ’ ಎಂದು ಜಗದೀಶ್ ಹೇಳಿದ್ದಾರೆ.

‘ನಿನ್ನನ್ನು ನೀನು ರಾಘವೇಂದ್ರರ ಭಕ್ತ ಅಂತ ಹೇಳ್ತೀಯ. ರಾಘವೇಂದ್ರನ ಭಕ್ತನಾಗಿ, ನಿನಗೆ ಲೈಫ್ ಕೊಟ್ಟ ಡೈರೆಕ್ಟರ್ ಬಗ್ಗೆ ಈ ರೀತಿ ಮಾತಾಡ್ತೀಯ. ‘ಮಠ’ ಸಿನಿಮಾದಲ್ಲಿ ಗುರುಪ್ರಸಾದ್ ನಿನಗೆ ಲೈಫ್ ಕೊಟ್ಟ. ಜಗ್ಗೇಶ್ ಯಾರು ಅಂತ ಇಡೀ ಕರ್ನಾಟಕ ಮರೆತುಹೋಗಿತ್ತು. ಸಾವಿನಲ್ಲೂ ವಿಕೃತಿ ಕಾಣುವಂತಹ ವ್ಯಕ್ತಿ ನೀನು ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ಜಗ್ಗೇಶ್​ಗೆ ಜಗದೀಶ್ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ಗುರುಪ್ರಸಾದ್​ಗೆ ಆ ಕಾಯಿಲೆ ಇತ್ತು, ನಾವು ದೂರ ಇರುತ್ತಿದ್ವಿ: ಜಗ್ಗೇಶ್ ಹೇಳಿಕೆ

‘ನೀನು ಮರೆತು ಹೋಗಿದ್ದೀಯ. 25 ವರ್ಷದ ಹಿಂದೆ ಯಾವನಿಗೋ 5 ಲಕ್ಷ ರೂಪಾಯಿ ಕೊಡಬೇಕು ಅಂತ ಹನುಮಂತೇ ಗೌಡರನ್ನು ಕರೆದುಕೊಂಡು ನಮ್ಮ ಆಫೀಸ್​ಗೆ ಬಂದೆ. ಆವತ್ತು ನಾನು ನಿನ್ನ ರೈಟ್​ ಹೇಳು ಅಂದೆ. ನೀನೇನು ರೌಡಿನಾ? ಆವತ್ತೇ ನಿನ್ನ ಯೋಗ್ಯತೆ ಗೊತ್ತಾಯಿತು. ಗುರುಪ್ರಸಾದ್ ಬಗ್ಗೆ ನೀನು ಆಡಿದ ಮಾತು ನನಗಂತೂ ಜೀರ್ಣ ಆಗಿಲ್ಲ. ನಿನ್ನ ಮತ್ತು ಅಶೋಕನ ಡೀಲ್ ನನಗೆ ಚೆನ್ನಾಗಿ ಗೊತ್ತು. ಕಾಲಾಯ ತಸ್ಮೈ ನಮಃ. ಇಂದು ಗುರುಪ್ರಸಾದ್ ಮನೆಯ ಬಾಗಿಲಲ್ಲಿ ಇದ್ದ ಯಮ ನಾಳೆ ಯಾರ ಮನೆಗೆ ಬೇಕಾದರೂ ಬರಬಹುದು. ಕಾದು ನೋಡೋಣ’ ಎಂದು ಜಗದೀಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us