ಪ್ರೇಮಾ, ಸಾಯಿ ಕುಮಾರ್​ ನಟನೆಯ ‘ವರಾಹಚಕ್ರಂ’ ಸಿನಿಮಾದ ಟೈಟಲ್​ ಅನಾವರಣ

‘ವರಾಹಚಕ್ರಂ’ ಸಿನಿಮಾಗೆ ಮಂಜು ಮಸ್ಕಲ್ ಮಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಪ್ರೇಮಾ, ಸಾಯಿ ಕುಮಾರ್​, ವಿ. ನಾಗೇಂದ್ರ ಪ್ರಸಾದ್​, ಅರ್ಜುನ್ ದೇವ, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಅವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್​ ಅನಾವರಣ ಮಾಡಲಾಯಿತು. ಈ ವೇಳೆ ಚಿತ್ರತಂಡದವರು ಮಾತನಾಡಿದರು.

ಪ್ರೇಮಾ, ಸಾಯಿ ಕುಮಾರ್​ ನಟನೆಯ ‘ವರಾಹಚಕ್ರಂ’ ಸಿನಿಮಾದ ಟೈಟಲ್​ ಅನಾವರಣ
‘ವರಾಹಚಕ್ರಂ’ ಟೈಟಲ್​ ಲಾಂಚ್​ ಕಾರ್ಯಕ್ರಮ

Updated on: Sep 14, 2023 | 3:41 PM

ನಟಿ ಪ್ರೇಮಾ (Prema) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮಗೆ ಇಷ್ಟವಾಗುವ ಕಥೆಗಳನ್ನು ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ. ಈಗ ಅವರು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್​ ನೀಡಿದ್ದಾರೆ. ಈ ಸಿನಿಮಾದ ಹೆಸರು ‘ವರಾಹಚಕ್ರಂ’. ಒಂದಷ್ಟು ವರ್ಷಗಳ ಹಿಂದೆ ‘ಮನಸುಗಳ ಮಾತು ಮಧುರ’, ‘ಯುಗಪುರುಷ’, ‘ಗೌರಿಪುತ್ರ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮಂಜು ಮಸ್ಕಲ್ ಮಟ್ಟಿ ಅವರು ಈಗ ಆಧುನಿಕ ಪಂಚ ಪಾಂಡವರ ಕಹಾನಿಯನ್ನು ಇಟ್ಟುಕೊಂಡು ಡಿಫರೆಂಟ್​ ಆದ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ‘ವರಾಹಚಕ್ರಂ’ (Varahachakram) ಸಿನಿಮಾದ ಶೀರ್ಷಿಕೆ ರಿವೀಲ್​ ಮಾಡಲಾಯಿತು. ಪ್ರೇಮಾ ಅವರ ಜೊತೆ ಈ ಸಿನಿಮಾದಲ್ಲಿ ಸಾಯಿ ಕುಮಾರ್​ (Sai Kumar) ಕೂಡ ನಟಿಸುತ್ತಿರುವುದು ವಿಶೇಷ. ಅಲ್ಲದೇ, ಅರ್ಜುನ್ ದೇವ, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

‘ವರಾಹಚಕ್ರಂ’ ಸಿನಿಮಾವನ್ನು ‘ಮನ್ವಂತರಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ಸ್ನೇಹಿತರು ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಶೀರ್ಷಿಕೆ ಅನಾವರಣದ ವೇಳೆ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರು ಮಾತನಾಡಿದರು. ‘ನಾನು ನಟ ಆಗಬೇಕು ಎಂಬ ಉದ್ದೇಶದಿಂದ ಚಿತ್ರರಂಗಕ್ಕೆ ಬಂದೆ. ನಿರ್ಮಾಪಕನಾಗಿ ಹಣ ಕಳೆದುಕೊಂಡೆ. ಸಿನಿಮಾಗಳ ವಿತರಣೆಯನ್ನೂ ಮಾಡಿದ್ದೆ. ಈಗ ಬೆಂಗಳೂರಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ನಿಯಮಗಳು, ಸಂಸ್ಕೃತಿಯ ಕಗ್ಗೊಲೆ ಮತ್ತು ದೌರ್ಜನ್ಯಕ್ಕೆ ಅಂತ್ಯ ಹಾಡಿ, ಜಾಗೃತಿ ಮೂಡಿಸುವಂತಹ ಕಥೆಯನ್ನು ಇಟ್ಟುಕೊಂಡು ‘ವರಾಹಚಕ್ರಂ’ ಸಿನಿಮಾ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಘವೇಂದ್ರ ರಾಜ್​ಕುಮಾರ್​, ಶ್ರುತಿ ನಟನೆಯ ‘13’ ಸಿನಿಮಾ ಈ ವಾರ ಬಿಡುಗಡೆ; ಏನಿದರ ವಿಶೇಷ?

