ಶಿವಣ್ಣನಿಗೆ ‘ಮಫ್ತಿ’ ಒಪ್ಪಿಕೊಳ್ಳಲು ಇತ್ತು ಅಳುಕು, ಕಾರಣ ಆ ಒಂದು ದೃಶ್ಯ

Shiva Rajkumar: ‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಭೈರತಿ ರಣಗಲ್ ಪಾತ್ರ ಅಭಿಮಾನಿಗಳ ಮೆಚ್ಚಿನ ಪಾತ್ರವಾಗಿತ್ತು. ಆದರೆ ‘ಮಫ್ತಿ’ ಸಿನಿಮಾವನ್ನು ಶಿವರಾಜ್ ಕುಮಾರ್ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರು. ಕಾರಣ ಆ ಒಂದು ಸೀನ್.

ಶಿವಣ್ಣನಿಗೆ ‘ಮಫ್ತಿ’ ಒಪ್ಪಿಕೊಳ್ಳಲು ಇತ್ತು ಅಳುಕು, ಕಾರಣ ಆ ಒಂದು ದೃಶ್ಯ

Updated on: Nov 14, 2024 | 5:12 PM

ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನಾಳೆ ಅಂದರೆ ನವೆಂಬರ್ 15 ರಂದು ತೆರೆಗೆ ಬರುತ್ತಿದೆ. 2017 ರಲ್ಲಿ ಬಿಡುಗಡೆ ಆಗಿದ್ದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಈ ಸಿನಿಮಾ. ‘ಮಫ್ತಿ’ ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಬರುವ ಭೈರತಿ ರಣಗಲ್ ಪಾತ್ರವನ್ನೇ ಆಧರಿಸಿ ಈ ಸಿನಿಮಾ ಕಟ್ಟಲಾಗಿದೆ. ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರ ಇಂಟರ್ವೆಲ್​ ಬಳಿಕ ಬರುತ್ತದೆ. ಹೆಚ್ಚು ಸಮಯ ತೆರೆಯ ಮೇಲೆ ಇರುವುದಿಲ್ಲ, ಪೂರ್ಣ ಪ್ರಮಾಣದ ನಾಯಕ ಪಾತ್ರವಲ್ಲ ಹಾಗಿದ್ದರೂ ಶಿವಣ್ಣ ಅದನ್ನು ಒಪ್ಪಿಕೊಂಡು ಅದ್ಭುತವಾಗಿ ನಿರ್ವಹಿಸಿದ್ದರು. ಆದರೆ ಆ ಪಾತ್ರ ಒಪ್ಪಿಕೊಳ್ಳುವ ಮುಂಚೆ ಸಾಕಷ್ಟು ಅಳುಕು ಶಿವಣ್ಣನಿಗೆ ಇತ್ತಂತೆ.

ನನಗೆ ಪಾತ್ರ ಇಷ್ಟವಾಗಿತ್ತು. ಆದರೆ ಗೀತಾಗೆ ತುಸು ಅಳುಕು ಇತ್ತು, ಇಂಟರ್ವೆಲ್ ಆದ ಮೇಲೆ ಪಾತ್ರ ಬರುತ್ತೆ, ವಿಲನ್ ಶೇಡ್​ ಇದೆ, ಹೆಚ್ಚು ಡೈಲಾಗ್​ಗಳು ಸಹ ಇಲ್ಲ. ಫೈಟ್​ಗಳು ಕಡಿಮೆ ಇದೆ. ಕೊನೆಯಲ್ಲಿ ಜೈಲಿಗೆ ಹೋಗುತ್ತದೆ, ನಿಜಕ್ಕೂ ಜನರಿಗೆ ಇಷ್ಟವಾಗುತ್ತದೆಯಾ? ಅಥವಾ ಒಂದು ವೇಳೆ ಜನರಿಗೆ ಇಷ್ಟವಾಗಲಿಲ್ಲವಾದರೆ ಇದು ನಾಯಕ ಶ್ರೀಮುರಳಿಗೆ ನೆಗೆಟಿವ್ ಆಗಿ ಪರಿಣಮಿಸಿಬಿಡುತ್ತದೆ ಎಂಬ ಅಳುಕು ಇತ್ತಂತೆ.

