
ರಾಜ್ಕುಮಾರ್ ಎಂದರೆ ಇಡೀ ಕರ್ನಾಟಕದ ಮಂದಿಗೆ ಗೊತ್ತು. ಅವರಿಗೆ ಸಾಕಷ್ಟು ಜನಪ್ರಿಯತೆ ಇತ್ತು. ಈಗಲೂ ಅವರನ್ನು ಆರಾಧಿಸುವವರ ಸಂಖ್ಯೆ ಸಾಕಷ್ಟಿದೆ. ರಾಜ್ಕುಮಾರ್ ಹಾಕಿಕೊಟ್ಟ ಆದರ್ಶವೂ ಎಲ್ಲರಿಗೂ ಮಾದರಿ ಆಗುವಂತೆ ಇದೆ. ರಾಜ್ಕುಮಾರ್ (Rajkumar) ನಿರ್ಮಾಪಕರು ಹಾಗೂ ನಿರ್ದೇಶಕರನ್ನು ನಡೆಸುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಸ್ಮರಣೀಯ. ರಾಜ್ಕುಮಾರ್ ಅವರ ಹಳೆಯ ಸಂದರ್ಶನ ಒಂದು ಈಗ ವೈರಲ್ ಆಗಿದೆ. ಇದರಲ್ಲಿ ಅವರು ಹೇಳಿದ ಮಾತು ಗಮನ ಸೆಳೆದಿದೆ.
ರಾಜ್ಕುಮಾರ್ ಅವರು ವಯಸ್ಸಿನಲ್ಲಿ ಸಣ್ಣವರು ಹಾಗೂ ದೊಡ್ಡವರು ಎಂದು ನೋಡುತ್ತಲೇ ಇರಲಿಲ್ಲ. ಅವರು ಎಲ್ಲರನ್ನೂ ಗೌರವಿಸುತ್ತಿದ್ದರು. ಇದು ಅವರಿಗೆ ಮೊದಲಿನಿಂದಲೂ ಬಂದ ಸಂಪ್ರದಾಯ. ನಾಟಕಗಳಲ್ಲಿ ನಟಿಸಿ ಈ ರೀತಿ ಆದೆ ನಾನು ಎಂದು ರಾಜ್ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅಭಿಮಾನಿಗಳು ಅದನ್ನು ಈಗ ವೈರಲ್ ಮಾಡುತ್ತಾ ಇದ್ದಾರೆ.
‘ನಾಗಾಭರಣ್, ಶಂಕರ್ನಾಗ್ ವಯಸ್ಸಿನಲ್ಲಿ ಸಣ್ಣವರು. ಆಗ ಏನೂ ಅನಿಸಲಿಲ್ಲವೇ’ ಎಂದು ರಾಜ್ಕುಮಾರ್ ಅವರಿಗೆ ಕೇಳಲಾಯಿತು. ಇದಕ್ಕೆ ರಾಜ್ಕುಮಾರ್ ಅವರು ನೀಡಿದ್ದ ಉತ್ತರ ಸಾಕಷ್ಟು ವಿಶೇಷವಾಗಿ ಇತ್ತು. ‘ಅವರು ಕಿರಿಯವರು ಹೇಗೆ ಆಗ್ತಾರೆ? ಹಿರಿಯರು ಆಗಿದ್ದರಿಂದಲೇ ಅಲ್ಲಿಗೆ ಬಂದಿದ್ದಾರೆ. ನಿರ್ದೇಶಕ ಸೂತ್ರಧಾರ. ನಾಟಕ ಕಂಪನಿಯಲ್ಲಿ ಇದ್ದು ಅಭ್ಯಾಸ ಆಗಿದೆ. ಯಜಮಾನ ಆದವನಿಗೆ ಅದೇ ಸ್ಥಾನ ಕೊಡುತ್ತೇವೆ. ಕಷ್ಟದ ಸ್ಥಿತಿಯಲ್ಲಿ ಇದ್ದವರು ಸಿನಿಮಾ ಮಾಡಿ ನಮಗೆ ಅನ್ನ ಹಾಕಿದಾರೆ. ಯಜಮಾನ ಎನ್ನೋದನ್ನು ತೆಗೆದು ಹಾಕೋಕೆ ಆಗುತ್ತಿಲ್ಲ. ಚಿಕ್ಕದಿಂದಾಗಿನಿಂದ ಅದು ಬಂದಿದೆ’ ಎಂದು ಅಣ್ಣಾವ್ರು ಹೇಳಿದ್ದರು.
ರಾಜ್ಕುಮಾರ್ ಅವರು ತಮ್ಮ ನಿರ್ಮಾಪಕರನ್ನು ವಿಶೇಷವಾಗಿ ಗೌರವಿಸುತ್ತಿದ್ದರು. ಅವರು ಅನ್ನ ಕೊಟ್ಟ ಧಣಿಗಳು ಎನ್ನುವ ಅಭಿಪ್ರಾಯ ರಾಜ್ಕುಮಾರ್ ಅವರದ್ದಾಗಿತ್ತು. ಅಲ್ಲದೆ, ತಮ್ಮಿಂದ ಯಾರಿಗೋ ಸಹಾಯ ಆಗುತ್ತಿದೆ ಎಂದರೆ ರಾಜ್ಕುಮಾರ್ ಅದನ್ನು ತಡೆಯುತ್ತಾ ಇರಲಿಲ್ಲ.
ಇದನ್ನೂ ಓದಿ: ‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್ನಲ್ಲಿ ರಜನಿ ಮಾತು; ಇಲ್ಲಿದೆ ಹಳೆಯ ವಿಡಿಯೋ
ಒಮ್ಮೆ ರಾಜ್ಕುಮಾರ್ ಸಿನಿಮಾ ಬಗ್ಗೆ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆಯಲಾಗಿತ್ತು. ಈ ಬಗ್ಗೆ ರಾಜ್ಕುಮಾರ್ ಬಳಿ ಪಾರ್ವತಮ್ಮ ಅವರು ಕೇಳಿದ್ದರು. ಆ ಪತ್ರಕರ್ತನ ಕರೆಸಿ ಮಾತನಾಡೋಣವೇ ಎಂದು ಕೇಳಿದ್ದರು ಅವರು. ಆದರೆ, ಇದಕ್ಕೆ ರಾಜ್ಕುಮಾರ್ ಒಪ್ಪಿರಲಿಲ್ಲ. ನಮ್ಮಿಂದ ಅವರ ಬಾಳು ನಡೆಯುತ್ತಿದೆಯಲ್ಲ, ಬಿಡು ಎಂದು ಹೇಳಿದ್ದರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.