ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅವರನ್ನು ದ್ವೇಷಿಸುವವರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಕಾರಣ ಹಲವು. ಈಗ ಅವರನ್ನು ಟ್ರೋಲ್ ಮಾಡಲು ಹೊಸ ಕಾರಣ ಸಿಕ್ಕಿದೆ. ರಶ್ಮಿಕಾ ಅವರು ‘ನಾನು ಹೈದರಾಬಾದ್ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನು ಅನೇಕರು ಟ್ರೋಲ್ ಮಾಡುತ್ತಾ ಇದ್ದಾರೆ. ಅವರ ಹೇಳಿಕೆ ಚರ್ಚೆಗೆ ಕಾರಣ ಆಗಿದೆ.
ರಶ್ಮಿಕಾ ಮಂದಣ್ಣ ಅವರು ‘ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಇಂದು (ಫೆಬ್ರವರಿ 14) ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಈವೆಂಟ್ ಒಂದು ಮುಂಬೈನಲ್ಲಿ ನಡೆದಿತ್ತು. ಅದರಲ್ಲಿ ರಶ್ಮಿಕಾ ಅವರು ಈ ಮಾತನ್ನು ಹೇಳಿದರು. ರಶ್ಮಿಕಾಗೆ ಕರ್ನಾಟಕ ಸಂಪೂರ್ಣವಾಗಿ ಮರೆತು ಹೋಗಿದೆ ಎಂದು ಅನೇಕರು ಹೇಳಿದ್ದಾರೆ. ಈ ವಿಚಾರದಲ್ಲಿ ಅವರನ್ನು ವಹಿಸಿಕೊಂಡು ಮಾತನಾಡಿದವರು ಕಡಿಮೆ.
‘ನಾನು ಹೈದರಾಬಾದ್ನವಳು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದುಕೊಳ್ಳುತ್ತೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಕನ್ನಡಿಗರು ರಶ್ಮಿಕಾ ಬಗ್ಗೆ ಟೀಕೆ ಹೊರಹಾಕಿದ್ದಾರೆ.
‘ರಶ್ಮಿಕಾ ಯಾವಾಗ ಹೈದರಾಬಾದ್ನವರಾದರು? ಇದನ್ನು ಜನನ ಪ್ರಮಾಣಪತ್ರದಲ್ಲಿ ಸೇರಿಸಿದ್ದಾರಾ’ ಎಂದು ಕೆಲವರು ಕೇಳಿದ್ದಾರೆ. ಇನ್ನೂ ಕೆಲವರು, ‘ವಿಜಯ್ ದೇವರಕೊಂಡ ಅವರನ್ನು ವಿವಾಹ ಆಗುವ ಮೊದಲೇ ರಶ್ಮಿಕಾ ಹೈದರಾಬಾದ್ನವರಾಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ‘ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ‘ನಿಮ್ಮನ್ನು ದ್ವೇಷಿಸಲು ನಿತ್ಯ ಹೊಸ ಹೊಸ ಕಾರಣ ನೀಡುತ್ತೀರಿ’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೆ ರಶ್ಮಿಕಾ ಮಂದಣ್ಣ ಎಂಟ್ರಿ; ಸ್ಪರ್ಧೆಗೆ ಇಳಿದವರು ಯಾರ್ಯಾರು?
ರಶ್ಮಿಕಾ ಮಂದಣ್ಣ ಅವರು ಈ ರೀತಿಯ ಹೇಳಿಕೆಯನ್ನು ಈ ಮೊದಲಿನಿಂದಲೂ ನೀಡುತ್ತಾ ಬರುತ್ತಿದ್ದಾರೆ. ಈ ಮೊದಲು ಅವರು ‘ನನಗೆ ಕನ್ನಡವೂ ಬರಲ್ಲ’ ಎಂದು ಸಂದರ್ಶನ ಒಂದರಲ್ಲಿ ಹೇಳಿ ಟೀಕೆಗೆ ಗುರಿಯಾಗಿದ್ದರು. ಈಗ ಅವರ ಮೇಲೆ ದ್ವೇಷ ಹೆಚ್ಚುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.