ಕೆಲವೇ ತಿಂಗಳ ಅವಧಿಯಲ್ಲಿ ಎರಡು ಸಿನಿಮಾ ಮುಗಿಸಿದ ರಾಜ್ ಬಿ ಶೆಟ್ಟಿ

|

Updated on: Mar 28, 2023 | 8:59 PM

ಕೆಲವೇ ತಿಂಗಳ ಅವಧಿಯಲ್ಲಿ ಎರಡು ಸಿನಿಮಾ ಮುಗಿಸಿ ಮೂರನೇ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ.

ಕೆಲವೇ ತಿಂಗಳ ಅವಧಿಯಲ್ಲಿ ಎರಡು ಸಿನಿಮಾ ಮುಗಿಸಿದ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ
Follow us on

ಗರುಡ ಗಮನ ವೃಷಭ ವಾಹನ (Garuda Gamana Vrishaba Vahana) ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ನಿರ್ದೇಶಕ ನಟ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಎರಡು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಬಹಿರ್ಮುಖದಲ್ಲಿ ಹಾಸ್ಯ ಪ್ರವೃತ್ತಿಯ ರಾಜ್ ಬಿ ಶೆಟ್ಟಿ ಕೆಲಸದ ವಿಷಯಕ್ಕೆ ಬಂದರೆ ರಾಕ್ಷಸ. ಗರುಡ ಗಮನ ವೃಷಭ ವಾಹನ ಸಿನಿಮಾದ ಬಳಿಕ ದೊಡ್ಡ ವಿರಾಮ ತೆಗೆದುಕೊಂಡಿದ್ದ ರಾಜ್ ಬಿ ಶೆಟ್ಟಿ, ಇದೀಗ ಕೆಲವೇ ತಿಂಗಳ ಅವಧಿಯಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶಿಸಿ ಬಿಡುಗಡೆಗೆ ವೇದಿಕೆ ಸಜ್ಜುಗೊಳಿಸುವುದರಲ್ಲಿ ಮಗ್ನರಾಗಿದ್ದಾರೆ.

ಸ್ವಾಂಡಲ್​ವುಡ್ ಕ್ವೀನ್ ರಮ್ಯಾ (Ramya) ನಿರ್ಮಾಣದ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದು ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅದರ ಬೆನ್ನಲ್ಲೆ ತಮ್ಮದೇ ಚಿತ್ರಕತೆ ಹೊಂದಿರುವ ಬಿಗ್​ಬಜೆಟ್ ಸಿನಿಮಾ ಒಂದರ ಚಿತ್ರೀಕರಣವನ್ನು ಲಘು-ಬಗೆಯಲ್ಲಿ ಮುಗಿಸಿಬಿಟ್ಟಿದ್ದಾರೆ ರಾಜ್ ಬಿ ಶೆಟ್ಟಿ.

ಸ್ವಾಮಿ ಮುತ್ತಿನ ಮಳೆ ಹನಿಯೇ ಸಿನಿಮಾ ಮುಗಿದ ಬೆನ್ನಲ್ಲೆ ಟೋಬಿ ಹೆಸರಿನ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಕೈಗೆತ್ತಿಕೊಂಡು ಈ ಸಿನಿಮಾವನ್ನು ಸಹ ಮುಗಿಸಿದ್ದಾರಂತೆ. ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ರವಿ ರೈ ಹಾಗೂ ರಾಜ್ ಬಿ ಶೆಟ್ಟಿಯವರದ್ದೇ ನಿರ್ಮಾಣ ಸಂಸ್ಥೆಯಾದ ಲಾಫಿಂಗ್ ಬುದ್ಧ ವತಿಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದು ರಾಜ್ ಬಿ ಶೆಟ್ಟಿಯವರ ಮೊತ್ತ ಮೊದಲ ಬಿಗ್ ಬಜೆಟ್ ಸಿನಿಮಾ ಆಗಿರಲಿದೆ.

ಸುಮಾರು 15 ಕೋಟಿ ಬಜೆಟ್​ನಲ್ಲಿ ಟೋಬಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಗರುಡ ಗಮನ ವೃಷಭ ವಾಹನ ಮಾದರಿಯಲ್ಲಿಯೇ ಇದೊಂದು ಗ್ಯಾಂಗ್​ಸ್ಟರ್ ಹಾಗೂ ಸೇಡಿನ ಕತೆಯನ್ನು ಹೊಂದಿದ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕೆ ಕತೆ ಹಾಗೂ ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿಯೇ ಬರೆದಿದ್ದು ಅವರಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದವರೇ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಟೋಬಿ ಸಿನಿಮಾದಲ್ಲಿ ರಾಕ್ಷಸನ ರೀತಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಟೋಬಿಯಲ್ಲಿ ಸಂಯುಕ್ತ ಹೊರನಾಡು ಹಾಗೂ ಚೈತ್ರಾ ಆಚಾರ್​ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿದ್ದ ಬಹುತೇಕ ತಾಂತ್ರಿಕ ವರ್ಗ ಈ ಸಿನಿಮಾದಲ್ಲಿಯೂ ಇದೆ.

Also Read: ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪವನ್ ಅಭಿಮಾನಿಗಳ ಪುಂಡಾಟ, ಬುದ್ಧಿಹೇಳಿದ ನಾಗಬಾಬು

ಗರುಡ ಗಮನ ವೃಷಭ ವಾಹನ ಸಿನಿಮಾದ ಬಳಿಕ 777 ಚಾರ್ಲಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ, ತುರ್ತು ನಿರ್ಗಮನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇವೆರಡು ಹೊರತುಪಡಿಸಿದರೆ ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇ ಹಾಗೂ ಟೋಬಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆ ಫಿಕ್ಷನ್ ಹಾಗೂ ರಾಮನ ಅವತಾರ ಸಿನಿಮಾದಲ್ಲಿಯೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಮಲಯಾಳಂ ಸಿನಿಮಾ ಒಂದರಲ್ಲಿಯೂ ನಟಿಸುತ್ತಿರುವ ರಾಜ್ ಶೆಟ್ಟಿ, ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಶಿವಣ್ಣ ಹಾಗೂ ಉಪೇಂದ್ರ ಒಟ್ಟಿಗೆ ಕಾಣಿಸಿಕೊಂಡಿರುವ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