ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಹಾಗೂ ಇತರರ ಜಾಮೀನು ಅರ್ಜಿ ವಜಾ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಎಲ್ಲ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದೆ.

ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಹಾಗೂ ಇತರರ ಜಾಮೀನು ಅರ್ಜಿ ವಜಾ

Updated on: Aug 31, 2024 | 7:35 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವರು ಜಾಮೀನು ಕೋಟಿ ಅರ್ಜಿ ಸಲ್ಲಿಸಿದ್ದರು. ಕೆಲ ದಿನದ ಹಿಂದೆ ಆರೋಪಿಗಳ ಪರ ವಕೀಲರುಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಸರ್ಕಾರಿ ವಕೀಲರು ಜಾಮೀನು ನೀಡಬಾರದೆಂದು ವಾದ ಮಂಡಿಸಿದ್ದರು. ಎರಡೂ ಪಕ್ಷಗಳ ಪರ ವಾದ ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಆಗಸ್ಟ್ 31 ಅಂದರೆ ಇಂದಿಗೆ ಕಾಯ್ದಿರಿಸಿದ್ದರು. ಇಂದು ಆದೇಶ ಹೊರಬಿದ್ದಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಿಸಲಾಗಿದೆ.

ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ10 ಆರೋಪಿ ಸ್ಟೋನಿ ಬ್ರೂಕ್ ಮಾಲೀಕ ವಿನಯ್, ಕಾರು ಚಾಲಕ ಅನುಕುಮಾರ್, ಕೇಶವಮೂರ್ತಿ ಅವರುಗಳು ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೂರು ದಿನದ ಹಿಂದೆ ಆರೋಪಿಗಳ ವಾದ ಮಂಡಿಸಿದ್ದ ವಕೀಲರು ಪವಿತ್ರಾ ಗೌಡ ಅವರದ್ದು ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ. ರೇಣುಕಾ ಸ್ವಾಮಿ ಕಳಿಸಿದ್ದ ಸಂದೇಶವನ್ನು ಎ3 ಆಗಿರುವ ಪವನ್, ದರ್ಶನ್​ಗೆ ಹೇಳಿದ, ರೇಣುಕಾ ಸ್ವಾಮಿ ಅಪಹರಣ ಆದ ದಿನವೂ ಸಹ ದರ್ಶನ್ ತನ್ನ ಮನೆಗೆ ವಿನಯ್ ಜೊತೆ ಬಂದು ನನ್ನನ್ನು ಆ ಸ್ಥಳಕ್ಕೆ ಕರೆದುಕೊಂಡು ಹೋದ. ರೇಣುಕಾ ಸ್ವಾಮಿ, ಶ್ವಾಸಕೋಶದ ಮೂಳೆ ಮುರಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ರೇಣುಕಾ ಸ್ವಾಮಿಯ ಮೂಳೆ ಮುರಿತಕ್ಕೂ ಪವಿತ್ರಾ ಗೌಡಗೂ ಸಂಬಂಧವಿಲ್ಲ, ಆಕೆ ಮಹಿಳೆಯಾಗಿದ್ದು, ಆಕೆಗೆ ಅಪ್ರಾಪ್ತ ಮಗಳಿದ್ದಾಳೆ ಹಾಗಾಗಿ ನ್ಯಾಯಾಲಯ ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ವಾದ ಮಂಡಿಸಿದ್ದರು.

ಇದನ್ನೂ ಓದಿ:ಆಗಸ್ಟ್ 31ಕ್ಕೆ ಪವಿತ್ರಾ ಗೌಡ ಜಾಮೀನು ಅರ್ಜಿ ಆದೇಶ, ಮಂಡಿಸಿದ ವಾದವೇನು?

ಆದರೆ ಸರ್ಕಾರಿ ವಕೀಲರು ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡುವಂತಿಲ್ಲ ಎಂದಿದ್ದಲ್ಲದೆ ಸುಪ್ರೀಂಕೋರ್ಟ್​ನ ಕೆಲವು ಆದೇಶಗಳನ್ನು ಸಹ ಉಲ್ಲೇಖಿಸಿದರು. ಅಲ್ಲದೆ, ಪ್ರಕರಣದ ಎಲ್ಲ ಆರೋಪಿಗಳೂ ಸಹ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಸಹ ಕೆಟ್ಟ ಉದ್ದೇಶಗಳು ಇದ್ದವು ಎಂದು ವಾದ ಮಂಡಿಸಿದ್ದರು. ಹಾಗಾಗಿ ಜಾಮೀನು ನೀಡಬಾರದು ಎಂದಿದ್ದರು. ಇಂದು ಆದೇಶ ಪ್ರಕಟಿಸಿರುವ 57ನೇ ಸಿಸಿಎಚ್ ನ್ಯಾಯಾಲಯ ಎಲ್ಲ ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us