ಶಿವಣ್ಣನಿಗೆ ಶ್ರೀಮುರಳಿಗೆ ನೆಗೆಟಿವ್ ಆಗಿಬಿಟ್ಟಿರೆ ಎಂಬ ಅಳುಕಿನ ಹೊರತಾಗಿ ಇನ್ನೊಂದು ಭಯ ಇತ್ತಂತೆ. ನರ್ತನ್ ಮೊದಲ ಬಾರಿ ಕತೆ ಹೇಳಿದಾಗ ಭೈರತಿ ರಣಗಲ್ ಪಾತ್ರ ತನ್ನ ಸ್ವಂತ ಮಗನನ್ನೇ ಕೊಂದಿರುತ್ತಾನೆ ಎಂದಿತ್ತಂತೆ. ಅದೇ ಕಾರಣಕ್ಕೆ ತನ್ನ ಮಗನ ವಯಸಿನವಾದ ನಾಯಕ ಶ್ರೀಮುರಳಿ ಪಾತ್ರಕ್ಕೆ ಹತ್ತಿರವಾಗುತ್ತಾನೆ ಎಂದಿತ್ತಂತೆ. ಅದು ಶಿವಣ್ಣನಿಗೆ ಸರಿಬರಲಿಲ್ಲವಂತೆ. ತನ್ನ ಸ್ವಂತ ಮಗನನ್ನೇ ಕೊಲ್ಲುವುದು ಜನ ಒಪ್ಪುವುದಿಲ್ಲ, ಅದರಲ್ಲೂ ನಾನು ಹಾಗೆ ಮಾಡಿದರೆ ಜನ ಸಹಿಸುವುದಿಲ್ಲ ಅನಿಸುತ್ತೆ ಅದೊಂದು ಬದಲಾವಣೆ ಮಾಡು ಎಂದರಂತೆ.

ಇದನ್ನೂ ಓದಿ:ಶಕ್ತಿಧಾಮದ ಮಕ್ಕಳಿಗಾಗಿ ಶಿಕ್ಷಕಿಯಾದ ಗೀತಾ ಶಿವರಾಜ್ ಕುಮಾರ್

ಶಿವಣ್ಣ ಸಲಹೆಯಂತೆ, ತಂಗಿಯ ಪತಿಯನ್ನು ಕೊಲ್ಲುವ ಸೀನ್​ ಸೃಷ್ಟಿಸಲಾಯ್ತಂತೆ. ಶಿವಣ್ಣನಿಗೆ, ‘ಮಫ್ತಿ’ ಸಿನಿಮಾದ ಕತೆ ಕೇಳಿದಾಗ ಭೈರತಿ ರಣಗಲ್ ಪಾತ್ರದ ಮೌನ ಬಹಳ ಇಷ್ಟವಾಗಿತ್ತಂತೆ. ಹೆಚ್ಚು ಮಾತನಾಡುವುದಿಲ್ಲ ಬಹುತೇಕ ಮೌನವಾಗಿಯೇ ಇರುತ್ತಾನೆ. ಆ ಮೌನ, ಹೆಚ್ಚು ಆಕ್ಟ್ ಮಾಡಲು ಅವಕಾಶ ಕೊಡುತ್ತದೆ ಅನಿಸಿತ್ತಂತೆ. ಭೈರತಿ ರಣಗಲ್ ಪಾತ್ರ ಒಪ್ಪಿಕೊಳ್ಳಲು ಅದೂ ಒಂದು ಕಾರಣವಂತೆ.

ಇದೀಗ ‘ಭೈರತಿ ರಣಗಲ್’ ಸಿನಿಮಾ ನಾಳೆ ಅಂದರೆ ನವೆಂಬರ್ 15 ಬಿಡುಗಡೆ ಆಗಲಿದೆ. ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಸಿನಿಮಾವನ್ನು ಶಿವಣ್ಣನ ಹೋಮ್ ಬ್ಯಾನರ್ ಗೀತಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us