ಕಣ್ಸನ್ನೆ ಹುಡುಗಿ ನಟನೆಯ ಕನ್ನಡ ಸಿನಿಮಾ ‘ವಿಷ್ಣು ಪ್ರಿಯಾ’ ಫೆಬ್ರವರಿ 21ಕ್ಕೆ ರಿಲೀಸ್

ಫೆಬ್ರವರಿ 21ರಂದು ‘ವಿಷ್ಣು ಪ್ರಿಯಾ’ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಶ್ರೇಯಸ್​ ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ಅವರು ಜೋಡಿಯಾಗಿ ನಟಿಸಿದ್ದಾರೆ. 90ರ ದಶಕದ ಒಂದು ಲವ್ ಸ್ಟೋರಿ ಈ ಚಿತ್ರದಲ್ಲಿ ಇರಲಿದೆ. ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ ಮೊದಲ ಕನ್ನಡ ಸಿನಿಮಾ ಇದು. ಆ ಕಾರಣದಿಂದಲೂ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ.

ಕಣ್ಸನ್ನೆ ಹುಡುಗಿ ನಟನೆಯ ಕನ್ನಡ ಸಿನಿಮಾ ‘ವಿಷ್ಣು ಪ್ರಿಯಾ’ ಫೆಬ್ರವರಿ 21ಕ್ಕೆ ರಿಲೀಸ್
Priya Shreyas Manju

Updated on: Jan 03, 2025 | 9:55 PM

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ಮಂಜು ಅವರಿಗೆ ‘ಸಾಹಸ ಸಿಂಹ’ ವಿಷ್ಣುವರ್ಧನ್ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ. ಆ ಗೌರವವನ್ನು ಅವರು ತಮ್ಮ ಸಿನಿಮಾಗಳ ಮೂಲಕ ತೋರಿಸಿದ್ದಾರೆ. ಅದರ ಮುಂದುವರಿದ ಭಾಗ ಎಂಬಂತೆ ತಮ್ಮ ಮಗ ಶ್ರೇಯಸ್ ನಟನೆಯ ಸಿನಿಮಾಗೆ ‘ವಿಷ್ಣು ಪ್ರಿಯಾ’ ಎಂದು ಶೀರ್ಷಿಕೆ ಇಟ್ಟಿದ್ದು ಸುದ್ದಿ ಆಗಿತ್ತು. ಬಹಳ ಹಿಂದೆಯೇ ನಿರ್ಮಾಣ ಆಗಿದ್ದ ಈ ಸಿನಿಮಾದ ಬಿಡುಗಡೆ ಕಾರಣಾಂತರಗಳಿಂದ ತಡವಾಗಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 21ಕ್ಕೆ ‘ವಿಷ್ಣು ಪ್ರಿಯಾ’ ಬಿಡುಗಡೆ ಆಗಲಿದೆ.

ಅಷ್ಟಕ್ಕೂ ವಿಷ್ಣು ಪ್ರಿಯಾ ಎಂದು ಹೆಸರು ಇಟ್ಟಿದ್ದು ಏಕೆ? ಈ ಕಥೆಯನ್ನು ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಆ ಎರಡು ಹೆಸರುಗಳು ಸೇರಿ ‘ವಿಷ್ಣು ಪ್ರಿಯಾ’ ಆಗಿದೆ. 90 ದಶಕದ ಒಂದು ಪ್ರೇಮಕಥೆಯನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತಿದೆ. ಮಲಯಾಳಂ ಚಿತ್ರರಂಗದ ವಿ.ಕೆ. ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿ.ಕೆ. ಪ್ರಕಾಶ್ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.

‘ವಿಷ್ಣು ಪ್ರಿಯಾ’ ಸಿನಿಮಾ ಫೆ.21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಕಣ್ಸನ್ನೆ ಚೆಲುವೆ ಎಂದೇ ಫೇಮಸ್​ ಆದ ಪ್ರಿಯಾ ವಾರಿಯರ್ ಅವರು ‘ವಿಷ್ಣು ಪ್ರಿಯಾ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟಾಲಿವುಡ್​ನ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಧಾರವಾಡ ಮೂಲದ ಸಿಂಧುಶ್ರೀ ಅವರು ಬರೆದ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾದ ಸ್ಕ್ರಿಪ್ಟ್​ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ವಿಷ್ಣುವರ್ಧನ್ ನೆನಪಿಗೆ ‘ಸಿಂಹದ ಹಾದಿʼ ಕಿರುಚಿತ್ರ; ಇದು ಅಭಿಮಾನಿಗಳ ಕಾಣಿಕೆ

ವಿ.ಕೆ. ಪ್ರಕಾಶ್, ಗೋಪಿಸುಂದರ್, ನಾಗೇಂದ್ರ ಪ್ರಸಾದ್ ಅವರಂತಹ ಅನುಭವಿ ತಂತ್ರಜ್ಞರು ಜೊತೆಯಾಗಿ ಈ ಸಿನಿಮಾದ ಹಿಂದೆ ಶ್ರಮಿಸಿದ್ದಾರೆ. ರವಿ ಶ್ರೀವತ್ಸ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್ ಅರಸ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಬದುಕಿನಲ್ಲಿ ‌ಪ್ರೀತಿ ಎಷ್ಟು ಮುಖ್ಯ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೌಟುಂಬಿಕ ಮೌಲ್ಯಕ್ಕೆ ಹೆಚ್ಚು ಮಹತ್ವವಿದೆ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುವ ಹುಡುಗನ ಬದುಕಿನಲ್ಲಿ ಏನೆಲ್ಲ ಆಯಿತು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us