ದರ್ಶನ್-ಯಶ್ ಮನೆಗೆ ಹೋಗ್ಬೇಕಾಗುತ್ತೆ ಅಷ್ಟೆ: ರವಿಚಂದ್ರನ್ ಗರಂ

ಕನ್ನಡ ಚಿತ್ರರಂಗ ಉಳಿಸಲು ಸ್ಟಾರ್ ನಟರು ವರ್ಷಕ್ಕೆ ಎರಡು-ಮೂರು ಸಿನಿಮಾಗಳನ್ನು ಮಾಡಬೇಕು ಎಂಬ ಒತ್ತಾಯದ ಬಗ್ಗೆ ನಟ ರವಿಚಂದ್ರನ್ ತುಸು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್-ಯಶ್ ಹೆಸರನ್ನು ಸಹ ಉಲ್ಲೇಖ ಮಾಡಿದ್ದಾರೆ.

ದರ್ಶನ್-ಯಶ್ ಮನೆಗೆ ಹೋಗ್ಬೇಕಾಗುತ್ತೆ ಅಷ್ಟೆ: ರವಿಚಂದ್ರನ್ ಗರಂ

Updated on: May 26, 2024 | 9:35 AM

ಕನ್ನಡ ಸಿನಿಮಾಗಳನ್ನು (Sandalwood) ನೋಡಲು ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲವೆಂದು ದೂರು ಇತ್ತೀಚೆಗೆ ತುಸು ಜೋರಾಗಿ ಕೇಳಿ ಬರುತ್ತಿದೆ. ಐಪಿಎಲ್, ಲೋಕಸಭೆ ಚುನಾವಣೆ, ಸ್ಟಾರ್ ನಟರ ಸಿನಿಮಾಗಳ ಕೊರತೆಯಿಂದಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನಷ್ಟದಲ್ಲಿವೆ ಎನ್ನಲಾಗುತ್ತಿದೆ. ಇತ್ತೀಚೆಗೆ ಫಿಲಂ ಚೇಂಬರ್​ನವರು ಸಭೆ ನಡೆಸಿ, ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವಂತೆ ಒತ್ತಾಯಿಸಲು ನಿರ್ಣಯಿಸಿರುವ ಸುದ್ದಿ ಹರಿದಾಡಿತು. ಈ ಬಗ್ಗೆ ಮಾತನಾಡಿರುವ ನಟ ರವಿಚಂದ್ರನ್ (Ravichandran), ತುಸು ಖಾರವಾಗಿಯೇ ಮಾತನಾಡಿದ್ದಾರೆ. ಒಳ್ಳೆಯ ಸಿನಿಮಾಗಳ ಕೊರತೆಯಿಂದ ಕನ್ನಡ ಚಿತ್ರರಂಗ ಬಳಲುತ್ತಿರುವುದಾಗಿ ನೇರವಾಗಿ ಹೇಳಿದ್ದಾರೆ. ದರ್ಶನ್-ಯಶ್ ಉಲ್ಲೇಖವನ್ನೂ ಸಹ ಮಾಡಿದ್ದಾರೆ.

ರವಿಚಂದ್ರನ್ ನಟಿಸಿರುವ ‘ದಿ ಜಡ್ಜ್​ಮೆಂಟ್’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದು ಸುದ್ದಿಗೋಷ್ಠಿಯ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರವಿಚಂದ್ರನ್, ‘ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲವೆಂಬ ಆರೋಪದ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ‘ಒಳ್ಳೆಯ ಸಿನಿಮಾಗಳನ್ನು ಮಾಡಿ ಯಾಕೆ ಜನ ಬರೊಲ್ಲ. ಇಲ್ಲಿ ಕತೆ ಚೆನ್ನಾಗಿಲ್ಲ, ಮಲಯಾಳಂ ಕತೆಗಳು ಚೆನ್ನಾಗಿವೆ ಎಂದಾದರೆ ಕೇರಳಕ್ಕೆ ಹೋಗಿ ಅಲ್ಲಿಂದ ಕತೆಗಳನ್ನು ಖರೀದಿಸಿ ತೆಗೆದುಕೊಂಡು ಬಂದು ಸಿನಿಮಾ ಮಾಡಿ, ಯಾಕೆ ಆಗುವುದಿಲ್ಲ. ಮೊದಲು ಸಿನಿಮಾ ಮಾಡಿ, ಸಿನಿಮಾ ಮಾಡದೆ ಜನರಿಗೆ ಬನ್ನಿ ಎಂದರೆ ಯಾಕೆ ಬರುತ್ತಾರೆ?’ ಎಂದು ಪ್ರಶ್ನೆ ಮಾಡಿದರು.

