ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಸಾಕ್ಷಿಗೆ ಧಮ್ಕಿ; ಪ್ರಭಾವಿಗಳ ಹೆಸರು ಹೇಳಿದ ಬಂಧಿತ ದರ್ಶನ್ ಫ್ಯಾನ್ಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಂದೀಪ್‌ಗೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿಗಳಾದ ಪುನೀತ್, ಸುಹಾಸ್ ಮತ್ತು ವೇಣು ಎಂಬುವವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ವಾಟ್ಸಾಪ್ ಕರೆಗಳ ಮೂಲಕ ಸಂಚು ರೂಪಿಸಿದ್ದವರ ಹೆಸರು ಹೊರ ಬಿದ್​ದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಸಾಕ್ಷಿಗೆ ಧಮ್ಕಿ; ಪ್ರಭಾವಿಗಳ ಹೆಸರು ಹೇಳಿದ ಬಂಧಿತ ದರ್ಶನ್ ಫ್ಯಾನ್ಸ್
ದರ್ಶನ್-ರೇಣುಕಾಸ್ವಾಮಿ

Updated on: Jul 13, 2026 | 2:41 PM

ಮುಖ್ಯಾಂಶಗಳು

  • ಪ್ರಕರಣದ ಪ್ರಮುಖ ಸಾಕ್ಷಿಗೆ ಪ್ರಾಣ ಬೆದರಿಕೆ
  • ಕಾಮಾಕ್ಷಿಪಾಳ್ಯ ಪೊಲೀಸರಿಂದ ದರ್ಶನ್ ಅಭಿಮಾನಿಗಳ ಬಂಧನ
  • ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಂಟು

ಬೆಂಗಳೂರು ಜುಲೈ, 13: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲೇ ಇದೆ. ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ (Darshan) ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಪ್ರಕರಣದ ಹಿಂದೆ ಇರುವ ಪ್ರಭಾವಿಗಳ ಹೆಸರು ಹೊರಬಿದ್ದಿದೆ.

ಪುನೀತ್, ಸುಹಾಸ್ ಮತ್ತು ವೇಣು ಬಂಧಿತ ದರ್ಶನ್ ಅಭಿಮಾನಿಗಳು. ಇವರ ಪೈಕಿ ಪುನೀತ್​ ಎಂಬಾತ, ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಎಂಬುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ. ಪೊಲೀಸರ ಕಣ್ಣು ತಪ್ಪಿಸಲು ಇವರು ಸಾಮಾನ್ಯ ಕರೆಯ ಬದಲಾಗಿ ವಾಟ್ಸಾಪ್ ಕರೆ ಮೂಲಕ ಮಾತುಕತೆ ನಡೆಸಿ, ಬೆದರಿಕೆ ಹಾಕಲು ಪ್ಲ್ಯಾನ್ ಮಾಡಿದ್ದರು.

Darshan Fans Threatening Witness Case: ಆರೋಪಿಗಳ ವಿಚಾರಣೆ ವೇಳೆ ಪ್ರಭಾವಿ ವ್ಯಕ್ತಿಗಳ ನಂಟು ಪತ್ತೆ!

ಗೌರವ್ ಶೆಟ್ಟಿ ಎಂಬಾತ ಸಂಜಯನಗರದ ಪ್ರಮುಖ ಬಾರ್ ಮಾಲೀಕನೊಬ್ಬನ ಆಪ್ತ ಸ್ನೇಹಿತ. ಈ ಇಡೀ ಸಾಕ್ಷಿ ನಾಶ ಮತ್ತು ಬೆದರಿಕೆ ತಂತ್ರದಲ್ಲಿ ಆ ಬಾರ್ ಮಾಲೀಕ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪುನೀತ್ ಅರೆಸ್ಟ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಗೌರವ್ ಶೆಟ್ಟಿ ಹಾಗೂ ಕಿರಣ್ ರೆಡ್ಡಿ ಸದ್ಯ ತಲೆಮರೆಸಿಕೊಂಡು ಪರಾರಿಯಾಗಿದ್ದಾರೆ.ಇವರಿಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:  ಸಾಕ್ಷಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ದರ್ಶನ್ ಅಭಿಮಾನಿಗಳು; ಈ ಮೂವರ ಹಿನ್ನೆಲೆ ಏನು?

ನಾಟಕೀಯವಾಗಿ ನಡೆದಿತ್ತು ಕಿಡ್ನಾಪ್, ಪ್ರಾಣ ಬೆದರಿಕೆ

ಸಾಕ್ಷಿದಾರ ಸಂದೀಪ್ ಅವರೊಂದಿಗೆ ಮಾತುಕತೆ ನಡೆಸುವ ನೆಪದಲ್ಲಿ ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಈ ಗ್ಯಾಂಗ್, ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದೆ. ಈ ವೇಳೆ ನ್ಯಾಯಾಲಯದಲ್ಲಿ ದರ್ಶನ್ ವಿರುದ್ಧ ಸಾಕ್ಷಿ ನುಡಿಯದಂತೆ ತೀವ್ರ ಒತ್ತಡ ಹೇರಲಾಗಿದೆ. ಸಂದೀಪ್ ಇದಕ್ಕೆ ಒಪ್ಪದಿದ್ದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ನಟ ದರ್ಶನ್ ಹೆಸರು ಹೇಳಿ ನೇರವಾಗಿ ಪ್ರಾಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಸಾಕ್ಷಿಗೆ ಬಿಗಿ ರಕ್ಷಣೆ ನೀಡಿ ಬೆದರಿಕೆ ಹಾಕಿದವರಿಗಾಗಿ ಜಾಲ ಬೀಸಿದ್ದರು.

ಸಿಕ್ಕಿಬಿದ್ದ ‘ಡಿ ಕಂಪನಿ’ ಫ್ಯಾನ್ ಪೇಜ್ ಅಡ್ಮಿನ್ ಮತ್ತು ಗ್ಯಾಂಗ್

ಕಾಮಾಕ್ಷಿಪಾಳ್ಯ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಯಲ್ಲಿ ವೇಣು, ಸುಹಾಸ್ ಮತ್ತು ಪುನೀತ್ ಎಂಬ ಮೂವರು ಆರೋಪಿಗಳು ಅರೆಸ್ಟ್ ಆಗಿದ್ದರು. ಇವರ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

(ವರದಿ: ವಿಕಾಸ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:38 pm, Mon, 13 July 26

Loading...
Unable to load recommendations.
Follow Us