‘ಅರಸು’ ಚಿತ್ರದಲ್ಲಿ ನಟಿಸಲು ಎರಡು ಷರತ್ತು ಹಾಕಿದ್ದ ದರ್ಶನ್; ಇದರ ಹಿಂದಿತ್ತು ಒಳ್ಳೆಯ ಉದ್ದೇಶ

ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ‘ಅರಸು’ ಚಿತ್ರದಲ್ಲಿ ದರ್ಶನ್ ಅವರು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಅವರು ಯಾವುದೇ ಸಂಭಾವನೆ ಪಡೆಯದೆ ಈ ಪಾತ್ರ ಮಾಡಿದ್ದು ವಿಶೇಷ. ರಾಜಕುಮಾರ್ ಕುಟುಂಬದೊಂದಿಗಿನ ಅವರ ಸ್ನೇಹಬಾಂಧವ್ಯ ಇದಕ್ಕೆ ಕಾರಣ. ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಘವೇಂದ್ರ ಅವರ ವಿನಂತಿಯ ಮೇರೆಗೆ ದರ್ಶನ್ ಈ ಪಾತ್ರವನ್ನು ಮಾಡಿದ್ದಾರೆ.

‘ಅರಸು’ ಚಿತ್ರದಲ್ಲಿ ನಟಿಸಲು ಎರಡು ಷರತ್ತು ಹಾಕಿದ್ದ ದರ್ಶನ್; ಇದರ ಹಿಂದಿತ್ತು ಒಳ್ಳೆಯ ಉದ್ದೇಶ
‘ಅರಸು’ ಚಿತ್ರದಲ್ಲಿ ನಟಿಸಲು ಎರಡು ಷರತ್ತು ಹಾಕಿದ್ದ ದರ್ಶನ್
Updated By: ರಾಜೇಶ್ ದುಗ್ಗುಮನೆ

Updated on: Oct 29, 2024 | 7:31 AM

ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಅಷ್ಟು ಕರಾರುವಕ್ಕು ಲೆಕ್ಕ ಹಾಕಿ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಅವರ ನಿರ್ಮಾಣದ ಯಶಸ್ವಿ ಚಿತ್ರದಲ್ಲಿ ‘ಅರಸು’ ಚಿತ್ರವೂ ಇದೆ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಪುನೀತ್ ರಾಜ್​ಕುಮಾರ್ ಹೀರೋ. ರಮ್ಯಾ ಹಾಗೂ ಮೀರಾ ಜಾಸ್ಮಿನ್ ಚಿತ್ರದ ನಾಯಕಿಯರು. ಈ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡಿದ್ದರು. ಇದಕ್ಕೆ ಎರಡು ಷರತ್ತನ್ನು ಹಾಕಿದ್ದರು.

ಶ್ರುತಿ (ರಮ್ಯಾ) ಹಾಗೂ ಮೀರಾಗೆ (ಐಶ್ವರ್ಯಾ) ಶಿವರಾಜ್ ಅರಸ್ (ಪುನೀತ್ ರಾಜ್​ಕುಮಾರ್) ಲವ್ ಆಗುತ್ತದೆ. ಶ್ರುತಿ ಹಾಗೂ ಐಶ್ವರ್ಯಾಗೆ ಬೇಸರ ಆಗಬಾರದು ಎನ್ನುವ ಕಾರಣಕ್ಕೆ ಇಬ್ಬರನ್ನೂ ಅವರು ಮದುವೆ ಆಗುವುದಿಲ್ಲ. ಆಗ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಬರುತ್ತಾರೆ ಮತ್ತು ಶ್ರುತಿನ ಮದುವೆ ಆಗುತ್ತಾರೆ. ಈ ಅತಿಥಿ ಪಾತ್ರವನ್ನು ಮಾಡಲು ರಾಘವೇಂದ್ರ ರಾಜ್​ಕುಮಾರ್  ಹಾಗೂ ಪುನೀತ್ ಅವರು ದರ್ಶನ್​ ಅವರ ಬಳಿ ಕೇಳಿದ್ದರು. ಆಗ ದರ್ಶನ್ ಷರತ್ತು ಹಾಕಿದ್ದರು.

‘ಅರಸು ಚಿತ್ರಕ್ಕೆ ಒಂದು ಅತಿಥಿ ಪಾತ್ರ ಬೇಕಿತ್ತು. ದರ್ಶನ್ ಮಾಡಿದ್ರೆ ಚೆನ್ನಾಗಿರುತ್ತದೆ ಎಂದರು. ಆಗ ನಾನು ಕರೆ ಮಾಡಿದೆ. ಫೋನ್ ಮಾಡಿ ಬಾ ಅಂದ್ರೆ ಬಂದು ಮಾಡಿ ಹೋಗುತ್ತೇನೆ ಎಂದು ದರ್ಶನ್ ಹೇಳಿದ್ದರು’ ಎಂದಾಗಿ ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದರು. ಈ ವೇಳೆ ಕಥೆ ಹೇಳಬಾರದು, ಸಂಭಾವನೆ ನೀಡಬಾರದು ಎಂದು ದರ್ಶನ್ ಷರತ್ತು ಹಾಕಿದ್ದರಂತೆ.

‘ಏನು ಕೊಡಬಾರದು ಎಂದು ದರ್ಶನ್ ಹೇಳಿದ್ದರು. ಆದರೂ ನಾನು ಹಾಗೂ ಪುನೀತ್ ಗಿಫ್ಟ್ ಕೊಟ್ಟೆವು. ಒಂದು ವಾಚ್ ಖರೀದಿ ಮಾಡಿ ಅವರಿಗೆ ನೀಡಿದೆವು. ಅವರು ಬೇಡ ಎಂದರು. ನಾವು ಸಂಭಾವನೆ ಎಂದು ಕೊಡುತ್ತಿಲ್ಲ. ಪ್ರೀತಿಯಿಂದ ಕೊಡುತ್ತಿರೋದು ಎಂದಮೇಲೆ ತೆಗೆದುಕೊಂಡರು’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದರು.

ಇದನ್ನೂ ಓದಿ: ದರ್ಶನ್ ಕಾಲಿಗೆ ಪಾರ್ಶ್ವವಾಯು ಆಗುವ ಸಾಧ್ಯತೆ: ವೈದ್ಯಕೀಯ ವರದಿಯಲ್ಲಿ ಶಾಕಿಂಗ್ ವಿಚಾರ

ದರ್ಶನ್ ತಂದೆ ತುಗುದೀಪ್ ಶ್ರೀನಿವಾಸ್ ಅವರಿಗೆ ರಾಜ್​ಕುಮಾರ್ ಕುಟುಂಬದ ಮೇಲೆ ವಿಶೇಷ ಪ್ರೀತಿ ಇತ್ತು. ರಾಜ್​ಕುಮಾರ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಅವರು ಸಾಕಷ್ಟು ಸಿನಿಮಾ ಮಾಡಿದ್ದರು. ದರ್ಶನ್​ಗೂ ರಾಜ್​ಕುಮಾರ್ ಕುಟುಂಬದ ಮೇಳೆ ವಿಶೇಷ ಪ್ರೀತಿ ಇದೆ. ಆದರೆ, ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಇಂದು (ಅಕ್ಟೋಬರ್ 29) ಪುನೀತ್ ರಾಜ್​ಕುಮಾರ್ ಅವರ  ಮೂರನೇ ವರ್ಷದ ಪುಣ್ಯ ತಿಥಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Tue, 29 October 24