ಪ್ರೇಮಾ ನಟಿಸಿದ ‘ನಮ್ಮೂರ ಮಂದಾರ ಹೂವೆ’ ಚಿತ್ರವನ್ನು ನೋಡಿ ನಿರ್ದೇಶಕನಾಗಬೇಕು ಎಂದುಕೊಂಡವರು ಮಂಜು ಮಸ್ಕಲ್​ ಮಟ್ಟಿ. ಈಗ ಪ್ರೇಮಾ ಜೊತೆಯೇ ಸಿನಿಮಾ ಮಾಡುತ್ತಿರುವುದು ಅವರಿಗೆ ಖುಷಿ ನೀಡಿದೆ. ಈ ಸಿನಿಮಾದಲ್ಲಿ ಪ್ರೇಮಾ ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇರಲಿದೆ. ಅಲ್ಲದೇ, ಅವರು ಆ್ಯಕ್ಷನ್​ ಕೂಡ ಮಾಡಲಿದ್ದಾರೆ. ಈ ಮೊದಲು ‘ಯುಗಪುರುಷ’ ಚಿತ್ರದಲ್ಲಿ ಅಭಿನಯಿಸಿದ್ದ ಅರ್ಜುನ್ ದೇವ ಅವರು ಈಗ ‘ವರಾಹಚಕ್ರಂ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಅರ್ಜುನ್ ದೇವ, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಅವರು ಪಂಚ ಪಾಂಡವರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ನನಗೂ ಹೆಂಡ್ತಿ ಬೇಕು’ ಎನ್ನುತ್ತಾರೆ ತಬಲಾ ನಾಣಿ; ಆದರೆ ಮಾತೇ ಆಡೋದಿಲ್ಲ ಚೈತ್ರಾ ಕೋಟೂರ್​

ಶರತ್‌ಕುಮಾರ್ ಜಿ. ಅವರು ಛಾಯಾಗ್ರಹಣ ಹಾಗೂ ಭಾರ್ಗವ ಅವರು ಸಂಕಲನ ಮಾಡಲಿದ್ದಾರೆ. ಅರವಿಂದ್ ಗಗನ್, ಲಾವಣ್ಯ ಗ್ರೂಪ್, ನಾಗಭೂಷಣ್ ಎಂ. ರಾವ್, ಮಂಜುನಾಥ್ ಸಿ. ಗೌಡ, ಕೆ.ಎಸ್. ಜೈ ಸುರೇಶ್ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಬೆಂಗಳೂರು, ಪೊಲ್ಲಾಚ್ಚಿ, ನೆಲ್ಲೂರು, ಭಟ್ಕಳ, ಹಿರಿಯೂರು ಮುಂತಾದ ಕಡೆಗಳಲ್ಲಿ ‘ವರಾಹಚಕ್ರಂ’ ಸಿನಿಮಾದ ಶೂಟಿಂಗ್​ ನಡೆಯಲಿದೆ. ಈ ಸಿನಿಮಾದಲ್ಲಿ ಗೀತ ಸಾಹಿತಿ ನಾಗೇಂದ್ರ ಪ್ರಸಾದ್​ ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ ಎಂಬುದು ವಿಶೇಷ. ಸಾಹಿತ್ಯ, ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಕೂಡ ಅವರದ್ದೇ. ಈ ಸಿನಿಮಾಗಾಗಿ ಅವರು ಎರಡು ತಿಂಗಳು ಮೀಸಲಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us