ಮುಗಿಯಿತು ರಕ್ಷಿತ್​ Vs​ ಲಹರಿ ಕಿರಿಕ್​; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ

Rakshit Shetty | Lahari Velu: ಅಚ್ಚರಿಯ ರೀತಿಯಲ್ಲಿ ರಕ್ಷಿತ್​ ಶೆಟ್ಟಿ, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಒಂದಾಗಿದ್ದಾರೆ. ತಮ್ಮ ನಡುವಿನ ಎಲ್ಲ ಕಿರಿಕ್​ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ.

ಮುಗಿಯಿತು ರಕ್ಷಿತ್​ Vs​ ಲಹರಿ ಕಿರಿಕ್​; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ
ರಕ್ಷಿತ್​ ಶೆಟ್ಟಿ, ಬಿ. ಅಜನೀಶ್​ ಲೋಕನಾಥ್​, ಲಹರಿ ವೇಲು,

Updated on: Jun 29, 2021 | 3:15 PM

ಕನ್ನಡ ಚಿತ್ರರಂಗದಲ್ಲಿ ನಟ ರಕ್ಷಿತ್​ ಶೆಟ್ಟಿ ಮತ್ತು ಲಹರಿ ಮ್ಯೂಸಿಕ್​ ಸಂಸ್ಥೆ ನಡುವೆ ಉಂಟಾಗಿದ್ದ ಕಿರಿಕ್​ ಬಗ್ಗೆ ಎಲ್ಲರಿಗೂ ತಿಳಿದಿದೆ. ತಮ್ಮ ಸಂಸ್ಥೆಗೆ ಸೇರಿದ ಸಂಗೀತವನ್ನು ಕಿರಿಕ್​ ಪಾರ್ಟಿ ಚಿತ್ರತಂಡ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿ ಲಹರಿ ಸಂಸ್ಥೆಯ ವೇಲು ಅವರು ಕೋರ್ಟ್​ ಮೆಟ್ಟಿಲೇರಿದ್ದರು. ಆ ಬಗ್ಗೆ ಹಲವು ಬಾರಿ ವಿಚಾರಣೆ ನಡೆದಿತ್ತು. ಲಹರಿ ವೇಲು ಮತ್ತು ರಕ್ಷಿತ್​ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿದ್ದರು. ಆದರೆ ಈಗ ಇಬ್ಬರ ನಡುವೆ ಸ್ನೇಹ ಚಿಗುರಿದೆ!

ಅಚ್ಚರಿಯ ರೀತಿಯಲ್ಲಿ ರಕ್ಷಿತ್​ ಶೆಟ್ಟಿ, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಒಂದಾಗಿದ್ದಾರೆ. ತಮ್ಮ ನಡುವಿನ ಎಲ್ಲ ಕಿರಿಕ್​ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಮೂವರು ಹೊಸ ಸೆಲ್ಫೀಗೆ ಪೋಸ್​ ನೀಡಿದ್ದು, ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ’ ಎಂದು ರಕ್ಷಿತ್​ ಶೆಟ್ಟಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

ಫೋಟೋ ನೋಡಿದ ಅನೇಕರು ಈ ಮೂವರಿಗೂ ಶುಭ ಹಾರೈಸಿದ್ದಾರೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ತಮ್ಮ ನಡುವಿನ ಕಿರಿಕ್​ ಮರೆತು ಒಂದಾಗಿರುವ ಈ ಸೆಲೆಬ್ರಿಟಿಗಳನ್ನು ಕಂಡು ಸ್ಯಾಂಡಲ್​ವುಡ್​ ಮಂದಿ ಖುಷಿಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಅದರ ಜೊತೆಗೆ ಇಲ್ಲಸಲ್ಲದ ವಿವಾದಗಳು ಹುಟ್ಟಿಕೊಂಡಾಗ ಚಿತ್ರರಂಗದ ಒಗ್ಗಟ್ಟಿಗೆ ಹೆಚ್ಚು ಧಕ್ಕೆ ಆಗುತ್ತದೆ. ಇಂಥದ್ದರ ನಡುವೆ ರಕ್ಷಿತ್​ ಶೆಟ್ಟಿ, ಲಹರಿ ವೇಲು ಅವರು ಕೋರ್ಟ್​ ಕೇಸ್​ಗಳನ್ನು ಬದಿಗಿಟ್ಟು ಮತ್ತೆ ಸ್ನೇಹಿತರಾಗಿರುವುದು ಒಳ್ಳೆಯ ಬೆಳವಣಿಗೆ.

ದಕ್ಷಿಣ ಭಾರತದಲ್ಲಿನ ಪ್ರಮುಖ ಆಡಿಯೋ ಸಂಸ್ಥೆಗಳಲ್ಲಿ ಲಹರಿ ಮ್ಯೂಸಿಕ್​ ಕೂಡ ಪ್ರಮುಖವಾದದ್ದು. ಸಾವಿರಾರು ಸೂಪರ್​ ಹಿಟ್​ ಹಾಡುಗಳು ಈ ಸಂಸ್ಥೆಯಿಂದ ಹೊರಬಂದಿವೆ. ಅದೇ ರೀತಿ ರಕ್ಷಿತ್​ ಶೆಟ್ಟಿ ಕೂಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ ಸಣ್ಣ ಕಿರಿಕ್​ನಿಂದ ಇಬ್ಬರೂ ಕೋರ್ಟ್​ ಮೆಟ್ಟಿಲು ಹತ್ತುವಂತಾಗಿದ್ದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಈಗ ಇಬ್ಬರ ನಡುವಿನ ವಿವಾದ ಬಗೆಹರಿದಿದ್ದು, ಸುಖಾಂತ್ಯ ಕಂಡಿದೆ. ಸದ್ಯ ‘777 ಚಾರ್ಲಿ’ ಚಿತ್ರದ ಕೆಲಸಗಳಲ್ಲಿ ರಕ್ಷಿತ್​ ಶೆಟ್ಟಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್​ ಬೆಂಬಲ; ಖಡಕ್​ ಎಚ್ಚರಿಕೆ ಕೊಟ್ಟ ರಕ್ಷಿತ್​ ಶೆಟ್ಟಿ

ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us