‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ‘ರಾಜನಿವಾಸ’ ಸಿನಿಮಾ ಬಿಡುಗಡೆ ಆಗಲಿದೆ. ಈಗ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ದೃಶ್ಯಗಳಲ್ಲಿ ‘ಕಾಂತಾರ’ ಸಿನಿಮಾದ ಛಾಯೆ ಕಾಣಿಸಿದೆ. ತುಳುನಾಡು ಭಾಗದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಕಾಂತಾರ’ ರೀತಿ ಮೂಡಿಬರುತ್ತಿದೆ ‘ರಾಜನಿವಾಸ’ ಸಿನಿಮಾ; ಇಲ್ಲಿದೆ ಟ್ರೇಲರ್
Rajanivaasa Movie Poster

Updated on: Feb 17, 2026 | 4:06 PM

ಶೀರ್ಷಿಕೆಯಿಂದ ಗಮನ ಸೆಳೆದಿರುವ ‘ರಾಜನಿವಾಸ’ (Rajanivasa) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ ನೋಡಿದರೆ ‘ಕಾಂತಾರ’ ಸಿನಿಮಾದ ಝಲಕ್ ಕಾಣಿಸಿದೆ. ಚಿತ್ರತಂಡ ಹೇಳುವ ಪ್ರಕಾರ, ಇದು ಕಾಂತಾರಕ್ಕಿಂತಲೂ‌ ಮೊದಲೇ ತಯಾರಾದ ಕಥೆ. ಆದರೆ ಸಿನಿಮಾ ಪೂರ್ಣಗೊಂಡು ರಿಲೀಸ್ ಹಂತಕ್ಕೆ ಬರಲು ಇಷ್ಟು ಸಮಯ ಹಿಡಿಯಿತು. ‘ಕಾಂತಾರ’ (Kantara) ಸಿನಿಮಾ ಮೊದಲೇ ತೆರೆಕಂಡಿದ್ದರಿಂದ ಹೋಲಿಕೆಯ ಆರೋಪ ಎದುರಾಗುವುದು ಸಹಜ. ಹಾಗಾಗಿ ಸಾಕಷ್ಟು ಬದಲಾವಣೆಯನ್ನು ಕೂಡ ಮಾಡಲಾಗಿದೆ ಎಂದು ‘ರಾಜನಿವಾಸ’ ಚಿತ್ರತಂಡ ತಿಳಿಸಿದೆ.

ಇದು ತುಳುನಾಡು ಭಾಗದ ಕಥೆಯಾದ ಕಾರಣ ಸಹಜವಾಗಿ ಒಂದಷ್ಟು ಹೋಲಿಕೆಗಳು ಕಾಣುತ್ತವೆ. ಆದರೆ ಸಿನಿಮಾದಲ್ಲಿ ಬೇರೆಯೇ ಕಥೆ ಇದೆ ಎಂದು ನಿರ್ದೇಶಕ ಮಿಥುನ್ ಸುವರ್ಣ ಅವರು ಹೇಳಿದ್ದಾರೆ. ರಾಘವ್ ನಾಯಕ್ ಅವರು ‘ರಾಜ‌ನಿವಾಸ’ ಸಿನಿಮಾದಲ್ಲಿ ನಾಯಕ ಪಾತ್ರ ಮಾಡಿದ್ದಾರೆ. ಟ್ರೇಲರ್ ಜೊತೆ ಹಾಡು ಹಾಗೂ ಆ್ಯಕ್ಷನ್ ಸನ್ನಿವೇಶದ ಗ್ಲಿಂಪ್ಸ್ ನೋಡಿದರೆ ಇದು ಮಾಸ್ ಸಿನಿಮಾ ಎಂಬುದು ತಿಳಿಯುತ್ತದೆ.

‘ರಾಜ‌ನಿವಾಸ’ ಸಿನಿಮಾದಲ್ಲಿ ಕೃತಿಕಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಖ್ಯಾತ ನಟ ಶ್ರೀನಗರ ಕಿಟ್ಟಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಟ್ರೇಲರ್ ಹಾಗೂ 3 ಹಾಡುಗಳು ಈಗಾಗಲೇ ಗಮನ ಸೆಳೆದಿದೆ. ನಾಲ್ಕು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.

ರಾಜನಿವಾಸ ಸಿನಿಮಾದ ಟ್ರೇಲರ್:

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ರಾಜನಿವಾಸ’ ನಿರೀಕ್ಷೆ ಸೃಷ್ಟಿಸಿದೆ. ಟ್ರೇಲರ್ ನೋಡಿದ ಹಲವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗೆ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿವೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ. ಚಿತ್ರದ ವಿತರಣೆಗೆ ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಬೇಡಿಕೆ ಬಂದಿದೆ ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ದೈವದ ಗಗ್ಗರ ಕಟ್ಟಲು ಕಾಲುಗಳೇ ಇಲ್ಲ: ದೈವ ನರ್ತಕನಿಗೆ ಆಸರೆಯಾದ ಕೃತಕ ಕಾಲು

‘ಡಿಎಎಂ 36 ಸ್ಟುಡೀಯೋಸ್’ ಮೂಲಕ ‘ರಾಜ‌ನಿವಾಸ’ ಸಿನಿಮಾವನ್ನು ಮಾಡಲಾಗಿದೆ. ದಾ.ಪಿ. ಆಂಜನಪ್ಪ ಅವರು ಈ ಸಿನಿಮಾದ ನಿರ್ಮಾಪಕರು. ಲೋಕೇಶ್ ಗೌಡ ಅವರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದಾರೆ. ರಮೇಶ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ. ಬಲ ರಾಜ್ವಾಡಿ , ಯಮುನಾ ಶ್ರೀನಿಧಿ, ಸಹನಾ, ಪ್ರಶಾಂತ್‌, ನೀನಾಸಂ ಅಶ್ವಥ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us