Mellage Song: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಬಂತು ‘ಮೆಲ್ಲಗೆ..’ ಮೆಲೋಡಿ ಸಾಂಗ್​

|

Updated on: Nov 06, 2023 | 9:01 PM

Raj B Shetty: ಒಂದಷ್ಟು ಕಾರಣಗಳಿಂದಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ‘ಮೆಲ್ಲಗೆ..’ ಹಾಡಿನಿಂದಾಗಿ ಆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ. ಈ ಗೀತೆಗೆ ಮಿಧುನ್‍ ಮುಕುಂದನ್‍ ಸಂಗೀತ ಸಂಯೋಜಿಸಿದ್ದಾರೆ. ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಪೃಥ್ವಿ ಅವರು ಸಾಹಿತ್ಯ ರಚಿಸಿದ್ದಾರೆ.

Mellage Song: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಬಂತು ‘ಮೆಲ್ಲಗೆ..’ ಮೆಲೋಡಿ ಸಾಂಗ್​
ಸಿರಿ ರವಿಕುಮಾರ್​, ರಾಜ್​ ಬಿ. ಶೆಟ್ಟಿ
Follow us on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜ್​ ಬಿ. ಶೆಟ್ಟಿ (Raj B Shetty) ನಟನೆ, ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಆ ಪ್ರಾಜೆಕ್ಟ್​ನಿಂದ ಹಿಂದೆ ಸರಿದು, ಕೇವಲ ನಿರ್ಮಾಪಕಿಯಾಗಿ ಮುಂದುವರಿದರು. ನಾಯಕಿಯ ಸ್ಥಾನಕ್ಕೆ ನಟಿ ಸಿರಿ ರವಿಕುಮಾರ್​ ಎಂಟ್ರಿ ಆಯಿತು. ಈ ಸಿನಿಮಾದ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದೆ. ನವೆಂಬರ್​ 24ರಂದು ‘ಸ್ವಾತಿ ಮುತ್ತಿನ ಮಳೆ ಹನಿಯೇ(Swathi Mutthina Male Haniye) ಸಿನಿಮಾ ರಿಲೀಸ್​ ಆಗಲಿದೆ. ಈಗ ಈ ಚಿತ್ರದಿಂದ ಮೊದಲ ಸಾಂಗ್​ ಬಿಡುಗಡೆ ಆಗಿದೆ. ‘ಮೆಲ್ಲಗೆ..’ ಎಂಬ ಈ ಸಾಂಗ್​ ಸಖತ್​ ಮಧುರವಾಗಿದೆ. ಸಂಗೀತಪ್ರೇಮಿಗಳು ಈ ಹಾಡನ್ನು ಕೇಳಿ ತಲೆದೂಗುತ್ತಿದ್ದಾರೆ. ಒಂದಷ್ಟು ಕಾರಣಗಳಿಂದಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ‘ಮೆಲ್ಲಗೆ..’ ಹಾಡಿನಿಂದಾಗಿ ಆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ.

‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ನಿರ್ದೇಶನದಿಂದ ಗುರುತಿಸಿಕೊಂಡಿರುವ ರಾಜ್​ ಬಿ. ಶೆಟ್ಟಿ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಸಿನಿಮಾದ ಕಥೆಯ ಬಗ್ಗೆ ವಿಶೇಷವಾದ ನಿರೀಕ್ಷೆ ಮನೆ ಮಾಡಿದೆ. ‘ಮೆಲ್ಲಗೆ..’ ಗೀತೆಗೆ ಮಿಧುನ್‍ ಮುಕುಂದನ್‍ ಅವರು ಸಂಗೀತ ಸಂಯೋಜಿಸಿದ್ದಾರೆ. ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಪೃಥ್ವಿ ಅವರು ಈ ಹಾಡನ್ನು ಬರೆದಿದ್ದಾರೆ. ಹಾಡಿನ ಬಗ್ಗೆ ಮಾತಾಡಿದ ರಾಜ್‍ ಬಿ. ಶೆಟ್ಟಿ ಅವರು, ‘ಪ್ರೀತಿಯ ಕುರಿತ ಮಹಿಳೆಯ ದೃಷ್ಟಿಕೋನದ ಹಾಡು ಇದು. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎಂಬುದು ಬೇಕಾಗಿತ್ತು. ಆದ್ದರಿಂದ ಪೃಥ್ವಿ ಅವರಿಂದ ಇದನ್ನು ಬರೆಸಿದ್ದೇನೆ’ ಎಂದಿದ್ದಾರೆ.

‘ಮೆಲ್ಲಗೆ..’ ಗೀತೆಯಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶ ಇದೆ. ಸಂಗೀತ ನಿರ್ದೇಶಕ ಮಿಧುನ್‍ ಮುಕುಂದನ್‍ ಅವರು ತಮ್ಮ ಸಂಗೀತದಿಂದ ಮೋಡಿ ಮಾಡುತ್ತಾರೆ ಎಂಬುದು ರಾಜ್​ ಬಿ. ಶೆಟ್ಟಿ ಅವರ ಅಭಿಪ್ರಾಯ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ಈ ಸಿನಿಮಾದ ನಟಿ ಸಿರಿ ರವಿಕುಮಾರ್ ಈ ಸಾಂಗ್​ಗೆ ಫಿದಾ ಆಗಿದ್ದಾರೆ. ತಾವು ಈ ಹಾಡನ್ನು ಮತ್ತೆ ಮತ್ತೆ ಕೇಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ ಮತ್ತು ಸಿರಿ ರವಿಕುಮಾರ್​ ಜೊತೆಗೆ ಬಾಲಾಜಿ ಮನೋಹರ್‍, ರೇಖಾ ಕೂಡ್ಲಿಗಿ, ಸೂರ್ಯ ವಸಿಷ್ಠ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: ಹೃದಯಾಘಾತ ವಿಚಾರಕ್ಕೆ ಸ್ಪಷ್ಟನೆ ನೀಡಿದ ನಟಿ ರಮ್ಯಾ

‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ದಿವ್ಯ ಸ್ಪಂದನಾ ಅವರ ಒಡೆತನದ ‘ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍’ ಸಂಸ್ಥೆಯ ಮೂಲಕ ನಿರ್ಮಾಣ ಆದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಸಿನಿಮಾದ ನಿರ್ಮಾಣದಲ್ಲಿ ‘ಲೈಟರ್‍ ಬುದ್ಧ ಫಿಲ್ಮ್ಸ್​’ ಸಂಸ್ಥೆ ಕೂಡ ಕೈ ಜೋಡಿಸಿದೆ. ‘ಕೆ.ಆರ್.ಜಿ. ಸ್ಟುಡಿಯೋಸ್‍’ ಮೂಲಕ ರಾಜ್ಯಾದ್ಯಂತ ನವೆಂಬರ್​ 24ರಂದು ರಿಲೀಸ್​ ಆಗಲಿದೆ. ಪ್ರವೀಣ್‍ ಶ್ರೀಯಾನ್‍ ಅವರು ಈ ಸಿನಿಮಾದ ಛಾಯಾಗ್ರಹಣ ಮಾಡುವುದರ ಜೊತೆಗೆ, ರಾಜ್‍ ಜೊತೆಗೂಡಿ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.