ಸ್ಟಾರ್ ನಟರು ವರ್ಷಕ್ಕೆ ಮೂರು ಸಿನಿಮಾ ಮಾಡಬೇಕು, ಎಂಬ ಒತ್ತಾಯದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ರವಿಚಂದ್ರನ್, ‘ವರ್ಷಕ್ಕೆ ನಾನು ಹತ್ತು ಸಿನಿಮಾ ಬೇಕಾದರೂ ಮಾಡುತ್ತೀನಿ, ನನ್ನನ್ನು ಬಂದು ಸಂಪರ್ಕಿಸಿ ಎಂದ ಕ್ರೇಜಿಸ್ಟಾರ್, ‘ಯಶ್ಸೇ ಬೇಕು, ದರ್ಶನ್​ ಬೇಕು ಅಂದರೆ ಆಗಲ್ಲ. ಅವರು ಎಷ್ಟು ಸಿನಿಮಾ ಮಾಡಬೇಕು ಎಂಬುದು ಅವರ ಆಯ್ಕೆ. ಅವರದ್ದು ಒಂದು ಲೆಕ್ಕಾಚಾರ ಇರುತ್ತದೆ. ಅವರದ್ದು ಒಂದು ಬ್ರ್ಯಾಂಡ್ ವ್ಯಾಲ್ಯು ಇರುತ್ತದೆ. ಅದನ್ನೆಲ್ಲ ಯೋಚನೆ ಮಾಡಿಯೇ ಅವರು ಸಿನಿಮಾ ಮಾಡೋದು’ ಎಂದಿದ್ದಾರೆ ರವಿಚಂದ್ರನ್.

ಇದನ್ನೂ ಓದಿ:‘ನಿಜ ಜೀವನದಲ್ಲೂ ಕಟಕಟೆ ಹತ್ತಿದ್ದೀನಿ’ ಹಳೆ ಕೇಸು ನೆನಪಿಸಿಕೊಂಡ ರವಿಚಂದ್ರನ್

‘ವರ್ಷಕ್ಕೆ ಯಶ್ ಮೂರು ಸಿನಿಮಾ. ದರ್ಶನ್ ಮೂರು ಸಿನಿಮಾ ಮಾಡಲು ಪ್ರಾರಂಭಿಸಿದರೆ ಎರಡು ವರ್ಷಕ್ಕೆ ಅವರನ್ನೆಲ್ಲ ಮನೆಗೆ ಕಳಿಸಿಬಿಡುತ್ತಾರೆ ಅಷ್ಟೆ. ಅವರಿಗೆ ಅವರದ್ದೇ ಆದ ಆಯ್ಕೆಗಳಿವೆ, ಅವರದ್ದೇ ಆದ ಬಜೆಟ್ ಇದೆ. ನೀನು ಇಷ್ಟೇ ಸಿನಿಮಾ ಮಾಡಬೇಕು, ಇಷ್ಟೇ ಮಾಡಬಾರದು ಎಂದು ಯಾರೂ ಯಾರನ್ನೂ ಫೋರ್ಸ್ ಮಾಡುವಂತೆ ಇಲ್ಲ. ‘ಕೆಜಿಎಫ್’ ಅಂಥಹಾ ಸಿನಿಮಾ ಕೊಟ್ಟಮೇಲೆ ಅದಕ್ಕಿಂತಲೂ ಉತ್ತಮವಾಗಿರುವುದನ್ನು ಕೊಡುವುದು ಯಶ್ ಯೋಚನೆಯಾಗಿರುತ್ತದೆ, ‘ಕಾಟೇರ’ ಬಳಿಕ ಏನು ಕೊಡಬೇಕು ಎಂಬುದು ದರ್ಶನ್​ಗೆ ಗೊತ್ತಿದೆ. ನಾಯಕರಿಗೆ ಅವರದ್ದೇ ಆದ ಯೋಚನೆಗಳಿವೆ, ಅವರನ್ನು ಇಷ್ಟು ಸಿನಿಮಾ ಮಾಡಿ, ಅಷ್ಟು ಸಿನಿಮಾ ಮಾಡಿ ಎಂದು ಫೋರ್ಸ್ ಮಾಡುವಂತಿಲ್ಲ’ ಎಂದಿದ್ದಾರೆ ರವಿಚಂದ್ರನ್.

‘ಹಣಕ್ಕಾಗಿ ಅವರೆಲ್ಲ ಸಿನಿಮಾ ಮಾಡುತ್ತಿಲ್ಲ. ಒಳ್ಳೆಯ ಸಿನಿಮಾ ಕೊಟ್ಟರೆ, ಬ್ರ್ಯಾಂಡ್ ಉಳಿಸಿಕೊಂಡರೆ ಹಣ ತಾನಾಗೆ ಬರುತ್ತದೆ ಎಂದು ಅವರಿಗೆಲ್ಲ ಗೊತ್ತಿದೆ. ನನ್ನಂಥಹವಾದರೆ ಸಿಕ್ಕ ಸಿನಿಮಾಗಳೆಲ್ಲ ಒಪ್ಪಿಕೊಳ್ಳುತ್ತೇವೆ. ಅವರ ಬಳಿ ಹೋಗಿ ಒಪ್ಪಿಸಿ ನೋಡಿ. ಆಗುವುದಿಲ್ಲ. ಸರಿಯಾದ ಕತೆ ಇದ್ದರೆ ಮಾತ್ರ ಅವರೆಲ್ಲ ಸಿನಿಮಾ ಮಾಡೋದು, ಯಾರು ಸ್ಟಾರ್ ನಟರು ಹೆಚ್ಚು ಸಿನಿಮಾ ಮಾಡಬೇಕು ಎನ್ನುತ್ತಾರೋ ಅವರು ಹೋಗಿ ಅವರಿಗೆ ಕತೆ ಒಪ್ಪಿಸಲಿ ನೋಡೋಣ’ ಎಂದಿದ್ದಾರೆ ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 am, Sun, 26 May 24

Loading...
Unable to load recommendations.
Follow Us